ಶೋಪಿಯಾನ್: ಶ್ರೀನಗರದಲ್ಲಿ ಇತ್ತೀಚಿಗೆ ಸ್ಥಳೀಯರಲ್ಲದ ಬೀದಿ ವ್ಯಾಪಾರಿಯನ್ನು ಹತ್ಯೆ ಮಾಡಿದ್ದ ಉಗ್ರ ಸೇರಿದಂತೆ ಐವರು ಉಗ್ರರನ್ನು ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಇಂದು ನಡೆದ ಎರಡು ಪ್ರತ್ಯೇಕ ಎನ್ ಕೌಂಟರ್ ಗಳಲ್ಲಿ ಭದ್ರತಾ ಪಡೆಗಳು ಹತ್ಯೆ ಮಾಡಿರುವುದಾಗಿ ಪೊಲೀಸರು ಮಂಗಳವಾರ ಹೇಳಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಶೋಪಿಯಾನ್ ನ ತುಲ್ರಾನ್ ಮತ್ತು ಫೀರಿಪೋರಾ ಗ್ರಾಮದಲ್ಲಿ ಉಗ್ರರು ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ, ಐವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಇದರಲ್ಲಿ ಇತ್ತೀಚಿಗೆ ಶ್ರೀನಗರದ ಲಾಲ್ ಬಜಾರ್ ಪ್ರದೇಶದಲ್ಲಿ ಸ್ಥಳೀಯರಲ್ಲದ ಬೀದಿ ವ್ಯಾಪಾರಿಯನ್ನು ಹತ್ಯೆ ಮಾಡಿದ್ದ ಉಗ್ರ ಮುಖ್ತರ್ ಶಾ ಕೂಡಾ ಹತನಾಗಿರುವುದಾಗಿ ಪೊಲೀಸ್ ವಕ್ತಾರರೊಬ್ಬರು ತಿಳಿಸಿದ್ದಾರೆ.
ದಕ್ಷಿಣ ಕಾಶ್ಮೀರದ ಎರಡು ಹಳ್ಳಿಯಲ್ಲಿ ಉಗ್ರರು ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿ, ಎನ್ ಕೌಂಟರ್ ನಡೆಸಲಾಗಿದೆ. ತುಲ್ರಾನ್ ನಲ್ಲಿ ಶರಣಾಗುವಂತೆ ಉಗ್ರರಿಗೆ ಪದೇ ಪದೇ ಹೇಳಿದರೂ ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪ್ರತಿ ದಾಳಿಯಲ್ಲಿ ಉಗ್ರರನ್ನು ಹತ್ಯೆ ಮಾಡಲಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.
Advertisement