

ಆಗ್ರಾ: ಬಿಜೆಪಿ ಸರ್ಕಾರ ಪ್ರತಿಭಟಿಸುತ್ತಿರುವ ರೈತರಿಗೆ ಗೌರವ ನೀಡಬೇಕು ಮತ್ತು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಸೋಮವಾರ ಕೇಂದ್ರ ಸರ್ಕಾವನ್ನು ಒತ್ತಾಯಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲೇಶ್ ಯಾದವ್, ರೈತರಿಗೆ ಯಾವುದೇ ಅವಮಾನವನ್ನು ದೇಶ ಸಹಿಸುವುದಿಲ್ಲ ಎಂದರು. ಅಲ್ಲದೆ ಮುಜಾಫರ್ ನಗರದಲ್ಲಿ ಭಾನುವಾರ ನಡೆದ 'ಕಿಸಾನ್ ಮಹಾಪಂಚಾಯತ್' ಅನ್ನು ಉಲ್ಲೇಖಿಸಿ, "ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ಒಗ್ಗೂಡಿದ್ದಕ್ಕಾಗಿ ನಾನು ರೈತರನ್ನು ಅಭಿನಂದಿಸುತ್ತೇನೆ.
ಬಿಜೆಪಿ ರೈತರಿಗೆ ತೋರಿಸಿದ ಕನಸುಗಳು, ರೈತರ ಆದಾಯ ದ್ವಿಗುಣಗೊಳ್ಳುವ ಭರವಸೆ ಯಾವುದೇ ಈಡೇರಿಲ್ಲ. ರೈತರ ಆದಾಯ ದುಪ್ಪಟ್ಟಾಗಲಿಲ್ಲ, ಬದಲಾಗಿ ಹಣದುಬ್ಬರ ಹೆಚ್ಚಾಯಿತು. ಎಂದರು.
"ಬಿಜೆಪಿ ಸರ್ಕಾರವು ರೈತರ ಹೋರಾಟವನ್ನು ಗೌರವಿಸಬೇಕು ಮತ್ತು ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು. ರೈತರಿಗೆ ಯಾವುದೇ ಅವಮಾನವನ್ನು ದೇಶ ಒಪ್ಪುವುದಿಲ್ಲ" ಎಂದು ಅವರು ಹೇಳಿದರು.
ಅಖಿಲೇಶ್ ಯಾದವ್ ಅವರು ಆಗ್ರಾದಲ್ಲಿ ಕೋವಿಡ್ -19 ಎರಡನೇ ಅಲೆಯಲ್ಲಿ ಮೃತಪಟ್ಟ ತಮ್ಮ ಪಕ್ಷದ ನಾಯಕರ ಕುಟುಂಬ ಸದಸ್ಯರನ್ನು ಭೇಟಿಯಾಗಲು ಬಂದಿದ್ದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಉತ್ತರ ಪ್ರದೇಶ ಮಾಜಿ ಸಿಎಂ, ತನ್ನ ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್ ಸ್ಥಾಪಿಸಿದ ಪ್ರಗತಿಶೀಲ್ ಸಮಾಜವಾದಿ ಪಕ್ಷಕ್ಕೆ(ಲೋಹಿಯಾ) ಎಸ್ಪಿ ಜಸ್ವಂತ್ನಗರ್ ವಿಧಾನಸಭಾ ಸ್ಥಾನವನ್ನು ಬಿಟ್ಟಿರುವುದಾಗಿ ಹೇಳಿದರು ಮತ್ತು ತಮ್ಮ ಪಕ್ಷವು ಅವರ ಸಹಚರರನ್ನು ಗೌರವಿಸುತ್ತದೆ ಎಂದರು.
2022 ರ ವಿಧಾನಸಭಾ ಚುನಾವಣೆಗೆ ಮೈತ್ರಿ ಮಾಡಿಕೊಳ್ಳುವ ಸಂದರ್ಭದಲ್ಲಿ, ನಮ್ಮ ಪಕ್ಷವು ಸಣ್ಣ ಪಕ್ಷಗಳೊಂದಿಗೆ ಕೈಜೋಡಿಸುತ್ತದೆ ಎಂದು ಹೇಳಿದ ಅಖಿಲೇಶ್ ಯಾದವ್, ಬಿಎಸ್ಪಿಯೊಂದಿಗೆ ಯಾವುದೇ ಮೈತ್ರಿ ಇಲ್ಲ ಎಂದು ಸ್ಪಷ್ಟಪಡಿಸಿದರು.