ತಮಿಳು ನಾಡಿನಲ್ಲಿ ಸೇನಾ ಹೆಲಿಕಾಪ್ಟರ್ ದುರಂತ ನಂತರ ಅತಿ ಗಣ್ಯರ ವಾಯು ಸಂಚಾರದ ಶಿಷ್ಟಾಚಾರ ಪರಿಷ್ಕರಣೆ: ವಾಯುಪಡೆ ಮುಖ್ಯಸ್ಥ
ನವದೆಹಲಿ: ತಮಿಳು ನಾಡಿನ ಕೂನ್ನೂರು ಬಳಿ ಕಳೆದ ಡಿಸೆಂಬರ್ 8ರಂದು ಸೇನಾ ಹೆಲಿಕಾಪ್ಟರ್ ದುರಂತಕ್ಕೀಡಾದ(Tamil Nadu military helicopter crash) ನಂತರ ವಿವಿಐಪಿಗಳು(VVIP) ಗಳು ಅಂದರೆ ಅತಿ ಗಣ್ಯರ ಹಾರಾಟದ ಪ್ರೊಟೋಕಾಲ್ ಶಿಷ್ಟಾಚಾರಗಳನ್ನು ಪರಿಷ್ಕರಿಸಿ ಪರಿಶೀಲಿಸಲಾಗುತ್ತಿದೆ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ಏರ್ ಮಾರ್ಷಲ್ ವಿ ಆರ್ ಚೌಧರಿ ಹೇಳಿದ್ದಾರೆ.
ತಮಿಳು ನಾಡಿನಲ್ಲಿ ಸೇನಾ ಹೆಲಿಕಾಪ್ಟರ್ ದುರಂತದ ತನಿಖೆ ಪೂರ್ಣಗೊಂಡ ಬಳಿಕ ವರದಿಯ ಆಧಾರದ ಮೇಲೆ ಈ ಎಲ್ಲಾ ಕಾರ್ಯವಿಧಾನಗಳನ್ನು ಪರಿಶೀಲಿಸಲಾಗುತ್ತದೆ. ಪಾಕಿಸ್ತಾನ ಮತ್ತು ಚೀನಾ ಕಡೆಯಿಂದ ಬರುವ ಬೆದರಿಕೆಗಳನ್ನು ನಿರಂತರವಾಗಿ ಮೌಲ್ಯಮಾಪನ ಮಾಡುತ್ತಿದ್ದೇವೆ ಎಂದು ಹೇಳಿದರು.
ತಮಿಳು ನಾಡಿನಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತದ ತನಿಖೆಯನ್ನು ನಿಷ್ಪಕ್ಷಪಾತವಾಗಿ ನ್ಯಾಯಯುತವಾಗಿ ನ್ಯಾಯಾಂಗ ಮಟ್ಟದ ತನಿಖೆ ನಡೆಸಲಾಗುವುದು.ತನಿಖೆಯ ಆರಂಭದಲ್ಲಿಯೇ ಆ ಬಗ್ಗೆ ಮಾಹಿತಿ ನೀಡಲು ಸಾಧ್ಯವಿಲ್ಲ, ಪ್ರತಿಯೊಂದು ಕೋನದಲ್ಲಿ ತನಿಖೆ ಮಾಡಿ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಸೂಕ್ತ ಶಿಫಾರಸು ಮಾಡಬೇಕಾಗುತ್ತದೆ ಎಂದರು.
ಫ್ರಾನ್ಸ್ ಗೆ ಅಭಿನಂದನೆ: ಇದೇ ಸಂದರ್ಭದಲ್ಲಿ ವಾಯುಪಡೆ ಮುಖ್ಯಸ್ಥರು ಸಮಯಕ್ಕೆ ಸರಿಯಾಗಿ ರಫೇಲ್ ಯುದ್ಧ ವಿಮಾನವನ್ನು ಪೂರೈಸಿದ್ದಕ್ಕಾಗಿ ಫ್ರಾನ್ಸ್ ಗೆ ಧನ್ಯವಾದ ಹೇಳಿದರು. 36 ವಿಮಾನಗಳ ಖರೀದಿಗೆ ಒಪ್ಪಂದವಾಗಿತ್ತು, ಅವುಗಳಲ್ಲಿ 32 ವಿಮಾನಗಳನ್ನು ಈಗಾಗಲೇ ಪೂರೈಸಲಾಗಿದೆ. ಇನ್ನುಳಿದ ನಾಲ್ಕರಲ್ಲಿ ಮೂರು ಯುದ್ಧ ವಿಮಾನಗಳು ಫೆಬ್ರವರಿಯಲ್ಲಿ ಪೂರೈಕೆಯಾಗಲಿವೆ.
ದೇಶದ ನಿರ್ದಿಷ್ಟ ಬೆಳವಣಿಗೆಗಳನ್ನು ಹೊಂದಿರುವ ಕೊನೆಯ ವಿಮಾನವನ್ನು ಅದರ ಎಲ್ಲಾ ಪ್ರಯೋಗಗಳು ಮುಗಿದ ನಂತರ ಇಲ್ಲಿಗೆ ತರಲಾಗುತ್ತದೆ. ರಫೇಲ್ ಯುದ್ಧ ವಿಮಾನದ ಭವಿಷ್ಯದ ನಿರ್ವಹಣೆ ಸಮಸ್ಯೆಗಳು ಮತ್ತು ಭಾರತದಲ್ಲಿ ಡಿ-ಲೆವೆಲ್ ನಿರ್ವಹಣೆಯ ಸ್ಥಾಪನೆಯ ಶಿಫಾರಸುಗಳ ಬಗ್ಗೆ ನಾವು ರಕ್ಷಣಾ ಸಚಿವರ ಜೊತೆ ಚರ್ಚಿಸಿದ್ದೇವೆ ಎಂದರು.
ಚೀನಾದೊಂದಿಗೆ ಯುದ್ಧ: ಇದೇ ಸಂದರ್ಭದಲ್ಲಿ ವಾಯುಪಡೆ ಮುಖ್ಯಸ್ಥರು ಭಾರತ-ಚೀನಾ ಗಡಿಯ ಲಡಾಕ್ ನಲ್ಲಿ ಸೇನೆ ನಿಯೋಜನೆ ಮತ್ತು ಹಿಂತೆಗೆತದ ಮಾಹಿತಿಯನ್ನು ಕೂಡ ನೀಡಿದರು. ಲಡಾಕ್ ಗಡಿಯ ಕೆಲವೊಂದು ಪ್ರದೇಶಗಳಲ್ಲಿ ಸೇನೆಯ ಹಿಂತೆಗೆತ ಕಾರ್ಯ ನಡೆದಿದ್ದು ಸಂಪೂರ್ಣ ಹಿಂತೆಗೆತವಾಗಿಲ್ಲ, ವಾಯುಪಡೆಯಿಂದ ಸೇನೆ ನಿಯೋಜನೆ ಮುಂದುವರಿಯುತ್ತದೆ. ಆ ಪ್ರದೇಶದಲ್ಲಿ ಯಾವುದೇ ರೀತಿಯ ಸವಾಲುಗಳನ್ನು ಎದುರಿಸಲು ಸಿದ್ಧರಿದ್ದೇವೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ