ನವದೆಹಲಿ: ಸಶಸ್ತ್ರ ಪಡೆಗಳ ಪಿಂಚಣಿದಾರರು/ಕುಟುಂಬ ಪಿಂಚಣಿದಾರರ ಒನ್ ರ್ಯಾಂಕ್ ಒನ್ ಪೆನ್ಶನ್(ಒಆರ್ ಒಪಿ) ಅನ್ನು ಪರಿಷ್ಕರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಶುಕ್ರವಾರ ಒಪ್ಪಿಗೆ ನೀಡಿದೆ.
ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು, ಯುದ್ಧದಲ್ಲಿ ಮಡಿದ ಯೋಧರ ಪತ್ನಿಯರಿಗೆ ಮತ್ತು ಅಂಗವಿಕಲ ಪಿಂಚಣಿದಾರರು ಸೇರಿದಂತೆ ಕುಟುಂಬ ಪಿಂಚಣಿದಾರರಿಗೂ ಈ ಪ್ರಯೋಜನೆಯನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.
ಒಆರ್ಒಪಿ ಯೋಜನೆಯಡಿ ವಿವಿಧ ಸಮಯಗಳಲ್ಲಿ ನಿವೃತ್ತರಾದ ಒಂದೇ ಶ್ರೇಣಿಯ ಸೈನಿಕರು ಸಮಾನ ಪಿಂಚಣಿ ಪಡೆಯುತ್ತಾರೆ. ಅವರು ಯಾವುದೇ ಸಮಯದಲ್ಲಿ ನಿವೃತ್ತರಾಗಿದ್ದರೂ ಪಿಂಚಣಿ ಮೊತ್ತದಲ್ಲಿ ಏಕರೂಪತೆ ಇರುತ್ತದೆ ಎಂದು ಠಾಕೂರ್ ಹೇಳಿದ್ದಾರೆ.
ಬಾಕಿಯನ್ನು ನಾಲ್ಕು ಅರ್ಧವಾರ್ಷಿಕ ಕಂತುಗಳಲ್ಲಿ ಪಾವತಿಸಲಾಗುವುದು. ಆದಾಗ್ಯೂ, ವಿಶೇಷ/ಉದಾರೀಕೃತ ಕುಟುಂಬ ಪಿಂಚಣಿ ಮತ್ತು ಶೌರ್ಯ ಪ್ರಶಸ್ತಿ ವಿಜೇತರು ಸೇರಿದಂತೆ ಎಲ್ಲಾ ಕುಟುಂಬ ಪಿಂಚಣಿದಾರರಿಗೆ ಒಂದೇ ಕಂತಿನಲ್ಲಿ ಬಾಕಿಯನ್ನು ಪಾವತಿಸಲಾಗುತ್ತದೆ.
ಒಆರ್ ಒಪಿ ಯೋಜನೆ ಪರಿಷ್ಕರಣೆಯಿಂದ ಕೇಂದ್ರ ಸರ್ಕಾರಕ್ಕೆ 8,450 ಕೋಟಿ ರೂ.ಹೆಚ್ಚವರಿ ಹೊರೆಯಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ 2014ರಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ನಿವೃತ್ತ ಸೈನಿಕರಿಗೆ ಒನ್ ರ್ಯಾಂಕ್ ಒನ್ ಪೆನ್ಶನ್ (ಒಆರ್ಒಪಿ) ಯೋಜನೆ ಘೋಷಿಸಿತ್ತು. ಒಆರ್ಒಪಿ ಯೋಜನೆಯಡಿ ವಿವಿಧ ಸಮಯಗಳಲ್ಲಿ ನಿವೃತ್ತರಾದ ಒಂದೇ ಶ್ರೇಣಿಯ ಸೈನಿಕರು ಸಮಾನ ಪಿಂಚಣಿ ಪಡೆಯುತ್ತಾರೆ. ಅವರು ಯಾವುದೇ ಸಮಯದಲ್ಲಿ ನಿವೃತ್ತರಾಗಿದ್ದರೂ ಪಿಂಚಣಿ ಮೊತ್ತದಲ್ಲಿ ಏಕರೂಪತೆ ಇರುತ್ತದೆ.
Advertisement