ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಪಟೇಲ್ ಅವರು, ಪತ್ರಿಕಾಗೋಷ್ಠಿಯಲ್ಲಿ ದೆಹಲಿ ಮುಖ್ಯಮಂತ್ರಿಗಳ ಹಿಂದೆ ಕಂಡುಬರುವ ರಾಷ್ಟ್ರ ಧ್ವಜವು ಧ್ವಜ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ದೆಹಲಿ ಸಿಎಂಗೆ ಪತ್ರ ಬರೆದಿರುವ ಪಟೇಲ್ ಅವರು, "ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರಧ್ವಜವನ್ನು ಅಲಂಕಾರಕ್ಕಾಗಿ ಬಳಸಲಾಗಿದೆ ಎಂದು ತೋರುತ್ತಿದೆ. ಮಧ್ಯದಲ್ಲಿ ಬಿಳಿ ಭಾಗವನ್ನು ಕಡಿಮೆ ಮಾಡಲಾಗಿದೆ ಮತ್ತು ಅದಕ್ಕೆ ಹಸಿರು ಭಾಗವನ್ನು ಸೇರಿಸಲಾಗಿದೆ, ಇದು ಗೃಹ ಸಚಿವಾಲಯ ನಿರ್ದಿಷ್ಟಪಡಿಸಿದ ಭಾರತೀಯ ಧ್ವಜ ಸಂಹಿತೆಯ ನಿಬಂಧನೆಗಳಿಗೆ ಅನುಗುಣವಾಗಿಲ್ಲ”ಎಂದು ಹೇಳಿದ್ದಾರೆ.
"ಗೌರವಾನ್ವಿತ ಮುಖ್ಯಮಂತ್ರಿಯಿಂದ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆ ಇಂತಹ ಕೃತ್ಯವನ್ನು ನಾನು ನಿರೀಕ್ಷಿಸುವುದಿಲ್ಲ" ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಪತ್ರದ ಪ್ರತಿಯನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರಿಗೂ ಕಳುಹಿಸಲಾಗಿದೆ.
ಭಾಷಣಕಾರರ ವೇದಿಕೆಯನ್ನು ಅಲಂಕರಿಸಲು ಧ್ವಜವನ್ನು ಬಳಸಬಾರದು ಎಂದಿರುವ ಪಟೇಲ್ ಅವರು ರಾಷ್ಟ್ರೀಯ ಗೌರವ ಕಾಯ್ದೆ 1971ರ ಸೆಕ್ಷನ್ 2 (ix)ಅನ್ನು ಉಲ್ಲೇಖಿಸುವ ಮೂಲಕ ಮುಖ್ಯಮಂತ್ರಿಯ ಗಮನವನ್ನು ಸೆಳೆಯಲು ಯತ್ನಿಸಿದ್ದಾರೆ.
Advertisement