ಕೋಲ್ಕತ್ತಾ: ಸೆಪ್ಟೆಂಬರ್ 30ರಂದು ನಡೆಯಲಿರುವ ಭವಾನಿಪುರ ವಿಧಾನಸಭಾ ಉಪಚುನಾವಣೆಗೆ ಭಾರತೀಯ ಜನತಾ ಪಕ್ಷದ(ಬಿಜೆಪಿ) ಅಭ್ಯರ್ಥಿ ಪ್ರಿಯಾಂಕಾ ಟಿಬ್ರೂವಾಲ್ ಅವರು ಸೋಮವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಿರುದ್ಧ ನಾಮಪತ್ರ ಸಲ್ಲಿಸಲಿದ್ದಾರೆ.
ಚುನಾವಣೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯನ್ನು ಗುರಿಯಾಗಿಸಿಕೊಂಡಿರುವ ಪ್ರಿಯಾಂಕಾ ಅವರು, ರಾಜ್ಯದ ಜನರಿಗೆ ಬದುಕುವ ಹಕ್ಕಿದೆ. ಆದರೆ ಈ ಹಕ್ಕನ್ನು ಮಮತಾ ಬ್ಯಾನರ್ಜಿ ಮತ್ತು ಅವರ ಪಕ್ಷ ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
"ನಾಳೆ ನಾನು ನಾಮಪತ್ರ ಸಲ್ಲಿಸುತ್ತೇನೆ. ಪಶ್ಚಿಮ ಬಂಗಾಳದ ಜನರಿಗೆ ಬದುಕುವ ಹಕ್ಕಿದೆ. ಈ ಹಕ್ಕನ್ನು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಅವರಿಂದ ಕಸಿದುಕೊಳ್ಳುತ್ತಿದೆ. ನಾನು ಬಂಗಾಳದ ಜನರಿಗಾಗಿ ಹೋರಾಡುತ್ತಿದ್ದೇನೆ" ಎಂದು ಪ್ರಿಯಾಂಕಾ ಹೇಳಿದ್ದಾರೆ.
ರಾಜ್ಯದಲ್ಲಿ ಆಡಳಿತದಲ್ಲಿರುವ ಟಿಎಂಸಿ ಹಿಂಸೆಯನ್ನು ಬೆಂಬಲಿಸುವುದರಿಂದ ಚುನಾವಣೆಯನ್ನು ಪಾರದರ್ಶಕತೆಯಿಂದ ನಡೆಸಲು ಸಾಧ್ಯವಾಗುವುದಿಲ್ಲ. ನನ್ನ ಹೋರಾಟವು ಆಡಳಿತ ಪಕ್ಷದ ಸದಸ್ಯರ ವಿರುದ್ಧವಾಗಿದೆ. ಏಕೆಂದರೆ ಅವರು ಪಶ್ಚಿಮ ಬಂಗಾಳದ ಜನರಿಗೆ ಅನ್ಯಾಯ ಮಾಡಿದ್ದಾರೆ ಎಂದು ಪ್ರಿಯಾಂಕಾ ವಾಗ್ದಾಳಿ ನಡೆಸಿದರು.
ಪ್ರಿಯಾಂಕಾ ಅವರು ಇಂದು ಭೋವಾನಿಪುರದಲ್ಲಿ ಗೋಡೆಯ ಮೇಲೆ ಪಕ್ಷದ ಚಿಹ್ನೆಯನ್ನು ಚಿತ್ರಿಸುವ ಮೂಲಕ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಜೊತೆಗೆ ಚುನಾವಣಾ ಪ್ರಚಾರವನ್ನು ಆರಂಭಿಸಿದರು.
Advertisement