ಉಚಿತ ಕೋವಿಡ್ ಲಸಿಕೆ ನೀಡಿದ್ದೇ ಇಂಧನ ದರ ಏರಿಕೆಗೆ ಕಾರಣ: ಕೇಂದ್ರ ಸಚಿವ ರಾಮೇಶ್ವರ್ ತೆಲಿ
ನವದೆಹಲಿ: ಉಚಿತವಾಗಿ ಕೋವಿಡ್–19 ಲಸಿಕೆ ನೀಡಿದ್ದೇ ಇಂಧನ ದರ ಏರಿಕೆಗೆ ಕಾರಣ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯ ರಾಜ್ಯ ಖಾತೆ ಸಚಿವ ರಾಮೇಶ್ವರ್ ತೆಲಿ ಪ್ರತಿಪಾದಿಸಿದ್ದಾರೆ.
ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ದಾಖಲೆಯ ಗರಿಷ್ಠ ಮಟ್ಟ ತಲುಪಿರುವ ಸಂದರ್ಭದಲ್ಲೇ ಸಚಿವರು ಈ ಹೇಳಿಕೆ ನೀಡಿರುವುದಾಗಿ ಸುದ್ಧಿ ಸಂಸ್ಥೆ ವರದಿ ಮಾಡಿದೆ. ಅಸ್ಸಾಂನಲ್ಲಿ ವರದಿಗಾರರ ಜತೆ ಮಾತನಾಡಿದ ಅವರು, ‘ಇಂಧನ ಬೆಲೆ ಹೆಚ್ಚಿಲ್ಲ, ಅದು ತೆರಿಗೆಗಳನ್ನು ಒಳಗೊಂಡಿದೆ. ನೀವು ಉಚಿತ ಲಸಿಕೆಯನ್ನು ಪಡೆಯಬೇಕೆಂದರೆ, ಅದಕ್ಕೆ ಹಣ ಎಲ್ಲಿಂದ ಬರುತ್ತದೆ? ಲಸಿಕೆಗೆ ನೀವು ಹಣ ಪಾವತಿಸಿಲ್ಲ. ಹಾಗಾಗಿ ತೆರಿಗೆ ಮೂಲಕ ಹಣ ಸಂಗ್ರಹಿಸಲಾಗಿದೆ’ ಎಂದು ಸಚಿವರು ಹೇಳಿದ್ದಾರೆ.
ದೇಶದ 130 ಕೋಟಿ ಜನರಿಗೆ ಉಚಿತವಾಗಿ ಕೊರೊನಾ ಲಸಿಕೆ ನೀಡುವ ಗುರಿಯನ್ನು ನಮ್ಮ ಕೇಂದ್ರ ಸರ್ಕಾರ ಹೊಂದಿದೆ. ಪ್ರತಿ ಲಸಿಕೆಯ ಬೆಲೆ 1200 ರೂಪಾಯಿ. ಪ್ರತಿಯೊಬ್ಬರೂ ಎರಡು ಡೋಸ್ ಪಡೆಯಬೇಕು. ಅಂದರೆ ಅಲ್ಲಿಗೆ ಒಬ್ಬರಿಗೆ ನೀಡಲಾಗುವ ಲಸಿಕೆಯ ಬೆಲೆ 2400 ರೂ. ಆ ಹಣ ಭರಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿದ್ದು, ಇದೇ ಪೆಟ್ರೋಲ್-ಡೀಸೆಲ್ಗೆ ವಿಧಿಸಲಾದ ಟ್ಯಾಕ್ಸ್ನಿಂದ ಎಂದು ದಿಬ್ರುಗಡ್ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ರಾಮೇಶ್ವರ್ ತೇಲಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ