"ದೇವಾಲಯಗಳ ಹಕ್ಕುಗಳನ್ನು ಭಕ್ತಾದಿಗಳಿಗೆ ಕೊಡಬೇಕು; ದೇವಾಲಯದ ಸಂಪತ್ತು ಹಿಂದೂಗಳ ಕಲ್ಯಾಣಕ್ಕೇ ಬಳಕೆಯಾಗಬೇಕು"

ದೇಶದಲ್ಲಿ ಕೆಲವು ದೇವಾಲಯಗಳ ಪರಿಸ್ಥಿತಿಯ ಬಗ್ಗೆ ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗವತ್ ಆತಂಕ ವ್ಯಕ್ತಪಡಿಸಿದ್ದು, ಅವುಗಳ ನಿರ್ವಹಣೆಯ ಹಕ್ಕನ್ನು ಹಿಂದೂಗಳಿಗೇ ವಹಿಸಬೇಕು ಎಂದು ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗವತ್ ಹೇಳಿದ್ದಾರೆ.
ಮೋಹನ್ ಭಾಗ್ವತ್
ಮೋಹನ್ ಭಾಗ್ವತ್
Updated on

ನಾಗ್ಪುರ: ದೇಶದಲ್ಲಿ ಕೆಲವು ದೇವಾಲಯಗಳ ಪರಿಸ್ಥಿತಿಯ ಬಗ್ಗೆ ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗವತ್ ಆತಂಕ ವ್ಯಕ್ತಪಡಿಸಿದ್ದು, ಅವುಗಳ ನಿರ್ವಹಣೆಯ ಹಕ್ಕನ್ನು ಹಿಂದೂಗಳಿಗೇ ವಹಿಸಬೇಕು ಹಾಗೂ ಆ ದೇವಾಲಯದ ಸಂಪತ್ತನ್ನು ಹಿಂದೂ ಸಮುದಾಯದ ಕಲ್ಯಾಣಕ್ಕಾಗಿ ಬಳಕೆ ಮಾಡಬೇಕೆಂದು ಕರೆ ನೀಡಿದ್ದಾರೆ.

ರೇಶಿಮ್ಬಾಘ್ ನಲ್ಲಿ ಆಯೋಜಿಸಲಾಗಿದ್ದ ವಿಜಯದಶಮಿ ಉತ್ಸವದಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, ದಕ್ಷಿಣ ಭಾರತದಲ್ಲಿ ಬಹುತೇಕ ಎಲ್ಲಾ ದೇವಾಲಯಗಳು ಸಂಪೂರ್ಣವಾಗಿ ಸರ್ಕಾರದಿಂದ ನಿರ್ವಹಿಸಲ್ಪಡುತ್ತಿದ್ದು, ದೇಶದ ಉಳಿದ ಭಾಗಗಳಲ್ಲಿ ಕೆಲವು ದೇವಾಲಯಗಳನ್ನು ಸರ್ಕಾರ ನಿರ್ವಹಣೆ ಮಾಡುತ್ತಿದ್ದರೆ, ಇನ್ನೂ ಕೆಲವು ದೇವಾಲಯಗಳನ್ನು ಭಕ್ತಾದಿಗಳೇ ನಿರ್ವಹಣೆ ಮಾಡುತ್ತಿದ್ದಾರೆ.

ಮಾತಾ ವೈಷ್ಣೋದೇವಿಯಂತಹ ಸರ್ಕಾರಿ ನಿರ್ವಹಣೆಯಲ್ಲಿರುವ ದೇವಾಲಯವನ್ನು ಉಲ್ಲೇಖಿಸಿರುವ ಮೋಹನ್ ಭಾಗ್ವತ್, ಇಂತಹ ದೇವಾಲಯಗಳಲ್ಲಿ ಪರಿಣಾಮಕಾರಿಯಾದ ನಿರ್ವಹಣೆ ಇದೆ. ಅಂತೆಯೇ ಮಹಾರಾಷ್ಟ್ರದ ಬುಲಂಧಾನ ಜಿಲ್ಲೆಯ ಶೆಗಾಂವ್ ನಲ್ಲಿರುವ ಗಜಾನನ್ ಮಹಾರಾಜ್ ದೇವಾಲಯ,  ದೆಹಲಿಯಲ್ಲಿರುವ ಝಂಡೆವಾಲ ದೇವಾಲಯಗಳನ್ನು ಭಕ್ತಾದಿಗಳು ನಿರ್ವಹಿಸುತ್ತಿದ್ದು ಅಲ್ಲಿಯೂ ಪರಿಣಾಮಕಾರಿಯಾದ ನಿರ್ವಹಣೆ ಇದೆ ಎಂದು ಹೇಳಿದ್ದಾರೆ.

ಆದರೆ ಪರಿಣಾಮಕಾರಿಯಾಗಿ ನಿರ್ವಹಣೆಯಾಗದ ದೇವಾಲಯಗಳಲ್ಲಿ ಲೂಟಿ ಸಂಭವಿಸುವ ಸಾಧ್ಯತೆ ಇದೆ, ಅಂತಹ ಕೆಲವು ದೇವಾಲಯಗಳಲ್ಲಿ ನಿರ್ವಹಣೆ, ಆಡಳಿತದ ಯಾವುದೇ ವ್ಯವಸ್ಥೆಗಳಲ್ಲೂ ಕೊರತೆ ಇರುತ್ತವೆ ಎಂದು ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.

"ದೇವಸ್ಥಾನಗಳ ಚರ ಮತ್ತು ಸ್ಥಿರಾಸ್ತಿಗಳ ದುರುಪಯೋಗದ ಪ್ರಕರಣಗಳು ಬೆಳಕಿಗೆ ಬಂದಿವೆ. ನಿರ್ದಿಷ್ಟ ಆಚಾರಗಳು, ಶಾಸ್ತ್ರ ಸಂಪ್ರದಾಯಗಳು ಪ್ರತಿ ದೇವಸ್ಥಾನಕ್ಕೆ ಮತ್ತು ಅದರಲ್ಲಿ ನೆಲೆಸಿರುವ ದೇವರಿಗೆ ಅನ್ವಯಿಸುತ್ತವೆ. ಆ ಆಚರಣೆಗಳಲ್ಲಿ ಹಸ್ತಕ್ಷೇಪ ಮತ್ತು ಮಧ್ಯಪ್ರವೇಶದ ನಿದರ್ಶನಗಳೂ ವರದಿಯಾಗಿವೆ. ದೇವರ ದರ್ಶನ, ಆತನನ್ನು ಆರಾಧಿಸುವುದು, ಜಾತಿ ಮತ ಬೇಧವಿಲ್ಲದೆ ಎಲ್ಲ ಭಕ್ತರಿಗೂ ಮುಕ್ತ ಪ್ರವೇಶವಾಗಬೇಕು, ಅದು ಎಲ್ಲ ದೇವಸ್ಥಾನಗಳಲ್ಲಿ ಇಲ್ಲ, ಇರುವಂತೆ ಖಾತ್ರಿಪಡಿಸಿಕೊಳ್ಳಬೇಕೆಂದು ಭಾಗವತ್ ಕರೆ ನೀಡಿದ್ದಾರೆ. 
    
ಹಿಂದೂ ದೇವಾಲಯಗಳ ನಿರ್ವಹಣೆ ಹಿಂದೂ ಭಕ್ತರಿಂದ ಆಗಬೇಕು ಮತ್ತು ಹಿಂದೂ ದೇವಾಲಯಗಳ ಆಸ್ತಿ ದೇವರ ಪೂಜೆಗೆ ಮತ್ತು ಹಿಂದೂ ಸಮಾಜದ ಸೇವೆ ಹಾಗೂ ಕಲ್ಯಾಣಕ್ಕಾಗಿ ಮಾತ್ರ ಬಳಸಬೇಕು. ಈ ಚಿಂತನೆಯ ಜೊತೆಯಲ್ಲಿ, ದೇವಸ್ಥಾನಗಳನ್ನು ಮತ್ತೊಮ್ಮೆ ನಮ್ಮ ಸಾಮಾಜಿಕ-ಸಾಂಸ್ಕೃತಿಕ ಜೀವನದ ಕೇಂದ್ರಬಿಂದುವನ್ನಾಗಿಸುವ ಯೋಜನೆಯನ್ನು ರೂಪಿಸುವುದು ಅಗತ್ಯವಾಗಿದೆ ಮತ್ತು ಹಿಂದೂ ಸಮಾಜದ ಬಲವನ್ನು ಆಧರಿಸಿ ದೇವಸ್ಥಾನಗಳ ಸೂಕ್ತ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಬೇಕಾಗಿದೆ ಎಂದು ಭಾಗವತ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com