ನವದೆಹಲಿ: ಚೀನಾ ಸೇರಿದಂತೆ ವಿಶ್ವದ ಕೆಲವು ರಾಷ್ಟ್ರಗಳಲ್ಲಿ ಮತ್ತೆ ಕೋವಿಡ್-19 ಉಲ್ಬಣ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ದೇಶದಲ್ಲಿ ಕೋವಿಡ್-19 ಸಂಬಂಧಿತ ಪರಿಸ್ಥಿತಿ ಕುರಿತು ಪರಾಮರ್ಶಿಸಲಾಯಿತು.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ, ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಸೇರಿದಂತೆ ಹಿರಿಯ ಅಧಿಕಾರಿಗಳು ವರ್ಚುಯಲ್ ಸಭೆಯಲ್ಲಿ ಪಾಲ್ಗೊಂಡರು.
ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸೋಂಕು ನಿರ್ವಹಣೆಗೆ ಕಟ್ಟುನಿಟ್ಟಾದ ನಿಗಾ ವಹಿಸುವಂತೆ ಸಲಹೆ ನೀಡಿದರು. ಜನದಟ್ಟಣೆಯ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಬಳಕೆಗೆ ಜನರನ್ನು ಒತ್ತಾಯಿಸಬೇಕು, ಕೋವಿಡ್-19 ಪರೀಕ್ಷೆ ಮತ್ತು ಜಿನೋಮಿಕ್ ಸಿಕ್ವೆನ್ಸಿಂಗ್ ಹೆಚ್ಚಿಸಬೇಕು, ವೃದ್ಧರು ಹಾಗೂ ದುರ್ಬಲ ಜನರು ಮುನ್ನೆಚ್ಚರಿಕೆ ಡೋಸ್ ಪಡೆಯುವಂತೆ ಪ್ರೋತ್ಸಾಹಿಸಬೇಕು ಎಂದರು.
ಆಕ್ಸಿಜನ್ ಸಿಲಿಂಡರ್ಗಳು, ಪಿಎಸ್ಎ ಪ್ಲಾಂಟ್ಗಳು, ವೆಂಟಿಲೇಟರ್ಗಳು ಮತ್ತು ಮಾನವ ಸಂಪನ್ಮೂಲ ಸೇರಿದಂತೆ ಆಸ್ಪತ್ರೆಯ ಮೂಲಸೌಕರ್ಯಗಳ ಕಾರ್ಯಾಚರಣೆಯ ಸಿದ್ಧತೆ ಖಚಿತಪಡಿಸಿಕೊಳ್ಳಲು ಕೋವಿಡ್ ನಿರ್ದಿಷ್ಟ ಸೌಲಭ್ಯಗಳನ್ನು ಲೆಕ್ಕಪರಿಶೋಧಿಸಲು ರಾಜ್ಯಗಳಿಗೆ ಪ್ರಧಾನಿ ಮೋದಿ ಸಲಹೆ ನೀಡಿದರು ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ.
Advertisement