ಟಿಎಂಸಿ ಜತೆ ವಿಲೀನ ಪ್ರಸ್ತಾಪ ತಿರಸ್ಕರಿಸಿದ ರೈಜೋರ್ ದಳದ ಮುಖ್ಯಸ್ಥ ಅಖಿಲ್ ಗೊಗೊಯ್ 

ತೃಣಮೂಲ ಕಾಂಗ್ರೆಸ್(ಟಿಎಂಸಿ)ನೊಂದಿಗೆ ವಿಲೀನಗೊಳ್ಳುವ ಪ್ರಸ್ತಾಪವನ್ನು ನಾವು ಒಪ್ಪಿಕೊಂಡಿಲ್ಲ ಎಂದು ರೈಜೋರ್ ದಳದ ಮುಖ್ಯಸ್ಥ, ಅಸ್ಸಾಂ ಕಾರ್ಯಕರ್ತ ಮತ್ತು ಶಾಸಕ ಅಖಿಲ್ ಗೊಗೊಯ್ ಅವರು ಸೋಮವಾರ ಹೇಳಿದ್ದಾರೆ.
ಅಖಿಲ್ ಗೊಗೊಯ್
ಅಖಿಲ್ ಗೊಗೊಯ್

ಗುವಾಹತಿ: ತೃಣಮೂಲ ಕಾಂಗ್ರೆಸ್(ಟಿಎಂಸಿ)ನೊಂದಿಗೆ ವಿಲೀನಗೊಳ್ಳುವ ಪ್ರಸ್ತಾಪವನ್ನು ನಾವು ಒಪ್ಪಿಕೊಂಡಿಲ್ಲ ಎಂದು ರೈಜೋರ್ ದಳದ ಮುಖ್ಯಸ್ಥ, ಅಸ್ಸಾಂ ಕಾರ್ಯಕರ್ತ ಮತ್ತು ಶಾಸಕ ಅಖಿಲ್ ಗೊಗೊಯ್ ಅವರು ಸೋಮವಾರ ಹೇಳಿದ್ದಾರೆ.

"ನಾವು ಟಿಎಂಸಿಯೊಂದಿಗೆ ಮೂರು ಸುತ್ತಿನ ಚರ್ಚೆಗಳನ್ನು ಮಾಡಿದ್ದೇವೆ ಮತ್ತು ಅವುಗಳಲ್ಲಿ ಪ್ರತಿಯೊಂದರಲ್ಲೂ ನಾನು ಭಾಗವಹಿಸಿದೆ. ಟಿಎಂಸಿ ನಾಯಕರು ಮತ್ತು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಸಹ ಅಲ್ಲಿದ್ದರು. ಟಿಎಂಸಿಯ ಅಸ್ಸಾಂ ಘಟಕದ ಅಧ್ಯಕ್ಷರಾಗಿ ಪಕ್ಷ ಮುನ್ನಡೆಸಲು ಅವರು ನನಗೆ ವಿನಂತಿಸಿದರು ಎಂದು ಗೊಗೊಯ್ ಹೇಳಿದ್ದಾರೆ.

ಆದಾಗ್ಯೂ, ನಾವು ಪ್ರಾದೇಶಿಕ ಶಕ್ತಿಯಾಗಿ ಹೊರಹೊಮ್ಮುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದರಿಂದ, ನಮ್ಮ ಪಕ್ಷವನ್ನು ಇನ್ನೊಂದು ಪಕ್ಷದೊಂದಿಗೆ ವಿಲೀನಗೊಳಿಸುವ ಬಗ್ಗೆ ನಾವು ಎಂದಿಗೂ ಯೋಚಿಸಲಿಲ್ಲ ಎಂದು ಗೊಗೊಯ್ ಅವರು ಗುವಾಹಟಿಯಲ್ಲಿ ಪತ್ರಕರ್ತರಿಗೆ ತಿಳಿಸಿದ್ದಾರೆ.

ಕಿಶೋರ್ ಅವರ ಸಮೀಕ್ಷೆಯ ಆಧಾರದ ಮೇಲೆ ಟಿಎಂಸಿ ನಮಗೆ ವೀಲಿನಗೊಳಿಸುವ ಆಹ್ವಾನ ನೀಡಿದೆ ಎಂದು ಅವರು ಹೇಳಿದರು.

"ಪ್ರಶಾಂತ್ ಕಿಶೋರ್ ಅಸ್ಸಾಂನಲ್ಲಿ ಸಮಗ್ರ ಸಮೀಕ್ಷೆಯನ್ನು ಕೈಗೊಂಡಿದ್ದಾರೆ ಎಂದು ನನಗೆ ಪಶ್ಚಿಮ ಬಂಗಾಳದ ಪಿಡಬ್ಲ್ಯೂಡಿ ಮತ್ತು ಕಾನೂನು ಸಚಿವರು ಹೇಳಿದ್ದರು. ರೈಜೋರ್ ದಳವು ಉದಯೋನ್ಮುಖ ರಾಜಕೀಯ ಪಕ್ಷ ಎಂದು ಕಿಶೋರ್ ಹೇಳಿದ್ದಾರೆ ಮತ್ತು ಬಿಜೆಪಿಗೆ ಪರ್ಯಾಯವಾಗಿ ಕೆಲಸ ಮಾಡಬೇಕಾದರೆ, ರೈಜೋರ್ ದಳ ಮತ್ತು ಅಖಿಲ್ ಗೊಗೊಯ್ ಅವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬೇಕು ಎಂದು ಕಿಶೋರ್ ಹೇಳಿರುವುದಾಗಿ ಸಚಿವರು ತಿಳಿಸಿದ್ದಾರೆ ಎಂದರು.

ರೈಜೋರ್ ದಳವು ಅಸ್ಸಾಂನ ಜನರ ಆಕಾಂಕ್ಷೆಗಳನ್ನು ಪ್ರತಿನಿಧಿಸುವ ಪ್ರಾದೇಶಿಕ ಪಕ್ಷವಾಗಿದೆ ಎಂದು ಅವರು ಹೇಳಿದರು. ಅಲ್ಲದೆ ಬಿಜೆಪಿ ದೇಶದ ಒಕ್ಕೂಟ ರಚನೆಯನ್ನು ಮುರಿಯಲು ಪ್ರಯತ್ನಿಸುತ್ತಿದೆ ಎಂದು ಗೊಗೊಯ್ ಆರೋಪಿಸಿದ್ದಾರೆ.

ಟಿಎಂಸಿ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಫೆಡರಲಿಸಂ ಪರವಾಗಿ ಮಾತನಾಡುವ ರಾಜಕಾರಣಿಗಳಲ್ಲಿ ಅತ್ಯಂತ ಮೆಚ್ಚುವ ನಾಯಕರಾಗಿದ್ದಾರೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com