ಡಾಲರ್ ಅಕ್ರಮ ಸಾಗಣೆ ಪ್ರಕರಣ: ಕಸ್ಟಮ್ಸ್ ಅಧಿಕಾರಿಗಳಿಂದ ಕೇರಳ ಸ್ಪೀಕರ್ ವಿಚಾರಣೆ
ತಿರುವನಂತಪುರಂ: ಡಾಲರ್ ಅಕ್ರಮ ಸಾಗಣೆ ಪ್ರಕರಣದಲ್ಲಿ ಕೇರಳ ಸ್ಪೀಕರ್ ನ್ನು ಕಸ್ಟಮ್ಸ್ ಅಧಿಕಾರಿಗಳು 5 ಗಂಟೆಗಳ ವರೆಗೂ ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಬೇಕೆಂದು ಸ್ಪೀಕರ್ ಪಿ.ಶ್ರೀರಾಮಕೃಷ್ಣನ್ ಗೆ ಈ ಹಿಂದೆಯೇ ಹಲವು ಬಾರಿ ನೊಟೀಸ್ ಜಾರಿಗೊಳಿಸಲಾಗಿತ್ತಾದರೂ ಆರೋಗ್ಯದ ಕಾರಣಗಳನ್ನು ನೀಡಿ ಸ್ಪೀಕರ್ ವಿಚಾರಣೆಗೆ ಬಂದಿರಲಿಲ್ಲ. ಈ ಕಾರಣದಿಂದಾಗಿ ಕಸ್ಟಮ್ಸ್ ಅಧಿಕಾರಿಗಳೇ ಸ್ಪೀಕರ್ ಅಧಿಕೃತ ನಿವಾಸಕ್ಕೆ ತೆರಳಿ ವಿಚಾರಣೆ ನಡೆಸಿದ್ದಾರೆ.
5 ತಾಸುಗಳು ವಿಚಾರಣೆ ನಡೆದಿದ್ದು ಅಗತ್ಯ ಎದುರಾದಲ್ಲಿ ಮತ್ತೆ ವಿಚಾರಣೆಗೆ ಹಾಜರಾಗಬೇಕೆಂದು ಕಸ್ಟಮ್ಸ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ನಡುವೆ ಸ್ಪೀಕರ್ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ ಎಂಬ ವದಂತಿ ಹಬ್ಬಿದ್ದ ಹಿನ್ನೆಲೆಯಲ್ಲಿ ಫೇಸ್ ಬುಕ್ ಲೈವ್ ಬಂದಿದ್ದ ಸ್ಪೀಕರ್ ತಮ್ಮ ಆತ್ಮಹತ್ಯೆ ವದಂತಿಯ ಬಗ್ಗೆ ಸ್ಪಷ್ಟನೆ ನೀಡಿದರಾದರೂ ಕಸ್ಟಮ್ಸ್ ಅಧಿಕಾರಿಗಳ ವಿಚಾರಣೆ ಬಗ್ಗೆ ಮಾತನಾಡಲಿಲ.
ಸ್ವಪ್ನ ಸುರೇಶ್ ಹಾಗೂ ಸರಿತ್ ಪಿಎಸ್ ಎಂಬುವವರ ಹೇಳಿಕೆಯಿಂದಾಗಿ ಡಾಲರ್ಸ್ ಅಕ್ರಮ ಸಾಗಣೆ ಪ್ರಕರಣದಲ್ಲಿ ಸ್ಪೀಕರ್ ವಿರುದ್ಧ ಆರೋಪ ಕೇಳಿಬಂದಿತ್ತು. ತಿರುವನಂತಪುರಂ ನಲ್ಲಿ ಯುಎಇಯ ಪ್ರತಿನಿಧಿಗೆ ಸ್ಪೀಕರ್ ಕರೆನ್ಸಿಗಳನ್ನು ಇಟ್ಟಿದ್ದ ಬ್ಯಾಗ್ ನ್ನು ನೀಡಿದ್ದರು ಎಂದು ಇಬ್ಬರೂ ಮಾಹಿತಿಯನ್ನು ಬಹಿರಂಗಪಡಿಸಿದ್ದರು. 2019 ರಲ್ಲಿ ನಡೆದ ಈ ಘಟನೆಯಲ್ಲಿ ಯುಎಇ ರಾಯಭಾರಿ ಕಚೇರಿ ಅಧಿಕಾರಿ 1.9 ಲಕ್ಷ ಯುಎಸ್ ಡಾಲರ್ ನ್ನು ಕಳ್ಳಸಾಗಣೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.
"ಓಮನ್ ನಲ್ಲಿ ಹೂಡಿಕೆ ಮಾಡಿದ್ದ ಸ್ಪೀಕರ್, ಶಾರ್ಜಾದಲ್ಲಿ ವಿದ್ಯಾಸಂಸ್ಥೆ ಪ್ರಾರಂಭಿಸಲು ಹಾಗೂ ಅದಕ್ಕಾಗಿ ಶಾರ್ಜಾದಲ್ಲಿ ಭೂಮಿ ಪಡೆಯುವ ಸಂಬಂಧ ತಿರುವನಂತಪುರಂ ನಲ್ಲಿ ಶಾರ್ಜಾದ ರಾಜಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿದ್ದರು. ಅಷ್ಟೇ ಅಲ್ಲದೇ ತಮ್ಮೊಂದಿಗೂ ಸ್ಪೀಕರ್ ದುರುದ್ದೇಶದಿಂದ ಮಾತನಾಡಿದ್ದರು ಎಂದು ಸ್ವಪ್ನ ಆರೋಪಿಸಿದ್ದರು.