ಪ್ರಸಿದ್ಧ ಆಯುರ್ವೇದ ವೈದ್ಯ ಪಿ.ಕೆ. ವಾರಿಯರ್ ನಿಧನ
ಮಲಪ್ಪುರಂ: ಪ್ರಸಿದ್ಧ ಆಯುರ್ವೇದ ವೈದ್ಯ, ಕೊಟ್ಟಕ್ಕಲ್ ಆಯುರ್ವೇದ ಶಾಲೆಯ ಟ್ರಸ್ಟಿ ಪಿ.ಕೆ. ವಾರಿಯರ್ ಇಂದು ನಿಧನರಾದರು. ಜೂನ್ 8 ರಂದು ಅವರಿಗೆ 100 ವರ್ಷ ತುಂಬಿತ್ತು. ಮಧ್ಯಾಹ್ನ 12-30ರಲ್ಲಿ ಕೊಟ್ಟಕ್ಕಲ್ ನಲ್ಲಿ ಅವರು ಕೊನೆಯುಸಿರೆಳೆದರು.
ವಯೋ ಸಹಜ ಅನಾರೋಗ್ಯದಿಂದಾಗಿ ಅವರು ಕೊಟ್ಟಕ್ಕಲ್ ನ ಆರ್ಯ ವೈದ್ಯ ಶಾಲೆ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚಿಗೆ ಅವರು ಕೋವಿಡ್ ನಿಂದ ಗುಣಮುಖರಾಗಿದ್ದರು. ಕೊಟ್ಟಕ್ಕಲ್ ನಲ್ಲಿ ನಾಳೆ ಅಂತ್ಯಸಂಸ್ಕಾರ ನಡೆಯಲಿದೆ.
ಪನ್ನಿಯಂಪಿಲ್ಲಿ ಕೃಷ್ಣನ್ ಕುಟ್ಟಿ ವಾರಿಯರ್ ಆಯುರ್ವೇದ ಶಾಲೆಯ ಸಂಸ್ಥಾಪಕ ವೈದ್ಯರತ್ನ ಪಿಎಸ್ ವಾರಿಯಸ್ ಅವರ ಸೋದರಳಿಯ ಆಗಿದ್ದು, ಇಡೀ ತಮ್ಮ ಜೀವನವನ್ನು ಆಯುರ್ವೇದ ಮತ್ತು ಅದರ ಆಧುನೀಕರಣಕ್ಕೆ ಮೀಸಲಿರಿಸಿದ್ದರು. ಅವರ ಕೊಡುಗೆಯನ್ನು ಪರಿಗಣಿಸಿ 1999ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರಿ ಹಾಗೂ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಸಂಶೋಧನೆ, ಆಧುನೀಕರಣ ಮತ್ತು ಸಾಂಪ್ರಾದಾಯಿಕ ಪದ್ಧತಿ ವಿಸ್ತರಣೆಯೊಂದಿಗೆ ಆಯುರ್ವೇದ ಜನಪ್ರಿಯತೆಗೆ ಪ್ರಮುಖ ಕೊಡುಗೆ ನೀಡಿದ್ದರು. ಅವರ ನಾಯಕತ್ವದಲ್ಲಿ ಆರ್ಯವೈದ್ಯ ಶಾಲೆಯನ್ನು ಅಂತಾರಾಷ್ಟ್ರೀಯ ಮಟ್ಟದ ಚಿಕಿತ್ಸೆ ಮತ್ತು ಔಷಧ ತಯಾರಿಕಾ ಸಂಸ್ಥೆಯನ್ನಾಗಿ ಅಭಿವೃದ್ಧಿಗೊಳಿಸಿದ್ದರು.
ಪಿ.ಕೆ. ವಾರಿಯರ್ ನಿಧನಕ್ಕೆ ಮುಖ್ಯಮಂತ್ರಿ ಪಿಣರಾಯ್ ವಿಜಯನ್, ನಟ ಮೋಹನ್ ಲಾಲ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ