ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಅಗಲಿದ ವೀರ ಸೇನಾನಿಗಳಿಗೆ ತಮಿಳು ನಾಡು ಸರ್ಕಾರ ಗೌರವ, ಸಿಎಂ ಸ್ಟಾಲಿನ್ ಪುಷ್ಪ ನಮನ, ಪಾರ್ಥಿವ ಶರೀರ ದೆಹಲಿಗೆ ರವಾನೆ
ನೀಲಗಿರಿ(ತಮಿಳು ನಾಡು): ತಮಿಳು ನಾಡಿನ ನೀಲಗಿರಿ ಜಿಲ್ಲೆಯ ಕೂನೂರು ಬಳಿ ಭೀಕರ ಮಿಲಿಟರಿ ಹೆಲಿಕಾಪ್ಟರ್ ಅಪಘಾತ ದುರಂತದಲ್ಲಿ ಮೃತಪಟ್ಟ ಭಾರತದ ರಕ್ಷಣಾ ಪಡೆ(CDS) ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೇರಿದಂತೆ 13 ಮಂದಿಯ ಕಳೇಬರಕ್ಕೆ ತಮಿಳು ನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಗೌರವ ನಮನ ಸಲ್ಲಿಸಿದರು.
ವೆಲ್ಲಿಂಗ್ಟನ್ ಮಿಲಿಟರಿ ಆಸ್ಪತ್ರೆಯಿಂದ ಸಕಲ ಮಿಲಿಟರಿ ಮತ್ತು ಸರ್ಕಾರಿ ಗೌರವಗಳೊಂದಿಗೆ ಪುಷ್ಪಗಳಿಂದ ಅಲಂಕೃತ ಮಾಡಿದ್ದ ವಾಹನದಲ್ಲಿ ಮೃತರ ಕಳೇಬರವನ್ನು ಮೆರವಣಿಗೆ ಗೌರವಗಳ ಮೂಲಕ ಹೊರಗೆ ತಂದು ಇಟ್ಟು ಭಾರತದ ತ್ರಿವರ್ಣ ಧ್ವಜವನ್ನು ಹೊದಿಸಲಾಯಿತು. ನೀಲಗಿರಿಯಲ್ಲಿರುವ ಮದ್ರಾಸ್ ರೆಜಿಮೆಂಟಲ್ ಕೇಂದ್ರದಲ್ಲಿ ಇಂದು ಬೆಳಗ್ಗೆ ಸಕಲ ಮಿಲಿಟರಿ ಮತ್ತು ಸರ್ಕಾರಿ ಗೌರವಗಳೊಂದಿಗೆ ಗೌರವ ನಮನ ಸಲ್ಲಿಸಲಾಯಿತು. ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಗೌರವ ಸಲ್ಲಿಸಿದರು.
ತೆಲಂಗಾಣ ಮತ್ತು ಪುದುಚೆರಿ ರಾಜ್ಯಪಾಲೆ ಡಾ ತಮಿಳಿಸೈ ಸೌಂದರರಾಜನ್ ಸಹ ಮದ್ರಾಸ್ ರೆಜಿಮೆಂಟ್ ಗೆ ಬಂದು ಗೌರವ ನಮನ ಸಲ್ಲಿಸಿದರು. ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮತ್ತು ಇತರ 11 ರಕ್ಷಣಾ ಸಿಬ್ಬಂದಿಯ ಪಾರ್ಥಿವ ಶರೀರವನ್ನು ತಮಿಳು ನಾಡು ಸರ್ಕಾರದ ವಾಹನದಲ್ಲಿ ಕೊಂಡೊಯ್ಯಲಾಯಿತು. ಸರ್ಕಾರಿ ಗೌರವ ಸಲ್ಲಿಸಿದ ಬಳಿಕ ವೆಲ್ಲಿಂಗ್ಟನ್ನಲ್ಲಿರುವ ಮದ್ರಾಸ್ ರೆಜಿಮೆಂಟಲ್ ಸೆಂಟರ್ನಿಂದ ಪಾರ್ಥಿವ ಶರೀರಗಳನ್ನು ಕೊಯಮತ್ತೂರಿನ ಸುಲೂರ್ ಏರ್ ಬೇಸ್ಗೆ ಉಚಿತ ಹರ್ಸ್ ಸರ್ವೀಸ್ ವಾಹನಗಳಲ್ಲಿ ಕಳುಹಿಸುವ ಮೂಲಕ ದೆಹಲಿಗೆ ರವಾನಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ