ದೇವಾಲಯಕ್ಕೆ ಮುಸ್ಲಿಂ ಸಚಿವನ ಭೇಟಿಗೆ ಬಿಹಾರ ಬಿಜೆಪಿ ಆಕ್ಷೇಪ!
ಗಯಾ: ಹಿಂದೂಯೇತರ ಮತೀಯರ ಪ್ರವೇಶಕ್ಕೆ ನಿರ್ಬಂಧವಿರುವ ದೇವಾಲಯಕ್ಕೆ ಅನ್ಯಮತೀಯರನ್ನು ದೇವಾಲಯಕ್ಕೆ ಕರೆದೊಯ್ಯುವ ಮೂಲಕ ಬಿಹಾರ ಸಿಎಂ ನಿತೀಶ್ ಕುಮಾರ್ ಹಿಂದೂ ಸಂವೇದನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಸೋಮವಾರದಂದು ಸಿಎಂ ನಿತೀಶ್ ಕುಮಾರ್ ಗಯಾದಲ್ಲಿನ ವಿಷ್ಣುಪಾದ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದರು. ಈ ವೇಳೆ ಅವರೊಂದಿಗೆ ಹೊಸ ಮಿತ್ರ ಪಕ್ಷ ರಾಷ್ಟ್ರೀಯ ಜನತಾದಳ ಪಕ್ಷದ ಸಚಿವ ಸಂಪುಟ ಸಹೋದ್ಯೋಗಿ ಮೊಹಮ್ಮದ್ ಇಸ್ರಾಯ್ಲ್ ಮನ್ಸೂರಿ ಅವರು ದೇವಾಲಯಕ್ಕೆ ಭೇಟಿ ನೀಡಿದ್ದರು ಈ ಹಿನ್ನೆಲೆಯಲ್ಲಿ ಬಿಜೆಪಿ ನಿತೀಶ್ ಕುಮಾರ್ ವಿರುದ್ಧ ಆರೋಪ ಮಾಡಿದೆ.
ಮಾಹಿತಿ ತಂತ್ರಜ್ಞಾನದ ಖಾತೆ ಹೊಂದಿರುವ ಮನ್ಸೂರಿ, ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿ, ಸಿಎಂ ಜೊತೆಗೆ ದೇವಾಲಯದ ದರ್ಶನಕ್ಕೆ ಅವಕಾಶ ಸಿಕ್ಕಿದ್ದಕ್ಕೆ ಧನ್ಯನಾದೆ ಎಂದು ಹೇಳಿದ್ದರು. ಮನ್ಸೂರಿ ಗಯ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿದ್ದಾರೆ.
ಮನ್ಸೂರಿ ಗಯಾ ದೇವಾಲಯಕ್ಕೆ ಭೇಟಿ ನೀಡಿದ್ದಕ್ಕೆ ಕಿಡಿ ಕಾರಿರುವ ಬಿಹಾರ ಬಿಜೆಪಿ ಅಧ್ಯಕ್ಷ ಸಂಜಯ್ ಜೈಸ್ವಾಲ್, ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸಿಎಂ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ. ಸಹಿಷ್ಣುತೆಯ ಹೆಸರಿನಲ್ಲಿ ಪ್ರತಿ ಬಾರಿಯೂ ಹಿಂದೂಗಳೇ ಏಕೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ