ಚೆನ್ನೈ: ತಮಿಳುನಾಡಿನ ಬಿಜೆಪಿ ಮಹಿಳಾ ನಾಯಕಿಯರನ್ನು ಗುರಿಯಾಗಿಸಿಕೊಂಡು ಡಿಎಂಕೆ ನಾಯಕರೊಬ್ಬರು ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಡಿಎಂಕೆ ಮಹಿಳಾ ವಿಭಾಗದ ಕಾರ್ಯದರ್ಶಿ ಮತ್ತು ಪಕ್ಷದ ಸಂಸದೆ ಕನಿಮೋಳಿ ಅವರು ನಟಿ-ರಾಜಕಾರಣಿ ಖುಷ್ಬು ಸುಂದರ್ ಅವರ ಕ್ಷಮೆಯಾಚಿಸಿದ್ದಾರೆ.
ನಮ್ಮ ಪಕ್ಷ ಅಥವಾ ಅದರ ಮುಖ್ಯಸ್ಥ ಎಂ ಕೆ ಸ್ಟಾಲಿನ್ ಇಂತಹ ಹೇಳಿಕೆಗಳನ್ನು ಸಹಿಸುವುದಿಲ್ಲ ಎಂದು ಡಿಎಂಕೆಯ ಉಪ ಪ್ರಧಾನ ಕಾರ್ಯದರ್ಶಿಯೂ ಆಗಿರುವ ತೂತುಕುಡಿ ಸಂಸದೆ ಕನಿಮೋಳಿ ಅವರು ಹೇಳಿದ್ದಾರೆ.
"ನಾನು ಒಬ್ಬ ಮಹಿಳೆ ಮತ್ತು ಮನುಷ್ಯನಾಗಿ ಕ್ಷಮೆಯಾಚಿಸುತ್ತೇನೆ. ಇದನ್ನು ಯಾರೇ ಮಾಡಿದರೂ ಸಹಿಸಲು ಸಾಧ್ಯವಿಲ್ಲ. ನನ್ನ ಪಕ್ಷದ ನಾಯಕನ ಹೇಳಿಕೆಗೆ ನಾನು ಬಹಿರಂಗವಾಗಿ ಕ್ಷಮೆಯಾಚಿಸುತ್ತೇನೆ. ನನ್ನ ಪಕ್ಷ ಇದನ್ನು ಕ್ಷಮಿಸುವುದಿಲ್ಲ" ಎಂದು ನಟಿ ಖುಷ್ಬು ಟ್ಯಾಗ್ ಮಾಡಿದ ಪೋಸ್ಟ್ಗೆ ಪ್ರತಿಕ್ರಿಯೆಯಾಗಿ ಕನಿಮೊಳಿ ಟ್ವೀಟ್ ಮಾಡಿದ್ದಾರೆ.
ಖುಷ್ಬು ಮತ್ತು ಬಿಜೆಪಿಯ ಇತರ ಮಹಿಳೆಯರನ್ನು ಐಟಂ ಎಂದು ಟೀಕಿಸಿದ್ದ ಡಿಎಂಕೆ ನಾಯಕ ಸೈದಾಯಿ ಸಿದ್ದಿಕ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಖುಷ್ಬು ಗುರುವಾರ ಕನಿಮೊಳಿ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು.
“ಅವರು ಯಾವ ರೀತಿಯ ಸಂಸ್ಕಾರ ಹೊಂದಿದ್ದಾರೆ, ಸಮಾಜದಲ್ಲಿ ಎಂಥಹ ವಿಷದ ವಾತಾವರಣ ಸೃಷ್ಟಿಸಿದ್ದಾರೆ ಎಂಬುದು ಮಹಿಳೆಯರ ವಿರುದ್ಧದ ಪುರುಷರ ನಿಂದನೆಗಳಿಂದ ಗೊತ್ತಾಗುತ್ತದೆ. ಅಂಥವರು ತಮ್ಮನ್ನು ತಾವು ಕರುಣಾನಿಧಿ ಅನುಯಾಯಿಗಳು ಎಂದು ಕರೆದುಕೊಳ್ಳುತ್ತಾರೆ. ಇದಪ ಸಿಎಂ ಸ್ಟಾಲಿನ್ ಅವರ ಕಾಲದ ಹೊಸ ದ್ರಾವಿಡ ಮಾದರಿಯೇ? ಎಂದು ಖುಷ್ಬು ಟ್ವೀಟ್ ಮಾಡಿದ್ದರು.
Advertisement