ಮುಂಬೈ: ಮುಂಬರುವ ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ತಮ್ಮ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸದಂತೆ ಮಹಾರಾಷ್ಟ್ರ ನವಿ ನಿರ್ಮಾಣ ಸೇನಾ(ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರು ಉಪಮುಖ್ಯಮಂತ್ರಿ ಹಾಗೂ ಭಾರತೀಯ ಜನತಾ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಅವರಿಗೆ ಭಾನುವಾರ ಪತ್ರ ಬರೆದಿದ್ದಾರೆ.
ಶಾಸಕ ರಮೇಶ್ ಲಟ್ಕೆ ಅವರ ನಿಧನದಿಂದ ತೆರವಾಗಿರುವ ಅಂಧೇರಿ ಪೂರ್ವ ಕ್ಷೇತ್ರಕ್ಕೆ ನವೆಂಬರ್ 3 ರಂದು ಉಪ ಚುನಾವಣೆ ನಡೆಯುತ್ತಿದೆ.
ನಮ್ಮ ಮೇಲಿನ ವಿಶ್ವಾಸದಿಂದ ರಾಜ್ ಠಾಕ್ರೆ ಅವರು ಪತ್ರ ಬರೆದಿದ್ದಾರೆ ಎಂದು ಒಪ್ಪಿಕೊಂಡ ಫಡ್ನವಿಸ್, ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಪಕ್ಷದ ನಾಯಕರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ, ಬಿಜೆಪಿ ನಾಯಕರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ ರಾಜ್ ಠಾಕ್ರೆ, ಮೃತ ಶಾಸಕರ ಮೇಲಿನ ಗೌರವ ತೋರಿಸಲು ನವೆಂಬರ್ 3 ರ ಉಪಚುನಾವಣೆಯಲ್ಲಿ ಎಂಎನ್ಎಸ್ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.
ಅಗಲಿದ ಆತ್ಮಕ್ಕೆ ನಮನ ಸಲ್ಲಿಸಲು ಎಂಎನ್ಎಸ್ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಎಂಎನ್ಎಸ್ ಮುಖ್ಯಸ್ಥರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ರುತುಜಾ ಲಟ್ಕೆ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸದಂತೆ ನಾನು ಪ್ರಾಮಾಣಿಕವಾಗಿ ವಿನಂತಿಸುತ್ತೇನೆ. ದಿವಂಗತ ರಮೇಶ ಲಟ್ಕೆ ಅವರ ಪಯಣ ಮತ್ತು ರಾಜಕೀಯ ಕ್ಷೇತ್ರದ ಬೆಳವಣಿಗೆಯನ್ನು ನಾನು ಕಣ್ಣಾರೆ ನೋಡಿದ್ದೇನೆ ಎಂದು ಫಡ್ನವೀಸ್ಗೆ ಬರೆದ ಪತ್ರದಲ್ಲಿ ರಾಜ್ ಠಾಕ್ರೆ ಮನವಿ ಮಾಡಿದ್ದಾರೆ.
ಅಂಧೇರಿ ಪೂರ್ವದ ಶಾಸಕರಾಗಿದ್ದ ರಮೇಶ್ ಲಟ್ಕೆ ಅವರು ಕಳೆದ ಮೇ ತಿಂಗಳಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಅವರಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದ್ದು, ರಮೇಶ್ ಲಟ್ಕೆ ಅವರ ಪತ್ನಿ ರುತುಜಾ ಲಟ್ಕೆ ಅವರು ಶಿವಸೇನೆ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಪಕ್ಷದಿಂದ ಸ್ಪರ್ಧಿಸಿದ್ದಾರೆ. ರುತುಜಾ ಲಟ್ಕೆ ಅವರಿಗೆ ಕಾಂಗ್ರೆಸ್ ಮತ್ತು ಎನ್ ಸಿಪಿ ಬೆಂಬಲ ನೀಡಿವೆ.
Advertisement