ರಾಜೀವ್ ಗಾಂಧಿ ಹತ್ಯೆ ಪ್ರಕರಣ: ಆರು ಹಂತಕರ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ
ನವದೆಹಲಿ: ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣದ ಆರು ಹಂತಕರನ್ನು ಜೈಲಿನಿಂದ ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶ ನೀಡಿದೆ. ಈ ಪ್ರಕರಣದಲ್ಲಿ ನಳಿನಿ ಶ್ರೀ ಹರನ್ ಸೇರಿದಂತೆ ಐವರು ತಮಿಳುನಾಡಿನ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ಈ ಹಿಂದೆ ತಮಿಳುನಾಡು ಸರ್ಕಾರ ಕೂಡಾ ರಾಜೀವ್ ಗಾಂಧಿ ಹಂತಕರ ಬಿಡುಗಡೆಗೆ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ಇದನ್ನು ಸುಪ್ರೀಂ ಕೋರ್ಟ್ ಪರಿಗಣಿಸಿದ್ದು, ಅವರ ಬಿಡುಗಡೆಗೆ ಆದೇಶಿಸಿದೆ. ಮೇ ತಿಂಗಳಲ್ಲಿ ಮತ್ತೋರ್ವ ಆರೋಪಿ ಪೇರಾರಿವಾಳನ್ ಅವರನ್ನು ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿತ್ತು.
ನಳಿನಿ ಶ್ರೀ ಹರನ್ ಅಲ್ಲದೇ, ಶ್ರೀಹರನ್, ಸಂತನ್, ಮುರುಗನ್, ರಾಬರ್ಟ್ ಪಾಯಸ್ ಮತ್ತು ರವಿಚಂದ್ರನ್ ಜೈಲಿನಲ್ಲಿದ್ದಾರೆ. ಮೇ 21, 1991ಕಲ್ಲಿ ತಮಿಳುನಾಡಿನ ಪೆರಂಬೂರಿನಲ್ಲಿ ಎಲ್ ಟಿಟಿಐ ಗುಂಪಿನ ಮಹಿಳಾ ಆತ್ಯಾಹುತಿ ಬಾಂಬರ್ ಗಳಿಂದ ರಾಜೀವ್ ಗಾಂಧಿ ಅವರ ಹತ್ಯೆಯಾಗಿತ್ತು.
ನಳಿನಿ ಶ್ರೀಹರನ್ ಜೈಲಿನಿಂದ ಬಿಡುಗಡೆ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಸ್ವಗ್ರಾಮ ವೆಲ್ಲೂರಿನ ನಿವಾಸದ ಮುಂದೆ ಕುಟುಂಬಸ್ಥರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂತೋಷ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ