ಹಿಮಾಚಲ ಕಾಂಗ್ರೆಸ್‌ನಲ್ಲಿ ಯಾವುದೇ ಆಂತರಿಕ ಕಲಹ ಇಲ್ಲ; ಮುಖ್ಯಮಂತ್ರಿ ಹುದ್ದೆಗಾಗಿ ಮಾತ್ರ ಸಂಘರ್ಷವಿದೆ: ಸಿಎಂ ಸುಖು

ಹಿಮಾಚಲ ಪ್ರದೇಶ ಕಾಂಗ್ರೆಸ್‌ನಲ್ಲಿ ಯಾವುದೇ ಆಂತರಿಕ ಕಲಹವಿಲ್ಲ. ಆದರೆ ಮೂರ್ನಾಲ್ಕು ಅಭ್ಯರ್ಥಿಗಳಿಂದ ಮುಖ್ಯಮಂತ್ರಿ ಸ್ಥಾನಕ್ಕಾಗಿ ಮಾತ್ರ ಬೇಡಿಕೆಯಿದೆ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಹೇಳಿದ್ದಾರೆ.
ಸುಖ್ವಿಂದರ್ ಸಿಂಗ್ ಸುಖು
ಸುಖ್ವಿಂದರ್ ಸಿಂಗ್ ಸುಖು
Updated on

ನವದೆಹಲಿ: ಹಿಮಾಚಲ ಪ್ರದೇಶ ಕಾಂಗ್ರೆಸ್‌ನಲ್ಲಿ ಯಾವುದೇ ಆಂತರಿಕ ಕಲಹವಿಲ್ಲ. ಆದರೆ ಮೂರ್ನಾಲ್ಕು ಅಭ್ಯರ್ಥಿಗಳಿಂದ ಮುಖ್ಯಮಂತ್ರಿ ಸ್ಥಾನಕ್ಕಾಗಿ ಮಾತ್ರ ಬೇಡಿಕೆಯಿದೆ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಹೇಳಿದ್ದಾರೆ. 

ಏನಾದರೂ ಅಚಾತುರ್ಯ ನಡೆದಿದ್ದರೆ ರಾಜ್ಯದಲ್ಲಿ ರಾಜಸ್ಥಾನದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ರಾಜ್ಯದಲ್ಲಿ ಯಾವುದೇ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋಗುವುದಿಲ್ಲ. ಇನ್ನು ನಮ್ಮ ಸರ್ಕಾರ ಜನರಿಗಾಗಿ ಕೆಲಸ ಮಾಡಲು ಬದ್ಧವಾಗಿದೆ ಎಂದು ಅವರು ಪ್ರತಿಪಾದಿಸಿದರು. ಮೊದಲ ಸಂಪುಟ ಸಭೆಯಲ್ಲಿ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಮರುಸ್ಥಾಪಿಸುವ ಭರವಸೆಯನ್ನು ಕಾಂಗ್ರೆಸ್ ಈಡೇರಿಸಲಿದೆ. ನಾವು ಹಣಕಾಸು ಕಾರ್ಯದರ್ಶಿಯೊಂದಿಗೆ ಮಾತನಾಡಿದ್ದೇವೆ ಎಂದು ಸುಖು ಹೇಳಿದರು. ನಾವು ಎಲ್ಲಿಂದ ಹಣವನ್ನು ಪಡೆಯಬೇಕು ಮತ್ತು ಎಲ್ಲಿ ಹೂಡಿಕೆ ಮಾಡಬೇಕು ಎಂದು ನಮಗೆ ತಿಳಿದಿದೆ. ಹಳೆಯ ಪಿಂಚಣಿ ಯೋಜನೆ ಆರಂಭಿಸುವ ಕೆಲಸ ಮಾಡಿದ್ದು, ಮೊದಲ ಸಂಪುಟ ಸಭೆಯಲ್ಲಿ ಮಂಡಿಸುತ್ತೇನೆ ಎಂದರು.

ಸಚಿವ ಸಂಪುಟ ವಿಸ್ತರಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಶೀಘ್ರವೇ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಸಚಿವ ಸ್ಥಾನಕ್ಕಾಗಿ ಕೆಲವು ಶಾಸಕರು ಲಾಬಿ ನಡೆಸುತ್ತಿದ್ದಾರೆ ಎಂಬ ಆರೋಪಗಳನ್ನು ತಳ್ಳಿ ಹಾಕಿದ ಅವರು, ಕಾಂಗ್ರೆಸ್‌ನ ರಾಜ್ಯ ಘಟಕದಲ್ಲಿ ಯಾವುದೇ ರೀತಿಯ ಆಂತರಿಕ ಕಲಹವಿಲ್ಲ. ಆದರೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಚ್ಚಾಟವಿದೆ ಎಂದು ಒಪ್ಪಿಕೊಂಡರು. 

ಸಂಘರ್ಷ ಇರುವುದು ಹುದ್ದೆಗಾಗಿ, ಇದು ಪಕ್ಷದ ಭಿನ್ನಾಭಿಪ್ರಾಯವಲ್ಲ. ಮೂರು-ನಾಲ್ಕು ಜನ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಲು ಸಿದ್ಧರಾಗಿದ್ದರು. ಇಲ್ಲಿಯವರೆಗೆ ನಾವು ಸಚಿವ ಸಂಪುಟ ವಿಸ್ತರಣೆ ಮಾಡಿಲ್ಲ, ಏನಾದರೂ ಅಚಾತುರ್ಯ ನಡೆದಿದ್ದರೆ ರಾಜಸ್ಥಾನದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವು 2020ರಲ್ಲಿ ಅವರ ಅಂದಿನ ಉಪ ಮತ್ತು ರಾಜ್ಯ ಪಕ್ಷದ ಅಧ್ಯಕ್ಷ ಸಚಿನ್ ಪೈಲಟ್ ಮತ್ತು ಇತರ ಕೆಲವು ಶಾಸಕರಿಂದ ಬಂಡಾಯವನ್ನು ಎದುರಿಸಿತು. ಕೆಲವು ಕಾಂಗ್ರೆಸ್ ಶಾಸಕರು ಬಿಜೆಪಿಯೊಂದಿಗೆ ಕೈಜೋಡಿಸಬಹುದು ಎಂಬ ವರದಿಗಳ ಬಗ್ಗೆ ಸುಖು ಪ್ರತಿಪಕ್ಷ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ನ ಯಾವೊಬ್ಬ ಸದಸ್ಯನೂ ಪಕ್ಷ ಬಿಡುವುದಿಲ್ಲ ಎಂದು ಹೇಳಿದರು. ಬಿಜೆಪಿಯ ದುರಾಡಳಿತದ ವಿರುದ್ಧ ರಾಜ್ಯದ ಜನತೆ ಮತ ಹಾಕಿದ್ದಾರೆ ಎಂದರು.

ದೇಶವು ನಿರುದ್ಯೋಗ, ಬೆಲೆ ಏರಿಕೆಯಂತಹ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಆದರೆ ಬಿಜೆಪಿಯು ರಾಹುಲ್ ಗಾಂಧಿ ಅವರ ಭಾಷಣವನ್ನು ಲೇವಡಿ ಮಾಡುವುದು ಸೇರಿದಂತೆ ಹಲವಾರು ಗಿಮಿಕ್‌ಗಳನ್ನು ಬಳಸಿ ಜನರ ಗಮನವನ್ನು ಮುಖ್ಯ ವಿಷಯದಿಂದ ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯನ್ನು ಶ್ಲಾಘಿಸಿದ ಅವರು, ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ಹರಡುತ್ತಿರುವ ದ್ವೇಷವನ್ನು ಹೋಗಲಾಡಿಸುವುದು ಮತ್ತು ಜನರನ್ನು ಒಗ್ಗೂಡಿಸುವುದು ಪಾದಯಾತ್ರೆಯ ಉದ್ದೇಶವಾಗಿದೆ ಎಂದರು. 

ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಲು ತಮ್ಮ ಸರ್ಕಾರ ಬದ್ಧವಾಗಿದ್ದು, ವಿಧಾನಸಭಾ ಚುನಾವಣೆಗೂ ಮುನ್ನ ಜನರಿಗೆ ನೀಡಿದ್ದ 10 ಭರವಸೆಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಹೇಳಿದರು. ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ತನ್ನ ಹಳೆಯ ಪಿಂಚಣಿ ಯೋಜನೆ ಮರುಸ್ಥಾಪನೆ, 300 ಯೂನಿಟ್ ಉಚಿತ ವಿದ್ಯುತ್, 680 ಕೋಟಿ ರೂ ಆರಂಭಿಕ ನಿಧಿ, ಒಂದು ಲಕ್ಷ ಉದ್ಯೋಗ, 18 ರಿಂದ 60 ವರ್ಷ ವಯಸ್ಸಿನ ಮಹಿಳೆಯರಿಗೆ ತಿಂಗಳಿಗೆ 1,500 ರೂ ಧನಸಹಾಯ ಭರವಸೆ. ಪ್ರತಿ ಗ್ರಾಮಗಳಲ್ಲಿ ಉಚಿತ ಚಿಕಿತ್ಸೆ ಮುಂತಾದ 10 ಭರವಸೆಗಳನ್ನು ನೀಡಿದ್ದರು. 

ಗುಡ್ಡಗಾಡು ರಾಜ್ಯವಾದ ಹಿಮಾಚಲದಲ್ಲಿ 68 ವಿಧಾನಸಭಾ ಸ್ಥಾನಗಳ ಪೈಕಿ 40 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಬಿಜೆಪಿಯಿಂದ ಅಧಿಕಾರವನ್ನು ಕಸಿದುಕೊಂಡಿತು. ರಾಜ್ಯ ಪಕ್ಷದ ಮುಖ್ಯಸ್ಥೆ ಪ್ರತಿಭಾ ಸಿಂಗ್ ಮತ್ತು ಮುಖೇಶ್ ಅಗ್ನಿಹೋತ್ರಿ ಸೇರಿದಂತೆ ಕೆಲವು ಇತರ ಸ್ಪರ್ಧಿಗಳಿಗಿಂತ ಪಕ್ಷವು 58 ವರ್ಷದ ಸುಖು ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿತು. ಹಮೀರ್‌ಪುರ ಜಿಲ್ಲೆಯ ನಾದೌನ್‌ನಿಂದ ನಾಲ್ಕು ಬಾರಿ ಶಾಸಕರಾಗಿರುವ ಸುಖು ಡಿಸೆಂಬರ್ 11ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅಗ್ನಿಹೋತ್ರಿ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com