ತೈಲ ಮತ್ತಿತರ ಅವಶ್ಯಕ ಸರಕುಗಳ ಬೆಲೆ ಏರಿಕೆ ವಿರುದ್ಧ ಎಡಪಕ್ಷಗಳ ರಾಷ್ಟ್ರವ್ಯಾಪಿ ಪ್ರತಿಭಟನೆ
ನವದೆಹಲಿ: ತೈಲ, ಅಗತ್ಯ ವಸ್ತುಗಳು ಮತ್ತು ಔಷಧಿಗಳ ಬೆಲೆ ಏರಿಕೆ ವಿರುದ್ಧ ಎಡಪಕ್ಷಗಳು ಬುಧವಾರದಿಂದ ಹದಿನೈದು ದಿನಗಳ ಕಾಲ ರಾಷ್ಟ್ರವ್ಯಾಪ್ತಿ ಪ್ರತಿಭಟನೆ ನಡೆಸಲಿವೆ.
ಸಿಪಿಐ(ಎಂ) ಸಿಪಿಐ, ಅಲ್ ಇಂಡಿಯಾ ಫಾರ್ವಡ್ ಬ್ಲಾಕ್, ಕ್ರಾಂತಿಕಾರಿ ಸಮಾಜವಾದಿ ಪಕ್ಷ, ಸಿಪಿಐ (ಎಲ್) ಒಳಗೊಂಡಂತೆ ಎಡಪಕ್ಷಗಳು ಭಾನುವಾರ ಪ್ರತಿಭಟನೆ ಕುರಿತು ಜಂಟಿ ಹೇಳಿಕೆ ಹೊರಡಿಸಿವೆ. ಈ ಹೇಳಿಕೆ ಪ್ರಕಾರ ಜೂನ್ 16 ರಂದು ಆರಂಭವಾಗಲಿರುವ ಪ್ರತಿಭಟನೆ ಜೂನ್ 30 ರಂದು ಅಂತ್ಯವಾಗಲಿದೆ.
ಹೆಚ್ಚುತ್ತಿರುವ ತೈಲ ಬೆಲೆಯನ್ನು ಇಳಿಸಬೇಕು ಹಾಗೂ ಅಗತ್ಯ ವಸ್ತುಗಳು ಮತ್ತು ಔಷಧಿಗಳ ಬೆಲೆಗಳನ್ನು ನಿಯಂತ್ರಿಸಬೇಕು ಎಂದು ಎಡಪಕ್ಷಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ. ನಿರಂತರವಾಗಿ ಹೆಚ್ಚಾಗುತ್ತಿರುವ ತೈಲ ಬೆಲೆಯಿಂದ ಜನಸಾಮಾನ್ಯರ ಬದುಕಿಗೆ ಹೊರೆಯಾಗಿದೆ. ಇತ್ತೀಚಿಗೆ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶದ ನಂತರ 21 ಬಾರಿ ತೈಲ ಬೆಲೆಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ ಎಂದು ಎಡಪಕ್ಷಗಳು ಆರೋಪಿಸಿವೆ.
ತೈಲ ಬೆಲೆ ಏರುತ್ತಿರುವ ಸಂದರ್ಭದಲ್ಲಿ ದೇಶದ ಆರ್ಥಿಕ ಕುಸಿತಗೊಂಡಿದ್ದು, ನಿರುದ್ಯೋಗ ಹೆಚ್ಚಾಗಿದೆ, ಖರೀದಿ ಸಾಮರ್ಥ್ಯ ಕುಸಿತಗೊಂಡಿದ್ದು, ಹಸಿವಿನ ಪ್ರಮಾಣ ಹೆಚ್ಚಳವಾಗಿದೆ ಎಂದು ಆರೋಪಿಸಿರುವ ಎಡಪಕ್ಷಗಳು, ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡದ ಎಲ್ಲಾ ಕುಟುಂಬಗಳಿಗೆ ಆರು ತಿಂಗಳವರೆಗೂ ತಿಂಗಳಿಗೆ 7,500 ರೂ.ಗಳನ್ನು ಕೇಂದ್ರ ಸರ್ಕಾರ ಕೂಡಲೇ ನೇರ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿವೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ