ಗುವಾಹಟಿ: ಕ್ರಿಮಿನಲ್ ಪಿತೂರಿ ಸೇರಿದಂತೆ ವಿವಿಧ ಆರೋಪಗಳ ಮೇಲೆ ತ್ರಿಪುರಾದಲ್ಲಿ ಬಂಧಿತರಾಗಿದ್ದ ದೆಹಲಿ ಮೂಲದ ಇಬ್ಬರು ಮಹಿಳಾ ಪತ್ರಕರ್ತರಿಗೆ ಸ್ಥಳೀಯ ನ್ಯಾಯಾಲಯ ಸೋಮವಾರ ಜಾಮೀನು ಮಂಜೂರು ಮಾಡಿದೆ.
ಪತ್ರಕರ್ತರಾದ ಸಮೃದ್ಧಿ ಕೆ ಸಕುನಿಯಾ ಮತ್ತು ಸ್ವರ್ಣಾ ಝಾ ಅವರಿಗೆ ತ್ರಿಪುರಾದ ಗೋಮತಿ ಜಿಲ್ಲಾ ಚೀಫ್ ಜ್ಯೂಡಿಷಿಯಲ್ ಮ್ಯಾಜಿಸ್ಟ್ರೇಟ್(ಸಿಜೆಎಂ) ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಅಲ್ಲದೆ ಮಂಗಳವಾರ ಸ್ಥಳೀಯ ಪೊಲೀಸ್ ಠಾಣೆಗೆ ಹಾಜರಾಗುವಂತೆ ನ್ಯಾಯಾಲಯ ಇಬ್ಬರಿಗೂ ಸೂಚಿಸಿದೆ.
ರಾಜ್ಯದ ಮಸೀದಿಯೊಂದರಲ್ಲಿ ನಡೆದ ವಿಧ್ವಂಸಕ ಕೃತ್ಯದ ಕುರಿತು ವರದಿ ಮಾಡಿದ್ದಕ್ಕಾಗಿ ಈ ಇಬ್ಬರೂ ಮಹಿಳಾ ಪತ್ರಕರ್ತರನ್ನು ಬಂಧಿಸಲಾಗಿತ್ತು.
ಎಚ್ಡಬ್ಲ್ಯೂ ನ್ಯೂಸ್ ನೆಟ್ವರ್ಕ್ಗಾಗಿ ಕೆಲಸ ಮಾಡುವ ಈ ಪತ್ರಕರ್ತರು ತ್ರಿಪುರಾದಲ್ಲಿ ಇತ್ತೀಚಿನ ಹಿಂಸಾಚಾರವನ್ನು ವರದಿ ಮಾಡುತ್ತಿದ್ದರು.
ತ್ರಿಪುರಾದಲ್ಲಿ ನಡೆದ ಇತ್ತೀಚಿನ ಕೋಮು ಘಟನೆಗಳ ಬಗ್ಗೆ ವರದಿ ಮಾಡಲು ತ್ರಿಪುರಾಕ್ಕೆ ಬಂದಿದ್ದ ಇಬ್ಬರನ್ನು ಅಸ್ಸಾಂ ಪೊಲೀಸರು ಭಾನುವಾರ ಅಸ್ಸಾಂ-ತ್ರಿಪುರಾ ಗಡಿಗೆ ಸಮೀಪವಿರುವ ಕರೀಮ್ಗಂಜ್ನ ನೀಲಂ ಬಜಾರ್ನಲ್ಲಿ ಬಂಧಿಸಿದ್ದರು.
ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಪತ್ರಕರ್ತರ ವಿರುದ್ಧದ ಪೊಲೀಸ್ ಕ್ರಮವನ್ನು ಖಂಡಿಸಿತ್ತು ಮತ್ತು ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿತ್ತು.
Advertisement