ಹೈದರಾಬಾದ್: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಮತ್ತು ಸಂಸದ ಎ ರೇವಂತ್ ರೆಡ್ಡಿ ಅವರ ವಿರುದ್ಧ ತೆಲಂಗಾಣ ಐಟಿ ಮತ್ತು ಕೈಗಾರಿಕಾ ಸಚಿವ, ಟಿಆರ್ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮರಾವ್ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ರೇವಂತ್ ರೆಡ್ಡಿ ಅವರು ಧೈರ್ಯ ಇದ್ದರೆ ಮಾದಕ ದ್ರವ್ಯ ಪರೀಕ್ಷೆಗೆ ಮಾದರಿ ನೀಡಲು ಹೈದರಾಬಾದಿನ ಹುತಾತ್ಮರ ಸ್ಮಾರಕಕ್ಕೆ ಬರುವಂತೆ ರಾಮರಾವ್ ಅವರಿಗೆ ಸವಾಲು ಹಾಕಿದ್ದರು. ಅಲ್ಲದೆ ತಾವು ಡ್ರಗ್ಸ್ ಪರೀಕ್ಷೆಗೆ ಮಾದರಿ ನೀಡಲು ಅಲ್ಲಿಗೆ ಬರುವುದಾಗಿ ರೇವಂತ್ ರೆಡ್ಡಿ ಹೇಳಿದ್ದರು ಮತ್ತು ರೇವಂತ್ ರೆಡ್ಡಿ ತಮ್ಮ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಹುತಾತ್ಮರ ಸ್ಮಾರಕ ಆಗಮಸಿದ್ದರು.
ಇದರಿಂದ ಆಕ್ರೋಶಗೊಂಡ ಕೆಟಿಆರ್ ಅವರು ರೇವಂತ್ ರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ ಮತ್ತು ತಾವು ದೆಹಲಿಯ ಏಮ್ಸ್ ನಲ್ಲಿ ಡ್ರಗ್ಸ್ ಪರೀಕ್ಷೆಗೆ ಮಾದರಿ ನೀಡಲು ಸಿದ್ಧ ಎಂದು ಹೇಳಿದ್ದಾರೆ. ಅಲ್ಲದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಏಮ್ಸ್ ಗೆ ಬಂದು ಅವರ ಮಾದರಿಗಳನ್ನು ನೀಡಲಿ ಎಂದು ಪ್ರತಿ ಸವಾಲು ಹಾಕಿದ್ದಾರೆ.
ರಾಮರಾವ್ ಮತ್ತು ರೇವಂತ್ ರೆಡ್ಡಿ ಇಬ್ಬರೂ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟರ್ ನಲ್ಲಿ ಪರಸ್ಪರ ಆರೋಪ ಪತ್ಯಾರೋಪ ಮತ್ತು ಸವಾಲುಗಳನ್ನು ಹಾಕುತ್ತಿದ್ದಾರೆ.
ಕೆಟಿಆರ್ ಡ್ರಗ್ಸ್ ರಾಯಭಾರಿ ಎಂದು ತೆಲಂಗಾಣ ಕಾಂಗ್ರೆಸ್ ಆರೋಪ ಮಾಡಿದೆ. ಟಾಲಿವುಡ್ ಡ್ರಗ್ಸ್ ಪ್ರಕರಣದಲ್ಲಿ ಅನೇಕ ನಟ-ನಟಿಯರ ಹೆಸರು ಕೇಳಿ ಬಂದಿದ್ದು, ಈಗಾಗಲೇ ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೊಳಪಡಿಸಲಾಗುತ್ತಿದೆ. ಇದರ ಮಧ್ಯೆ ಸಚಿವರು ಹಾಗೂ ತೆಲಂಗಾಣ ರಾಷ್ಟ್ರ ಸಮಿತಿಯ ಕಾರ್ಯಾಧ್ಯಕ್ಷರಾಗಿರುವ ಕೆ ಟಿ ರಾಮರಾವ್ ಮೇಲೆ ಕಾಂಗ್ರೆಸ್ ಭೀರ ಆರೋಪ ಮಾಡಿತ್ತು.
Advertisement