ಲಖನೌ: ಉತ್ತರ ಪ್ರದೇಶದಲ್ಲಿ ಪ್ರಚಾರ ರ್ಯಾಲಿಯಲ್ಲಿ ಭಾಷಣ ಮಾಡಿದ್ದ ಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ವಿರುದ್ಧ ಪ್ರಕರಣ ದಾಖಲಾಗಿದೆ.
ಕೋವಿಡ್-19 ನಿಯಮ ಉಲ್ಲಂಘನೆ ಹಾಗೂ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಆರೋಪದಡಿ ಅಸಾದುದ್ದೀನ್ ಓವೈಸಿ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಅಸಭ್ಯ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಅಸಾದುದ್ದೀನ್ ಓವೈಸಿ ವಿರುದ್ಧ ಬಾರಾಬಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐಪಿಸಿ 153 ಎ ( ಧಾರ್ಮಿಕ ನೆಲೆಗಟ್ಟಿನಲ್ಲಿ ದ್ವೇಷ ಹರಡುವುದು) 188 (ಸಾರ್ವಜನಿಕ ಸೇವೆಯಲ್ಲಿರುವವರ ಆದೇಶವನ್ನು ನಿರ್ಲಕ್ಷ್ಯಿಸುವುದು) 269 (ನಿರ್ಲಕ್ಷ್ಯತನದಿಂದ ಜೀವಕ್ಕೆ ಹಾನಿಯುಂಟುಮಾಡುವ ರೋಗವನ್ನು ಹರಡುವುದಕ್ಕೆ ಕಾರಣವಾಗುವುದು) ಈ ಆರೋಪಗಳನ್ನು ಓವೈಸಿ ವಿರುದ್ಧ ಹೊರಿಸಲಾಗಿದೆ ಎಂದು ಬಾರಾಬಂಕಿ ಎಸ್ ಪಿ ಯಮುನಾ ಪ್ರಸಾದ್ ಹೇಳಿದ್ದಾರೆ.
ಹೈದರಾಬಾದ್ ನ ಸಂಸದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮಗಳನ್ನು ಪಕ್ಷದ ರ್ಯಾಲಿಯಲ್ಲಿ ಬೃಹತ್ ಜನಸಂಖ್ಯೆಯನ್ನು ಸೇರಿಸುವ ಮೂಲಕ ಉಲ್ಲಂಘನೆ ಮಾಡಿದ್ದಾರೆಂದು ಎಸ್ ಪಿ ಹೇಳಿದ್ದಾರೆ.
ಓವೈಸಿ ತಮ್ಮ ಭಾಷಣದಲ್ಲಿ ಧಾರ್ಮಿಕ ದ್ವೇಷಗಳನ್ನು ಹರಡುವ ರೀತಿಯ ಹೇಳಿಕೆ ನೀಡಿದ್ದಾರೆ. "100 ವರ್ಷದ ರಾಮ್ ಸನೇಹಿ ಘಾಟ್ ಮಸೀದಿಯನ್ನು ಆಡಳಿತ ನೆಲಸಮಗೊಳಿಸಿದೆ ಎಂದು ಓವೈಸಿ ಆರೋಪಿಸಿದ್ದರು. ಆದರೆ ವಾಸ್ತವಾಂಶ ಇದಕ್ಕೆ ತದ್ವಿರುದ್ಧವಾಗಿದೆ ಎಂದು ಎಸ್ ಪಿ ಸ್ಪಷ್ಟಪಡಿಸಿದ್ದಾರೆ.
ಓವೈಸಿ ಉಲ್ಲೇಖಿಸಿದ್ದ ಮಸೀದಿ ತೆಹ್ಸಿಲ್ ನ ಆಸುಪಾಸಿನಲ್ಲಿದ್ದು ಎಸ್ ಡಿಎಂ ನಿವಾಸದ ಎದುರು ಇದೆ. ಮೇ.17 ರಂದು ಬಾರಾಬಂಕಿ ಎಸ್ ಡಿಎಂ ಕೋರ್ಟ್ ನ ಆದೇಶದ ಪ್ರಕಾರ ಅದನ್ನು ತೆರವುಗೊಳಿಸಲಾಗಿತ್ತು. ಈ ಮಸೀದಿ ನಿರ್ಮಾಣ ಅಕ್ರಮವಾಗಿತ್ತು ಎಂದು ಬಾರಾಬಂಕಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದರ್ಶ್ ಸಿಂಗ್ ಹೇಳಿದ್ದರು.
"ಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರುವ ಓವೈಸಿ ತ್ರಿವಳಿ ತಲಾಖ್ ವಿರುದ್ಧದ ಕಾನೂನನ್ನು ಉಲ್ಲೇಖಿಸಿ, ಹಿಂದೂ ಹೆಣ್ಣುಮಕ್ಕಳ ಪರಿಸ್ಥಿತಿಯ ಬಗ್ಗೆ ಮಾತನಾಡುತ್ತಾ ಮೋದಿ ವಿರುದ್ಧ ವೈಯಕ್ತಿಕ ವಾಗ್ದಾಳಿ ನಡೆಸಿದ್ದಾರೆ.
ನನ್ನ ಅತ್ತಿಗೆ (ಮೋದಿ ಅವರ ಪತ್ನಿ) ಗುಜರಾತ್ ನಲ್ಲಿ ಏಕಾಂಗಿಯಾಗಿರುತ್ತಾರೆ. ಅದರ ಬಗ್ಗೆ ಯಾರ ಬಳಿಯೂ ಉತ್ತರವಿಲ್ಲ ಎಂದು ಮೋದಿ ವಿರುದ್ಧ ಓವೈಸಿ ವೈಯಕ್ತಿಕ ವಾಗ್ದಾಳಿ ನಡೆಸಿದ್ದಾರೆ.
Advertisement