ಅಂಬಾಲ: ಹರಿಯಾಣದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಆರು ಮಂದಿ ನಿಗೂಢವಾಗಿ ಸಾವನ್ನಪ್ಪಿದ್ದು, ಶುಕ್ರವಾರ ಬೆಳಗ್ಗೆ ಅಂಬಾಲ ನಗರ ಸಮೀಪದ ಹಳ್ಳಿಯೊಂದರ ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಸುಖ್ವಿಂದರ್ ಸಿಂಗ್(34), ಅವರ ಪತ್ನಿ ರೀನಾ(28), ಅವರ ಪುತ್ರಿಯರಾದ ಆಶು (5) ಮತ್ತು ಜಸ್ಸಿ (7), ಅವರ ತಂದೆ ಸಂಗತ್ ಸಿಂಗ್ (65), ತಾಯಿ ಮಹೀಂದ್ರೋ ಕೌರ್ (60) ಎಂದು ಗುರುತಿಸಲಾಗಿದೆ.
ಠಾಣಾಧಿಕಾರಿ(ನಗ್ಗಲ್) ಮನೀಶ್ ಕುಮಾರ್ ಮಾತನಾಡಿ, ಬಾಲಾನಾ ಗ್ರಾಮದ ಕೆಲವು ಸ್ಥಳೀಯರು ಘಟನೆಯ ಬಗ್ಗೆ ಬೆಳಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ನಾವು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಆರು ಶವಗಳು ಪತ್ತೆಯಾಗಿವೆ ಎಂದಿದ್ದಾರೆ.
ಸುಖ್ವಿಂದರ್ ಕೊಠಡಿಯೊಂದರಲ್ಲಿ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದರೆ, ಕುಟುಂಬದ ಇತರ ಸದಸ್ಯರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು ಎಂದು ಅವರು ಹೇಳಿದರು.
ಅವರನ್ನು ಅಂಬಾಲಾ ನಗರದ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಸುಖ್ವಿಂದರ್ ಅವರು ಸಾವಿಗೂ ಮುನ್ನ ಬರೆದ ಡೆತ್ ನೋಡ್ ಸಹ ಸ್ಥಳದಿಂದ ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಯಮುನಾನಗರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸುಖ್ವಿಂದರ್ ಅವರು, ಪತ್ರದಲ್ಲಿ, ಕಂಪನಿಯ ಇಬ್ಬರು ಅಧಿಕಾರಿಗಳು 10 ಲಕ್ಷ ರೂಪಾಯಿ ನೀಡುವಂತೆ ಒತ್ತಾಯಿಸುತ್ತಿದ್ದರು ಎಂದು ಆರೋಪಿಸಿದ್ದಾರೆ. ಅಲ್ಲದೆ ಆ ಪತ್ರದಲ್ಲಿ ಇಬ್ಬರು ಅಧಿಕಾರಿಗಳ ಹೆಸರನ್ನೂ ಉಲ್ಲೇಖಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಸುಖ್ವಿಂದರ್ ಸಿಂಗ್ ತಾನು ನೇಣು ಬಿಗಿದುಕೊಳ್ಳುವ ಮುನ್ನ ತನ್ನ ಕುಟುಂಬಕ್ಕೆ ವಿಷ ನೀಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
Advertisement