'ಇಡಿ ವಶಪಡಿಸಿಕೊಂಡ ಹಣ ನನಗೆ ಸೇರಿದ್ದಲ್ಲ, ನನ್ನ ವಿರುದ್ಧ ಪಿತೂರಿ ನಡೆದಿದೆ':  ಪಾರ್ಥ ಚಟರ್ಜಿ

ಬಹುಕೋಟಿ ಶಾಲಾ ಶಿಕ್ಷಕರ ನೇಮಕಾತಿ ಹಗರಣದ ಕೇಂದ್ರಬಿಂದುವಾಗಿರುವ ಬಂಧಿತನಾಗಿರುವ ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ, ಜಾರಿ ನಿರ್ದೇಶನಾಲಯದ ದಾಳಿ ವೇಳೆ ಸಿಕ್ಕಿರುವ ಹಣವು ತನಗೆ ಸೇರಿದ್ದಲ್ಲ ಎಂದು ಪ್ರತಿಪಾದಿಸಿದ್ದಾರೆ. ಅಲ್ಲದೆ ತಮ್ಮ ವಿರುದ್ಧ ಪಿತೂರಿ ನಡೆಸುತ್ತಿರುವವರು ಯಾರು ಎಂದು ಕಾಲವೇ ಉತ್ತರಿಸಲಿದೆ ಎಂದು ಹೇಳಿದ್ದಾರೆ.
ಟಿಎಂಸಿ ಉಚ್ಛಾಟಿತ ಸಚಿವ ಪಾರ್ಥ ಚಟರ್ಜಿ ಹಾಗೂ ಅರ್ಪಿತಾ ಮುಖರ್ಜಿ ವಿರುದ್ಧ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
ಟಿಎಂಸಿ ಉಚ್ಛಾಟಿತ ಸಚಿವ ಪಾರ್ಥ ಚಟರ್ಜಿ ಹಾಗೂ ಅರ್ಪಿತಾ ಮುಖರ್ಜಿ ವಿರುದ್ಧ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
Updated on

ಕೋಲ್ಕತ್ತಾ: ಬಹುಕೋಟಿ ಶಾಲಾ ಶಿಕ್ಷಕರ ನೇಮಕಾತಿ ಹಗರಣದ ಕೇಂದ್ರಬಿಂದುವಾಗಿರುವ ಬಂಧಿತನಾಗಿರುವ ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ, ಜಾರಿ ನಿರ್ದೇಶನಾಲಯದ ದಾಳಿ ವೇಳೆ ಸಿಕ್ಕಿರುವ ಹಣವು ತನಗೆ ಸೇರಿದ್ದಲ್ಲ ಎಂದು ಪ್ರತಿಪಾದಿಸಿದ್ದಾರೆ. ಅಲ್ಲದೆ ತಮ್ಮ ವಿರುದ್ಧ ಪಿತೂರಿ ನಡೆಸುತ್ತಿರುವವರು ಯಾರು ಎಂದು ಕಾಲವೇ ಉತ್ತರಿಸಲಿದೆ ಎಂದು ಹೇಳಿದ್ದಾರೆ.

ಕೋಲ್ಕತ್ತಾದ ಜೋಕಾದಲ್ಲಿರುವ ಇಎಸ್ಐ ಆಸ್ಪತ್ರೆಗೆ ಇಂದು ಅವರನ್ನು ವೈದ್ಯಕೀಯ ತಪಾಸಣೆಗಾಗಿ ಕರೆದೊಯ್ಯಲು ವಾಹನ ಹತ್ತಿಸುತ್ತಿದ್ದ ವೇಳೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಣ ನನ್ನದಲ್ಲ ಎಂದು ಹೇಳಿದ್ದಾರೆ.ಹಾಗಾದರೆ ತಮ್ಮ ವಿರುದ್ಧ ಯಾರಾದರೂ ಪಿತೂರಿ ನಡೆಸುತ್ತಿದ್ದಾರೆಯೇ ಎಂದು ಕೇಳಿದ್ದಕ್ಕೆ ಕಾಲ ಬಂದಾಗ ನಿಮಗೇ ಎಲ್ಲ ಗೊತ್ತಾಗುತ್ತದೆ ಎಂದರು. 

ತಾನು ಈ ಪ್ರಕರಣದಲ್ಲಿ ಪಿತೂರಿಯ ಬಲಿಪಶು ಆಗಿದ್ದೇನೆ ಎಂದಿದ್ದ ಪಾರ್ಥ ಚಟರ್ಜಿ ತೃಣಮೂಲ ಕಾಂಗ್ರೆಸ್ ತಮ್ಮನ್ನು ಅಮಾನತುಗೊಳಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ನನ್ನ ಅಮಾನತಿನಿಂದ ನಿಸ್ಪಕ್ಷಪಾತ ತನಿಖೆ ಮೇಲೆ ಪರಿಣಾಮ ಬೀರಬಹುದು ಎಂದಿದ್ದಾರೆ. 

ಅವರನ್ನು ಸಚಿವ ಸ್ಥಾನದಿಂದ ತೆಗೆದುಹಾಕಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತ ಎಂದು ಪರಿಗಣಿಸಲ್ಪಟ್ಟಿದ್ದ ಪಾರ್ಥ ಚಟರ್ಜಿ, ಮಮತಾ ಬ್ಯಾನರ್ಜಿಯವರ ನಿರ್ಧಾರ ಸರಿಯಾಗಿದೆ ಎಂದಿದ್ದಾರೆ. 

69ರ ಹರೆಯದ ಪಾರ್ಥ ಚಟರ್ಜಿ ವಿರುದ್ಧ ಗಂಭೀರ ಹಗರಣ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕಳೆದ ಗುರುವಾರ ಸಚಿವ ಸ್ಥಾನದಿಂದ ಮತ್ತು ಟಿಎಂಸಿಯಿಂದ ಅಮಾನತುಗೊಳಿಸಲಾಗಿತ್ತು. ಅವರನ್ನು ಪಕ್ಷದ ಎಲ್ಲಾ ಹುದ್ದೆಗಳಿಂದ ಕೂಡ ತೆಗೆದುಹಾಕಲಾಗಿದೆ. 
ಇನ್ನು ಅವರ ಆಪ್ತ ಸಹಾಯಕರಲ್ಲಿ ಒಬ್ಬರಾದ ಅರ್ಪಿತಾ ಮುಖರ್ಜಿ ಅವರ ನಿವಾಸ ಮೇಲೆ ದಾಳಿ ನಡೆಸಿದ್ದ ಸಂದರ್ಭದಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿದೆ. 

ಟಿಎಂಸಿ ನಾಯಕತ್ವ ಪಾರ್ಥ ಚಟರ್ಜಿಯವರ ಪರವಾಗಿ ರಕ್ಷಣೆಗೆ ಇದ್ದಂತಿಲ್ಲ. ಬಂಧನ ನಡೆದು ಇಷ್ಟು ದಿನವಾದರೂ ಅವರೇಕೆ ಮೌನವಾಗಿದ್ದಾರೆ, ತಮ್ಮ ಬಂಧನ ವಿರೋಧಿಸಿ ಕೋರ್ಟ್ ಗೆ ಹೋಗಲಿಲ್ಲವೇಕೆ, ಅವರು ಇದರಲ್ಲಿ ಅಮಾಯಕರು ಎನ್ನುವುದಾದರೆ ನ್ಯಾಯಾಲಯದಲ್ಲಿ ಹೋರಾಡುವ ಎಲ್ಲಾ ಹಕ್ಕುಗಳಿವೆ ಎಂದು ಟಿಎಂಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್ ಹೇಳಿದ್ದಾರೆ. 

ಕೋಲ್ಕತ್ತಾ ಹೈಕೋರ್ಟ್ ನಿರ್ದೇಶನದಂತೆ ಸಿಬಿಐ, ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದ ಶಿಫಾರಸಿನ ಮೇರೆಗೆ ಗ್ರೂಪ್-ಸಿ ಮತ್ತು -ಡಿ ಸಿಬ್ಬಂದಿ ಮತ್ತು ಸರ್ಕಾರಿ ಪ್ರಾಯೋಜಿತ ಮತ್ತು ಅನುದಾನಿತ ಶಾಲೆಗಳಲ್ಲಿನ ಶಿಕ್ಷಕರ ನೇಮಕಾತಿಯಲ್ಲಿನ ಅಕ್ರಮಗಳ ಬಗ್ಗೆ ತನಿಖೆ ನಡೆಸುತ್ತಿದೆ. ಹಗರಣದಲ್ಲಿ ಭಾಗಿಯಾಗಿರುವ ಹಣ ಯಾವ ಮೂಲದಿಂದ ಬಂದಿರಬಹುದು ಎಂದು ಜಾರಿ ನಿರ್ದೇಶನಾಲಯ(ED) ತನಿಖೆ ನಡೆಸುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com