"ಸಾವರ್ಕರ್ ಭಾರತದ ರಾಷ್ಟ್ರಪಿತ": ಬಿಜೆಪಿಯಿಂದ ಶೀಘ್ರವೇ ಇಂತಹ ಘೋಷಣೆಯಾಗಲಿದೆ ಎಂದ ಓವೈಸಿ

ಬಿಜೆಪಿ ಸಾವರ್ಕರ್ ಅವರನ್ನು ರಾಷ್ಟ್ರಪಿತ ಎಂದು ಘೋಷಿಸಲಿದೆ" ಎಂದು ಎಂಐಎಂ ಪಕ್ಷದ ಸ್ಥಾಪಕ ಓವೈಸಿ ಆರೋಪಿಸಿದ್ದಾರೆ.
ಅಸಾದುದ್ದೀನ್ ಓವೈಸಿ
ಅಸಾದುದ್ದೀನ್ ಓವೈಸಿ

ನವದೆಹಲಿ: ಮಹಾತ್ಮ ಗಾಂಧಿ ಅವರ ಮನವಿಯ ಮೇರೆಗೆ ಸಾವರ್ಕರ್ ಅವರು ಬ್ರಿಟಿಷರಿಗೆ ಕ್ಷಮಾದಾನ ಅರ್ಜಿಗಳನ್ನು ಬರೆದಿದ್ದರು ಎಂಬ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಗೆ ಎಂಐಎಂ ನಾಯಕ ಓವೈಸಿ ಪ್ರತಿಕ್ರಿಯೆ ನೀಡಿದ್ದು "ಬಿಜೆಪಿ ಸಾವರ್ಕರ್ ಅವರನ್ನು ರಾಷ್ಟ್ರಪಿತ ಎಂದು ಘೋಷಿಸಲಿದೆ" ಎಂದಿದ್ದಾರೆ.

"ಬಿಜೆಪಿಗರು ತಿರುಚಿದ ಇತಿಹಾಸವನ್ನು ಮಂಡಿಸುತ್ತಿದ್ದಾರೆ. ಇದು ಇದೇ ರೀತಿ ಮುಂದುವರೆದಲ್ಲಿ ಮಹಾತ್ಮ ಗಾಂಧಿ ಅವರ ಬದಲಾಗಿ, ಸಾವರ್ಕರ್ ಅವರನ್ನೇ ರಾಷ್ಟ್ರಪಿತ ಎಂದು ಘೋಷಿಸಲಿದ್ದಾರೆ" ಎಂದು ಓವೈಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ನಡೆದ "ವೀರ್ ಸಾವರ್ಕರ್: ಭಾರತದ ಇಬ್ಭಾಗವನ್ನು ತಡೆಯಬಹುದಾಗಿದ್ದ ವ್ಯಕ್ತಿ" ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರಾಜನಾಥ್ ಸಿಂಗ್, "ಸಾವರ್ಕರ್ ಅವರು ಬ್ರಿಟೀಷರಿಗೆ ಕ್ಷಮಾದಾನ ಅರ್ಜಿಗಳನ್ನು ಬರೆದಿದ್ದು ಮಹಾತ್ಮ ಗಾಂಧಿ ಅವರ ಮನವಿಯ ಮೇರೆಗೆ" ಎಂದು ಹೇಳಿದ್ದರು.

"ಸಾವರ್ಕರ್ ಬಗ್ಗೆ ಸುಳ್ಳುಗಳ ಪ್ರಚಾರ ನಡೆಯಿತು. ಸಾವರ್ಕರ್ ತಮ್ಮ ಬಿಡುಗಡೆಗಾಗಿ ಬ್ರಿಟೀಷರಿಗೆ ಕ್ಷಮಾದಾನ ಅರ್ಜಿ ಬರೆದಿದ್ದರು ಎಂಬ ಆರೋಪವನ್ನು ಪದೇ ಪದೇ ಮಾಡಲಾಗುತ್ತದೆ.  ಆದರೆ ಈ ರೀತಿ ಕ್ಷಮಾದಾನ ಅರ್ಜಿ ಬರೆಯುವುದಕ್ಕೆ ಸಾವರ್ಕರ್ ಗೆ ಹೇಳಿದ್ದು ಮಹಾತ್ಮ ಗಾಂಧಿ ಅವರು" ಎಂದು ರಾಜನಾಥ್ ಸಿಂಗ್ ಕಾರ್ಯಕ್ರಮದಲ್ಲಿ ಉಲ್ಲೇಖಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com