ಹೈಕೋರ್ಟ್ ತರಾಟೆ ನಂತರ, ನ್ಯಾಯಾಧೀಶರಿಗಾಗಿ ಅಶೋಕ ಹೋಟೆಲ್ನಲ್ಲಿ ಕೋವಿಡ್ ಸೌಲಭ್ಯ ಆದೇಶ ಹಿಂಪಡೆದ ಕೇಜ್ರಿವಾಲ್ ಸರ್ಕಾರ
ನವದೆಹಲಿ: ದೆಹಲಿ ಹೈಕೋರ್ಟ್ ನ್ಯಾಯಾಧೀಶರು, ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಪಂಚತಾರಾ ಹೋಟೆಲ್ನಲ್ಲಿ 100 ಕೋಣೆಗಳ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸುವ ಆಡಳಿತಾತ್ಮಕ ಆದೇಶವನ್ನು ಹಿಂಪಡೆಯಲು ದೆಹಲಿ ಸರ್ಕಾರ ಮಂಗಳವಾರ ನಿರ್ದೇಶನ ನೀಡಿದೆ.
ಅಂತಹ ಸೌಲಭ್ಯ ನೀಡುವಂತೆ ನಾವು ಯಾವುದೇ ಮನವಿ ಮಾಡಿಲ್ಲ ಎಂದು ನ್ಯಾಯಪೀಠ ತರಾಟೆಗೆ ತೆಗೆದುಕೊಂಡ ನಂತರ ದೆಹಲಿ ಸರ್ಕಾರ ತನ್ನ ಆದೇಶವನ್ನು ಹಿಂಪಡೆದಿದೆ.
ಅಶೋಕ ಹೋಟೆಲ್ನಲ್ಲಿ ನ್ಯಾಯಾಧೀಶರಿಗಾಗಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸುವ ಆದೇಶವನ್ನು ಹಿಂಪಡೆಯಲು ನಿರ್ದೇಶನ ನೀಡಲಾಗಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಡರಾತ್ರಿ ಟ್ವೀಟ್ ಮಾಡಿದ್ದಾರೆ.
ಏಪ್ರಿಲ್ 25 ರಂದು ಚಾಣಕ್ಯಪುರಿ ಉಪವಿಭಾಗ ಮ್ಯಾಜಿಸ್ಟ್ರೇಟ್ ಹೊರಡಿಸಿದ ಆದೇಶದಲ್ಲಿ, ದೆಹಲಿ ಹೈಕೋರ್ಟ್ನ ಕೋರಿಕೆಯ ಮೇರೆಗೆ ಅಶೋಕ ಹೋಟೆಲ್ನಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲಾಗುತ್ತಿದೆ ಎಂದು ಹೇಳಲಾಗಿತ್ತು.
ಈ ಕುರಿತ ಮಾಧ್ಯಮ ವರದಿ ಆಧರಿಸಿ ಸ್ವಯಂ ಪ್ರೇರಿತ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ತನ್ನ ನ್ಯಾಯಾಧೀಶರು, ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಪಂಚತಾರಾ ಅಶೋಕ ಹೋಟೆಲ್ನಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲು ಯಾವುದೇ ವಿನಂತಿಯನ್ನು ಮಾಡಿಲ್ಲ ಎಂದು ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ