ಸಂಸತ್ ಅಧಿವೇಶನ: ಜಿಎಸ್ ಟಿ, ಬೆಲೆ ಏರಿಕೆ ವಿರುದ್ಧ ಪ್ರತಿಪಕ್ಷಗಳ ಗದ್ದಲ; ಉಭಯ ಸದನಗಳ ಕಲಾಪ ಮಧ್ಯಾಹ್ನಕ್ಕೆ ಮುಂದೂಡಿಕೆ
ನವದೆಹಲಿ: ಮುಂಗಾರು ಅಧಿವೇಶನದ ಎರಡನೇ ದಿನವಾದ ಇಂದು ಕೂಡಾ ಕೆಲವು ಹೊಸ ಉತ್ಪನ್ನಗಳ ಮೇಲೆ ಜಿಎಸ್ ಟಿ ವಿಧಿಸಿರುವುದನ್ನು ವಿರೋಧಿಸಿ ಪ್ರತಿಪಕ್ಷಗಳಾದ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಡಿಎಂಕೆ ಮತ್ತಿತರ ಪಕ್ಷಗಳ ಸದಸ್ಯರು ಭಿತ್ತಿಪತ್ರ ಹಿಡಿದು, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಬೆಲೆ ಏರಿಕೆ ವಿರುದ್ಧ ಮೋದಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಗದ್ದಲ ಏಬ್ಬಿಸಿದರು. ಕೆಲವು ವಸ್ತುಗಳ ಮೇಲೆ ಮತ್ತೆ 'ಗಬ್ಬರ್ ಸಿಂಗ್ ಟ್ಯಾಕ್ಸ್ ' ಎಂದು ಬರೆಯಲಾದ ಭಿತ್ತಿಪತ್ರ ಪ್ರದರ್ಶಿಸಿ ಗದ್ದಲ ಉಂಟುಮಾಡಿದರು. ಪ್ರತಿಪಕ್ಷಗಳ ಸದಸ್ಯರು ತಮ್ಮ ಆಸನಗಳಿಗೆ ತೆರಳುವಂತೆ ಸ್ಪೀಕರ್ ಓಂ ಬಿರ್ಲಾ ಮನವಿ ಮಾಡಿದರು.
ಸದನದ ಒಳಗಡೆ ಭಿತ್ತಿಪತ್ರ ಹಿಡಿಯುವುದು ಸಂಸದೀಯ ನಿಯಮಗಳಿಗೆ ವಿರುದ್ಧವಾದದ್ದು ಎಂದರು. ಸ್ಪೀಕರ್ ಮನವಿಗೆ ಪ್ರತಿಪಕ್ಷಗಳ ಸದಸ್ಯರು ಕಿವಿಗೂಡದ ಹಿನ್ನೆಲೆಯಲ್ಲಿ 15 ನಿಮಿಷ ಕಲಾಪ ನಡೆಸಿ, ಮಧ್ಯಾಹ್ನ 2 ಗಂಟೆಯವರೆಗೂ ಮುಂದೂಡಲಾಯಿತು.
ಬೆಲೆ ಏರಿಕೆಯಿಂದ ಹಿಡಿದು ಅಗ್ನಿಪಥ ಯೋಜನೆಯವರೆಗಿನ ವಿಷಯಗಳ ಕುರಿತು ತಕ್ಷಣ ಚರ್ಚೆ ನಡೆಸುವಂತೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಪಟ್ಟು ಹಿಡಿದಿದ್ದರಿಂದ ರಾಜ್ಯಸಭೆ ಕಲಾಪವನ್ನು ಮಂಗಳವಾರ ಭೋಜನಾ ವಿರಾಮಕ್ಕೂ ಮುನ್ನ ಅಧಿವೇಶನದಲ್ಲಿ ಯಾವುದೇ ವ್ಯವಹಾರ ನಡೆಸದೆ ಮುಂದೂಡಲಾಯಿತು.
ಪ್ರಸ್ತಾಪಿತ ವಿಷಯಗಳ ಮೇಲಿನ ಚರ್ಚೆಗೆ ಕಾಂಗ್ರೆಸ್, ಎಡ ಹಾಗೂ ಎಎಪಿ ಒತ್ತಾಯಿಸಿದ್ದರಿಂದ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೂ ಮುಂದೂಡಲಾಯಿತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ