ನವದೆಹಲಿ: ಚುನಾವಣಾ ಬಾಂಡ್ (ಎಲೆಕ್ಟೋರಲ್ ಬಾಂಡ್) ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಡಿ.06 ರಂದು ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಹಲವು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾರ್ವತ್ರಿಕ ಚುನಾವಣೆಯ ವರ್ಷವಾಗಿದ್ದು ಈ ನಡುವೆಯೇ ಸರ್ಕಾರ ಅಧಿಸೂಚನೆಯ ಮೂಲಕ ಚುನಾವಣಾ ಬಾಂಡ್ ಗಳ ಮಾರಾಟವನ್ನು 15 ದಿನಗಳ ಕಾಲ ವಿಸ್ತರಿಸಿದೆ, ಸರ್ಕಾರದ ಅಧಿಸೂಚನೆಯ ವಿರುದ್ಧ ಕಾಂಗ್ರೆಸ್ ನಾಯಕರೊಬ್ಬರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ನ್ಯಾ. ಡಿ ವೈ ಚಂದ್ರಚೂಡ್ ಹಾಗೂ ನ್ಯಾ. ಹಿಮಾ ಕೊಹ್ಲಿ, ನ್ಯಾ. ಜೆ.ಬಿ ಪರ್ದಿವಾಲ ಅವರಿರುವ ಪೀಠ, ಜಯ ಠಾಕೂರ್ ಸೇರಿದಂತೆ ಇನ್ನಿತರರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಲಿದೆ. 2018 ರ ಚುನಾವಣಾ ಬಾಂಡ್ ಯೋಜನೆಯ ಸಿಂಧುತ್ವವನ್ನು ಪ್ರಶ್ನಿಸಿ ಈ ಅರ್ಜಿಗಳನ್ನು ಸಲ್ಲಿಸಲಾಗಿದೆ.
ರಾಜಕೀಯ ದೇಣಿಗೆಗಳ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮೂಡಿಸುವ ಸಲುವಾಗಿ ಚುನಾವಣಾ ಬಾಂಡ್ ಗಳನ್ನು ನಗದು ದೇಣಿಗೆಗಳಿಗೆ ಪರ್ಯಾಯವಾಗಿ ಪರಿಚಯಿಸಲಾಗಿತ್ತು. ಸರ್ಕಾರ 2018 ರ ಜ.2 ರಂದು ಚುನಾವಣಾ ಬಾಂಡ್ ಯೋಜನೆಗೆ ಅಧಿಸೂಚನೆ ಪ್ರಕಟಿಸಿತ್ತು.
ಯೋಜನೆಯ ನಿಬಂಧನೆಗಳ ಪ್ರಕಾರ, ಚುನಾವಣಾ ಬಾಂಡ್ ಗಳನ್ನು ಭಾರತದ ಪೌರತ್ವ ಹೊಂದಿರುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಖರೀದಿಸಬಹುದಾಗಿದೆ.
Advertisement