ಚಂಡೀಗಢ: ಗಾಯಕ ಸಿಧು ಮೂಸೆ ವಾಲಾ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಆರು ಶೂಟರ್ಗಳ ಪೈಕಿ ಕೊನೆಯವನನ್ನು ಇಂದು ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ಮೂವರು ಶೂಟರ್ಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದರೆ, ಪಂಜಾಬ್ ಪೊಲೀಸರು ಅಮೃತಸರ ಬಳಿ ಎನ್ಕೌಂಟರ್ನಲ್ಲಿ ಇಬ್ಬರು ಸಾವನ್ನಪ್ಪಿದ್ದರು.
ಇದೀಗ ಬಂಧಿತನಾಗಿರುವ ದೀಪಕ್ ಅಲಿಯಾಸ್ ಮುಂಡಿ ಆತನ ಇಬ್ಬರು ಸಹಚರರಾದ ಕಪಿಲ್ ಪಂಡಿತ್ ಮತ್ತು ರಾಜಿಂದರ್ ಅವರೊಂದಿಗೆ ಪಶ್ಚಿಮ ಬಂಗಾಳ-ನೇಪಾಳ ಗಡಿಯಲ್ಲಿ ಕೇಂದ್ರೀಯ ಸಂಸ್ಥೆಗಳ ಜಂಟಿ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾನೆ ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಸುದ್ದಿಗೆ ತಿಳಿಸಿದ್ದಾರೆ.
ಪಂಜಾಬ್ನ ಮಾನ್ಸಾ ಜಿಲ್ಲೆಯಲ್ಲಿ ಮೇ 29 ರಂದು ಕಾಂಗ್ರೆಸ್ ಮುಖಂಡರೂ ಆಗಿದ್ದ ಸಿಧು ಮೂಸ್ ವಾಲಾ ಅವರ ಭದ್ರತೆಯನ್ನು ರಾಜ್ಯ ಸರ್ಕಾರವು ಕಡಿತಗೊಳಿಸಿದ ಒಂದು ದಿನದ ನಂತರ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು.
ಈ ವಾರದ ಆರಂಭದಲ್ಲಿ ಮತ್ತೊಂದು ಸಂಬಂಧಿತ ಬೆಳವಣಿಗೆಯಲ್ಲಿ ಮೂಸೆ ವಾಲಾ ಅವರ ತಂದೆ ಬಲ್ಕೂರ್ ಸಿಂಗ್ ಸಿಧು ಅವರಿಗೆ ಇಮೇಲ್ ಮೂಲಕ ಕೊಲೆ ಬೆದರಿಕೆಯನ್ನು ಕಳುಹಿಸಿದ್ದಕ್ಕಾಗಿ ರಾಜಸ್ಥಾನದ ಜೋಧ್ಪುರದ ವ್ಯಕ್ತಿಯನ್ನು ಮಾನ್ಸಾ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಬಂಧಿತ ವ್ಯಕ್ತಿ ಮಹಿಪಾಲ್, ಕೊಲೆಯ ಹಿಂದಿನ ಸೂತ್ರಧಾರ ಕೆನಡಾ ಮೂಲದ ಗೋಲ್ಡಿ ಬ್ರಾರ್ ಜೊತೆಗೆ ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಸೃಷ್ಟಿಸಿದ ಪುಟದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಫಾಲೋವರ್ಸ್ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಬೆದರಿಕೆಯನ್ನು ಕಳುಹಿಸಿದ್ದ ಎಂದು ತಿಳಿಸಿದ್ದಾರೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 1 ರಂದು ಇಬ್ಬರು ಶಂಕಿತ ಆರೋಪಿಗಳಾದ ಕೀನ್ಯಾದಿಂದ ಅನ್ಮೋಲ್ ಬಿಷ್ಣೋಯ್ ಮತ್ತು ಅಜೆರ್ಬೈಜಾನ್ನಲ್ಲಿ ಸಚಿನ್ ಥಾಪನ್ ಅವರನ್ನು ಬಂಧಿಸಲಾಗಿದೆ ಎಂದು ಕೇಂದ್ರ ಸರ್ಕಾರ ದೃಢಪಡಿಸಿದೆ. ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಸ್ಥಳೀಯ ಅಧಿಕಾರಿಗಳು ಈ ಇಬ್ಬರನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ನಾವು ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ. ಆದರೆ ಕಾನೂನು ಪ್ರಕ್ರಿಯೆ ಕುರಿತು ಯಾವುದೇ ಪ್ರತಿಕ್ರಿಯೆಗಳನ್ನು ನೀಡಲಿಲ್ಲ.
Advertisement