ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ: ಮುಂಚೂಣಿಯಲ್ಲಿ ಟಿಎಂಸಿ; ಬಿಜೆಪಿ, ಕಾಂಗ್ರೆಸ್, ಸಿಪಿಎಂ ಮೂಲೆಗುಂಪು ಎಂದ ಮಮತಾ ಬ್ಯಾನರ್ಜಿ

ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ (ಕೆಎಂಸಿ) ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣ ಮೂಲ ಕಾಂಗ್ರೆಸ್(ಟಿಎಂಸಿ) ಕ್ಲೀನ್ ಸ್ವೀಪ್ ಮಾಡಲು ಸಿದ್ಧವಾಗಿದ್ದು, ಅಭ್ಯರ್ಥಿಗಳು 144ರಲ್ಲಿ 133 ವಾರ್ಡ್‍ಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಈಗಾಗಲೇ 54 ವಾರ್ಡ್ ಗಳಲ್ಲಿ ಟಿಎಂಸಿ ಗೆದ್ದಿದೆ.
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Updated on

ಕೊಲ್ಕತ್ತಾ: ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ (ಕೆಎಂಸಿ) ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣ ಮೂಲ ಕಾಂಗ್ರೆಸ್(ಟಿಎಂಸಿ) ಕ್ಲೀನ್ ಸ್ವೀಪ್ ಮಾಡಲು ಸಿದ್ಧವಾಗಿದ್ದು, ಅಭ್ಯರ್ಥಿಗಳು 144ರಲ್ಲಿ 133 ವಾರ್ಡ್‍ಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಈಗಾಗಲೇ 54 ವಾರ್ಡ್ ಗಳಲ್ಲಿ ಟಿಎಂಸಿ ಗೆದ್ದಿದೆ.

ಬೆಳಿಗ್ಗೆ 8 ಗಂಟೆಗೆ ಆರಂಭವಾದ ಎಣಿಕೆಯಲ್ಲಿ ಟಿಎಂಸಿ ಇದುವರೆಗೆ 133 ವಾರ್ಡ್‍ಗಳಲ್ಲಿ ಮುನ್ನಡೆ ಸಾಧಿಸಿದೆ” ಎಂದು ರಾಜ್ಯ ಚುನಾವಣಾ ಆಯೋಗದ ಅಧಿಕಾರಿ ತಿಳಿಸಿದ್ದಾರೆ.

ಎಡರಂಗವು ನಾಲ್ಕು ವಾರ್ಡ್‍ಗಳಲ್ಲಿ ಮುನ್ನಡೆ ಸಾಧಿಸುವುದರೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ವಿಧಾನಸಭೆ ಚುನಾವಣೆಯ ನಂತರ ಪಶ್ಚಿಮ ಬಂಗಾಳದಲ್ಲಿ ವಿರೋಧ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಮೂರು ವಾರ್ಡ್‍ಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಮುನ್ನಡೆಸುವ ಮೂಲಕ ಮೂರನೇ ಸ್ಥಾನದಲ್ಲಿದೆ. ಕಾಂಗ್ರೆಸ್ ಎರಡು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಎರಡು ಸ್ಥಾನಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.

ವಾರ್ಡ್ ಸಂಖ್ಯೆ 23, 11, 31, 2, 4 ಮತ್ತು 7ರಲ್ಲಿ ಟಿಎಂಸಿ ಆರಂಭಿಕ ಮುನ್ನಡೆ ಸಾಧಿಸಿತ್ತು. ತದನಂತರ ಟಿಎಂಸಿ 103 ಸ್ಥಾನಗಳನ್ನು ಪಡೆದುಕೊಂಡಿದ್ದರೂ ಕಾಂಗ್ರೆಸ್, ಬಿಜೆಪಿ ಒಂದೇ ಅಂಕಿ ಸ್ಥಾನದಲ್ಲೇ ಮುಂದುವರೆದಿತ್ತು.

ಎರಡು ಬೂತ್‍ಗಳಲ್ಲಿ ಬಾಂಬ್ ಸ್ಫೋಟ ಸೇರಿದಂತೆ ಹಿಂಸಾಚಾರದ ಘಟನೆಗಳು ಭಾನುವಾರ ನಡೆದವು. ಆದರೂ ಕೆಎಂಸಿ ಚುನಾವಣೆಯಲ್ಲಿ ಸುಮಾರು 40.5 ಲಕ್ಷ ಮತದಾರರಲ್ಲಿ 63 ಪ್ರತಿಶತಕ್ಕೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಿದರು.
ಕೆಲವು ವಾರ್ಡ್‍ಗಳ ಫಲಿತಾಂಶ ಈಗಾಗಲೇ ಟಿಎಂಸಿ ಅಭ್ಯರ್ಥಿಗಳ ಪರವಾಗಿ ಪ್ರಕಟವಾಗಿದೆ. ಟಿಎಂಸಿಯ ಭಾರಿ ಅಭ್ಯರ್ಥಿಗಳಾದ ದೇಬಾಶಿಶ್ ಕುಮಾರ್ (ವಾರ್ಡ್ 85), ತಾರಕ್ ಸಿಂಗ್ (ವಾರ್ಡ್ 118), ಮಾಲಾ ರಾಯ್ (ವಾರ್ಡ್ 88) ಮತ್ತು ಇತರರು ವಿಜೇತರೆಂದು ಘೋಷಿಸಲಾಗಿದೆ. ಪಕ್ಷದ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ.

ಕಾಂಗ್ರೆಸ್ ಮತ್ತು ಎಡಪಕ್ಷಗಳಂತಹ ಇತರ ರಾಜಕೀಯ ಸಂಘಟನೆಗಳೂ ಕಣದಲ್ಲಿವೆ. ಪಶ್ಚಿಮ ಬಂಗಾಳದ ಕೆಎಂಸಿಯ 144 ವಾರ್ಡ್‍ಗಳಿಗೆ ಡಿಸೆಂಬರ್ 19ರಂದು (ಭಾನುವಾರ) ಬಿಗಿ ಭದ್ರತೆ ಮತ್ತು ಕಟ್ಟುನಿಟ್ಟಾಗಿ ಜಾರಿಗೊಳಿಸಲಾದ ಕೋವಿಡ್-19 ಮಾರ್ಗಸೂಚಿಗಳ ಪ್ರಕಾರವೇ ಮತದಾನ ನಡೆಯಿತು. 4,959 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. 

ಪ್ರಜಾಪ್ರಭುತ್ವಕ್ಕೆ ಜಯ: ನಗರ ಪಾಲಿಕೆ ಚುನಾವಣೆಯಲ್ಲಿ ಟಿಎಂಸಿ ಗೆಲ್ಲುವ ಸೂಚನೆ ಸಿಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇದು ಅಭೂತಪೂರ್ವ ಗೆಲುವು, ನಮ್ಮ ಕೆಲಸಗಳನ್ನು ಜನರು ಸ್ವೀಕರಿಸಿದ್ದಾರೆ ಎಂಬ ಸಂದೇಶವನ್ನು ಇದು ನೀಡುತ್ತದೆ. ಬಿಜೆಪಿ, ಎಡರಂಗ, ಕಾಂಗ್ರೆಸ್ ಮೂಲೆಗುಂಪು ಆಗಿವೆ ಎಂದರು. ಇತ್ತೀಚಿನ ವರದಿಯಂತೆ ಟಿಎಂಸಿ ಈಗಾಗಲೇ 144 ವಾರ್ಡ್ ಗಳಲ್ಲಿ 54ರಲ್ಲಿ ಗೆದ್ದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com