ತುರ್ತು ಪರಿಸ್ಥಿತಿಯ ಕರಾಳ ದಿನ; ಪ್ರಜಾಪ್ರಭುತ್ವ ಮೌಲ್ಯಗಳ ವ್ಯವಸ್ಥಿತ ನಾಶ: ಪ್ರಧಾನಿ ಮೋದಿ, ದೇಶ ನಾಯಕರ ವ್ಯಾಖ್ಯಾನ

1975, ಜೂನ್ 25 ಭಾರತದ ಇತಿಹಾಸದಲ್ಲಿ ಮರೆಯಲಾಗದ ದಿನ. ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದು ಈ ಅವಧಿಯನ್ನು ಬಹಳ ವಿವಾದಾತ್ಮಕ ವರ್ಷಗಳೆಂದು ವಿಶ್ಲೇಷಿಸಲಾಗುತ್ತಿದೆ.
ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ
ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ
Updated on

ನವದೆಹಲಿ: 1975, ಜೂನ್ 25 ಭಾರತದ ಇತಿಹಾಸದಲ್ಲಿ ಮರೆಯಲಾಗದ ದಿನ. ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದು ಈ ಅವಧಿಯನ್ನು ಬಹಳ ವಿವಾದಾತ್ಮಕ ವರ್ಷಗಳೆಂದು ವಿಶ್ಲೇಷಿಸಲಾಗುತ್ತಿದೆ.

ಈ ತುರ್ತು ಪರಿಸ್ಥಿತಿಯು ಮುಂದೆ 21 ತಿಂಗಳುಗಳ ಕಾಲ ದೇಶದಲ್ಲಿ ಜಾರಿಯಲ್ಲಿದ್ದು, ಮಾರ್ಚ್ 21, 1977ರವರೆಗೆ ಮುಂದುವರಿಯಿತು. ಆಗ ರಾಷ್ಟ್ರಪತಿಯಾಗಿದ್ದವರು ಫಕ್ರುದ್ದೀನ್ ಆಲಿ ಅಹ್ಮದ್. ಸಮಾಜವಾದಿ ಪಕ್ಷದ ನಾಯಕ ಜಯಪ್ರಕಾಶ ನಾರಾಯಣರು ಅಂದು ಬೃಹತ್ ರ್ಯಾಲಿಗಳನ್ನು ನಡೆಸುತ್ತಿದ್ದರು. ಇಂದಿರಾ ಗಾಂಧಿಯವರ ಆಡಳಿತ ವಿರುದ್ಧ ತೀವ್ರತರವಾದ ಪ್ರಚಾರ ಮಾಡುತ್ತಿದ್ದರು.

ಸರ್ಕಾರದ ಆಡಳಿತ ವಿರುದ್ಧ ದಂಗೆ ಏಳಬೇಕೆಂದೂ, ಸರ್ಕಾರದ ಆದೇಶ ಪಾಲಿಸಬಾರದೆಂದು ಪೊಲೀಸರಿಗೆ, ಸೈನ್ಯಕ್ಕೆ ಕರೆಯಿತ್ತಿದ್ದರು. ಜಯಪ್ರಕಾಶ ನಾರಾಯಣ ಅವರ ಕರೆಗೆ ಓಗೊಟ್ಟು ದೇಶದ ಜನರು ತಿರುಗಿ ಬೀಳುತ್ತಾರೆ ಎಂದು ಭಾವಿಸಿದ ಪ್ರಧಾನಿ ಇಂದಿರಾ ಗಾಂಧಿ ರಾಷ್ಟ್ರಪತಿಗಳ ಜೊತೆ ಚರ್ಚೆ ನಡೆಸಿ ಅವರಿಂದ ಅಧಿಕೃತ ಒಪ್ಪಿಗೆ ಪಡೆದು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದೇ ಬಿಟ್ಟರು.

ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಯವರು ಸಂವಿಧಾನ 352(1)ನೇ ವಿಧಿಯ ಪ್ರಕಾರ ಆಂತರಿಕ ಕಠಿಣ ಪರಿಸ್ಥಿತಿ ಕಾರಣ ನೀಡಿ ಇದಕ್ಕೆ ಅಧಿಕೃತವಾಗಿ ಒಪ್ಪಿಗೆ ನೀಡಿದರು. ಇದರ ಪರಿಣಾಮವಾಗಿ ತುರ್ತು ಪರಿಸ್ಥಿತಿಯು ಜಾರಿಗೆ ಬಂತು.

ಈ ಸಮಯದಲ್ಲಿ ಅನೇಕ ನಾಗರಿಕ ಹಕ್ಕುಗಳನ್ನು ನಿಷೇಧಿಸಲಾಯಿತು. ಗಾಂಧಿವಾದಿಗಳು ಜೈಲುಶಿಕ್ಷೆ ಅನುಭವಿಸಿದರು. ಮಾಧ್ಯಮದ ಹಕ್ಕುಗಳನ್ನು ಕಸಿದುಕೊಳ್ಳಲಾಗಿತ್ತು. ಸಂತಾನಹರಣ ಶಸ್ತ್ರಚಿಕಿತ್ಸೆಗಳು ನಡೆದ ವರದಿಯಾಗಿದ್ದವು. ರಾಜಕೀಯ, ಸಾಮಾಜಿಕ ಅನಿಶ್ಚಿತತೆ ಉಂಟಾಗಿತ್ತು. 

ಈ ದಿನವನ್ನು ಸ್ಮರಿಸಿಕೊಂಡಿರುವ ಪ್ರಧಾನಿ ಹಾಗೂ ಬಿಜೆಪಿ ನಾಯಕರು ಕಾಂಗ್ರೆಸ್ ನ್ನು ಟೀಕಿಸಿದ್ದಾರೆ. ಭಾರತದ ಪ್ರಜಾಪ್ರಭುತ್ವ ನೀತಿಗಳನ್ನು ಮೆಟ್ಟಿ ನಿಂತು ಹತ್ತಿಕ್ಕಲು ಕಾಂಗ್ರೆಸ್ ಯತ್ನಿಸುತ್ತಲೇ ಇತ್ತು. ಆದರೆ ಅದರಲ್ಲಿ ಯಶಸ್ವಿಯಾಗಲಿಲ್ಲ, ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಭಾರತೀಯ ಪ್ರಜಾಪ್ರಭುತ್ವವನ್ನು ರಕ್ಷಿಸಿದ ಎಲ್ಲ ಶ್ರೇಷ್ಠರನ್ನು ನಾವು ನೆನಪಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

1975ರ ಈ ದಿನವನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯೊಳಗಿನ ಸಂಸ್ಥೆಯನ್ನು ವ್ಯವಸ್ಥಿತವಾಗಿ ನಾಶಪಡಿಸಲು ನೋಡಿದ ಸಮಯವದು. ಭಾರತದ ಪ್ರಜಾಪ್ರಭುತ್ವದ ಧ್ಯೇಯ, ಉತ್ಸಾಹಗಳನ್ನು ಬಲವರ್ಧಿಸಿ ಸಾಧ್ಯವಾದುದನ್ನು ಮಾಡಿ ಸಂವಿಧಾನದ ಮೌಲ್ಯಗಳಿಗೆ ಬದ್ಧವಾಗಿ ಬದುಕಲು ನಾವೆಲ್ಲರೂ ಪ್ರತಿಜ್ಞೆಪಡೋಣ ಎಂದು ಹೇಳಿದ್ದಾರೆ.

ಒಂದು ಕುಟುಂಬದ ವಿರುದ್ಧದ ಧ್ವನಿಯನ್ನು ಹತ್ತಿಕ್ಕಲು ತುರ್ತು ಪರಿಸ್ಥಿತಿ ಸ್ವತಂತ್ರ ಭಾರತದ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯವಾಗಿದೆ. 21 ತಿಂಗಳ ಕಾಲ ನಿರ್ದಯ ಆಡಳಿತದ ಕ್ರೂರ ಚಿತ್ರಹಿಂಸೆ ಅನುಭವಿಸುತ್ತಿರುವಾಗ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಪಟ್ಟುಬಿಡದೆ ಹೋರಾಡಿದ ಎಲ್ಲ ದೇಶವಾಸಿಗಳ ತ್ಯಾಗಕ್ಕೆ ವಂದನೆಗಳು. 1975 ರಲ್ಲಿ ಈ ದಿನದಂದು, ಅಧಿಕಾರದ ಸ್ವಾರ್ಥ ಮತ್ತು ದುರಹಂಕಾರದಲ್ಲಿ ಕಾಂಗ್ರೆಸ್ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರುವ ಮೂಲಕ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವನ್ನು ಕೊಂದುಹಾಕಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಕ್ರೋಶ ಹೊರಹಾಕಿದ್ದಾರೆ.

1975 ರ ತುರ್ತು ಪರಿಸ್ಥಿತಿಯನ್ನು ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ "ಕರಾಳ ಅಧ್ಯಾಯ" ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕರೆದಿದ್ದಾರೆ. ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಪಾತ್ರವಹಿಸಿದ ಎಲ್ಲರಿಗೂ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.

ದೇಶದ ಪ್ರಜಾಪ್ರಭುತ್ವ ಸಂಪ್ರದಾಯಗಳ ಮೇಲೆ ದಾಳಿ ಮಾಡಲು ಸಂವಿಧಾನವನ್ನು ದುರುಪಯೋಗಪಡಿಸಿಕೊಂಡ ವಿಧಾನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇಂದಿಗೂ ಆ ಯುಗವು ಎಲ್ಲರ ನೆನಪುಗಳಲ್ಲಿ ಅಚ್ಚಳಿಯದೆ ಉಳಿದಿದೆ ಎಂದು ಹೇಳಿದ್ದಾರೆ.
ಹೀಗೆ ಇನ್ನೂ ಅನೇಕ ಬಿಜೆಪಿ ನಾಯಕರು ತಮ್ಮದೇ ರೀತಿಯಲ್ಲಿ ಈ ದಿನವನ್ನು ಸ್ಮರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com