ಕೊಟ್ಟಾಯಂ: ಕಿರಾಣಿ ಅಂಗಡಿ ಇಟ್ಟುಕೊಂಡಿದ್ದ ವೃದ್ಧನೊಬ್ಬ ಹತ್ತು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದು, ಇದರಿಂದ ಮನನೊಂದ ಬಾಲಕಿ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಕೊಟ್ಟಾಯಂನ ಕುರಿಚಿಯಲ್ಲಿ ನಡೆದಿದೆ.
ಬಾಲಕಿ ಲೈಂಗಿಕ ದೌರ್ಜನ್ಯಕ್ಕೊಳಗಾದ ನಂತರ ಗ್ರಾಮದ ಕೆಲವು ಜನರು ಆತನನ್ನು ದೂರ ಇರಿಸಿದ್ದರು. ಅಲ್ಲದೇ ಈ ಪ್ರಕರಣವನ್ನು ಮುಚ್ಚಿಹಾಕಲು ಬಾಲಕಿ ತಂದೆ ಆರೋಪಿಯಿಂದ ಹಣ ತೆಗೆದುಕೊಂಡಿದ್ದಾನೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದರು. ಇದರಿಂದ ಬೇಸರಗೊಂಡಿದ್ದ ಬಾಲಕಿ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಕುಟುಂಬಸ್ಥರ ಆರೋಪವಾಗಿದೆ.
74 ವರ್ಷದ ಯೋಗಿ ದಾಸ್ ಎಂಬ ವೃದ್ಧ ಅಂಗಡಿಗೆ ಕಿರಾಣಿ ವಸ್ತುಗಳನ್ನು ಖರೀದಿಸಲು ಬಾಲಕಿ ಬಂದಾಗ ಈ ಕೃತ್ಯವೆಸಗಿದ್ದಾನೆ. ಪೊಕ್ಸೊ ಪ್ರಕರಣದಡಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಬಾಲಕಿ ಅಂಗಡಿಗೆ ಬಂದಾಗಲೆಲ್ಲ ಆರೋಪಿ ಆಕೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಪೋಷಕರು ಮಗುವಿನ ನಡವಳಿಕೆಯಲ್ಲಿ ವ್ಯತ್ಯಾಸ ಕಂಡು ಆಕೆಯನ್ನು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಕೊಟ್ಟಾಯಂ ಮೊಬೈಲ್ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ.
ಆರೋಪಿಯ ಪುತ್ರ ಪ್ರಸಿದ್ಧ ರಾಜಕೀಯ ಪಕ್ಷದ ಸ್ಥಳೀಯ ಮುಖಂಡನಾಗಿದ್ದಾನೆ. ಕುಟುಂಬದವರು ರಾಜಿ ಮಾಡಿಕೊಳ್ಳಲು ಸಿದ್ಧರಿಲ್ಲದಿದ್ದರೂ, ಅವರು ಆರೋಪಿಗಳ ಪ್ರಭಾವಕ್ಕೆ ಹೆದರುತ್ತಿದ್ದರು ಎಂದು ತಿಳಿದುಬಂದಿದೆ.
Advertisement