ಚಂಡೀಗಢ: ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ರಾಜೀನಾಮೆ ಪಡೆದಿದ್ದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಲ್ಲ. ಆದರೆ ಪಕ್ಷದ 78 ಶಾಸಕರು ಅವರನ್ನು ತೆಗೆದುಹಾಕುವಂತೆ ಒತ್ತಾಯಿಸಿದ್ದರು. ಹೀಗಾಗಿ ಅವರು ರಾಜೀನಾಮೆ ನೀಡಬೇಕಾಯಿತು ಎಂದು ಕಾಂಗ್ರೆಸ್ ನಾಯಕ ರಂದೀಪ್ ಸಿಂಗ್ ಸುರ್ಜೇವಾಲಾ ಅವರು ಶನಿವಾರ ಹೇಳಿದ್ದಾರೆ.
ಪಂಜಾಬ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಕಾಂಗ್ರೆಸ್ ನಾಯಕತ್ವ ತನ್ನನ್ನು ಅವಮಾನಿಸಿದೆ ಎಂದು ಅಮರೀಂದರ್ ಸಿಂಗ್ ಅವರು ಆರೋಪಿಸಿದ್ದರಿಂದ ಸುರ್ಜೆವಾಲಾ ಅವರು ಈ ಹೇಳಿಕೆ ನೀಡಿದ್ದಾರೆ.
ಯಾವುದೇ ಮುಖ್ಯಮಂತ್ರಿಯು ತನ್ನ ಎಲ್ಲ ಶಾಸಕರ ವಿಶ್ವಾಸ ಕಳೆದುಕೊಂಡಾಗ ಅವರು ತಮ್ಮ ಸ್ಥಾನದಲ್ಲಿ ಉಳಿಯಬಾರದು ಎಂದು
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರ್ಜೆವಾಲಾ ಅವರು ಹೇಳಿದ್ದಾರೆ.
"79 ಶಾಸಕರಲ್ಲಿ(ಪಂಜಾಬ್ನಲ್ಲಿ) ಎಪ್ಪತ್ತೆಂಟು ಶಾಸತರು ಮುಖ್ಯಮಂತ್ರಿ ಬದಲಾವಣೆ ಮಾಡುವಂತೆ ಒತ್ತಾಯಿಸಿ ಪತ್ರ ಬರೆದಿದ್ದಾರೆ. ನಾವು ಸಿಎಂ ಬದಲಿಸದಿದ್ದರೆ ನೀವು ನಮ್ಮನ್ನು ಸರ್ವಾಧಿಕಾರಿ ಎಂದು ಆರೋಪಿಸುತ್ತೀರಿ. ಎಪ್ಪತ್ತೆಂಟು ಶಾಸಕರು ಒಂದು ಕಡೆ ಮತ್ತು ಸಿಎಂ ಇನ್ನೊಂದು ಬದಿಯಲ್ಲಿದ್ದರೆ ನೀವು ಯಾರ ಮಾತು ಕೇಳುತ್ತೀರಿ" ಎಂದು ಸುರ್ಜೆವಾಲಾ ಅವರು ಮಾಧ್ಯಮವನ್ನು ಪ್ರಶ್ನಿಸಿದರು.
Advertisement