ಮುಂದಿನ ತಿಂಗಳು ಕಾಂಗ್ರೆಸ್ಗೆ ಗಾಂಧಿಯೇತರ ಅಧ್ಯಕ್ಷರ ನೇಮಕ?
ನವದೆಹಲಿ: ಕಳೆದ ಮೂರು ದಶಕಗಳ ಹಿಂದೆ ಗಾಂಧಿಯೇತರ ಅಧ್ಯಕ್ಷರಾಗಿದ್ದ ಸೀತಾರಾಮ್ ಕೇಸ್ರಿ ಅವರನ್ನು ಅಧಿಕಾರದಿಂದ ಅನೌಪಚಾರಿಕವಾಗಿ ತೆಗೆದುಹಾಕಿ ಅವರ ಸ್ಥಾನಕ್ಕೆ ಸೋನಿಯಾ ಗಾಂಧಿ ಅವರನ್ನು ನೇಮಿಸಲಾಯಿತು. ಅಂದಿನಿಂದ ಇಂದಿನವರೆಗೆ ಗಾಂಧಿಯೇತರರಿಗೆ ಅವಕಾಶ ಸಿಕ್ಕಿರಲಿಲ್ಲ.
ಇದೀಗ ಕಾಂಗ್ರೆಸ್ ಅಧ್ಯಕ್ಷರಾಗಿ ಮರು ಆಯ್ಕೆಯಾಗಲು ರಾಹುಲ್ ಗಾಂಧಿ ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಂಗಾಮಿ ಮುಖ್ಯಸ್ಥೆಯಾಗಿ ಅಧಿಕಾರ ನಡೆಸುತ್ತಿರುವ ಸೋನಿಯಾ ಗಾಂಧಿ ಕೂಡ ಆರೋಗ್ಯದ ಕಾರಣ ನೀಡಿ ಆ ಹುದ್ದೆಯಲ್ಲಿ ಮುಂದುವರಿಯದಿರಲು ಇಚ್ಛಿಸಿದ್ದಾರೆ. ರಾಹುಲ್ ಮತ್ತು ಸೋನಿಯಾ ತೆಗೆದುಕೊಂಡ ನಿರ್ಧಾರ ಪಕ್ಷದ ವ್ಯವಸ್ಥಾಪಕರನ್ನು ಕಂಗಾಲಾಗಿಸಿದೆ. ಪಕ್ಷವನ್ನು ಮುನ್ನಡೆಸಲು ರಾಹುಲ್ ಮನವೊಲಿಸುವ ಪ್ರಯತ್ನಗಳು ಇನ್ನೂ ನಡೆಯುತ್ತಿವೆಯಾದರೂ ಅವರು ಇದಕ್ಕೆ ಬಗ್ಗುತ್ತಿಲ್ಲ ಎಂದು ಆಂತರಿಕ ಮೂಲಗಳು ತಿಳಿಸಿವೆ.
2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ಹೊಣೆ ಹೊತ್ತು ರಾಹುಲ್ ರಾಜೀನಾಮೆ ನೀಡಿದಾಗ, ಸಿಡಬ್ಲ್ಯೂಸಿ ಅವರ ರಾಜೀನಾಮೆಯನ್ನು ಸರ್ವಾನುಮತದಿಂದ ತಿರಸ್ಕರಿಸಿತ್ತು. ಆದರೆ ಅವರು ಮುಂದುವರಿಯಲು ನಿರಾಕರಿಸಿದ್ದರು. ಪಕ್ಷದ ಅಧ್ಯಕ್ಷರು ಗಾಂಧಿ ಕುಟುಂಬದವರೇ ಆಗಬೇಕು ಎಂಬ ಅಗತ್ಯವಿಲ್ಲ ಎಂದೂ ಅವರು ಹೇಳಿದ್ದರು.
ಪಕ್ಷದ ನಾಯಕರು ಬೇರೆ ಆಯ್ಕೆಗಳ ಬಗ್ಗೆ ಚರ್ಚೆ ಆರಂಭಿಸಿದ್ದಾರೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಪಕ್ಷದ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್, ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್, ಮಾಜಿ ಹಣಕಾಸು ಸಚಿವ ಪಿ ಚಿದಂಬರಂ, ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರುಗಳು ಕೇಳಿಬರುತ್ತಿವೆ.
ಇನ್ನು ಪಕ್ಷದ ಕಿರಿಯರು ಕೂಡ ಉನ್ನತ ಹುದ್ದೆಗೆ ಏರುವ ಭರವಸೆಯಲ್ಲಿದ್ದಾರೆ. ಆದರೆ ಯುವ ನಾಯಕರಾದ ಜ್ಯೋತಿರಾದಿತ್ಯ ಸಿಂಧಿಯಾ, ಜಿತಿನ್ ಪ್ರಸಾದ, ಸುಶ್ಮಿತಾ ದೇಬ್, ಆರ್ಪಿಎನ್ ಸಿಂಗ್, ಕುಲದೀಪ್ ಬಿಷ್ಣೋಯ್, ಅಶೋಕ್ ತನ್ವರ್, ಅಶೋಕ್ ಚೌಧರಿ ಮುಂತಾದವರು ಪಕ್ಷ ತೊರೆದಿರುವುದು ಯುವ ನಾಯಕರ ಮೇಲೆ ವಿಶ್ವಾಸ ಕಳೆದುಕೊಳ್ಳುವಂತೆ ಮಾಡಿದೆ.
ಕಾಂಗ್ರೆಸ್ ಪಕ್ಷದ ಬಂಡಾಯದ ಗುಂಪು ಎಂದೇ ಕರೆಯಲ್ಪಡುವ ಜಿ-23 ನಾಯಕರು ಸಹ ಅಧ್ಯಕ್ಷ ಮತ್ತು ಸಿಡಬ್ಲ್ಯೂಸಿ ಸದಸ್ಯರ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಮೂಲಕ ಕಣಕ್ಕಿಳಿಯುವ ಸಾಧ್ಯತೆಯಿದೆ.
ಚುನಾವಣೆಯ ಪ್ರಕ್ರಿಯೆಯು ಆಗಸ್ಟ್ 21ರಂದು ಪ್ರಾರಂಭವಾಗಲಿದ್ದು 2022ರ ಸೆಪ್ಟೆಂಬರ್ 20ರಂದು ಹೊಸ ಅಧ್ಯಕ್ಷರ ಆಯ್ಕೆಯೊಂದಿಗೆ ಮುಕ್ತಾಯಗೊಳ್ಳುತ್ತದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ