ವಿಡಿಯೋ: ಕೇಜ್ರಿವಾಲ್ ರನ್ನು ರಾತ್ರಿ ಊಟಕ್ಕೆ ಆಹ್ವಾನಿಸಿದ ಆಟೋ ಡ್ರೈವರ್; ಮುಂದೇನಾಯ್ತು?
ಅಹಮದಾಬಾದ್: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್ ಬಳಿಕ ಮೋದಿ ತವರೂರು ಗುಜರಾತ್ ಗೆಲ್ಲುವ ಉತ್ಸುಕದಲ್ಲಿದ್ದಾರೆ. ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿರುವ ಗುಜರಾತ್ ನಲ್ಲಿ ಸರಣಿ ಸಭೆ, ಪ್ರಚಾರ ನಡೆಸುತ್ತಿರುವ ಕೇಜ್ರಿವಾಲ್ ಸೋಮವಾರ ಆಟೋರಿಕ್ಷಾ ಚಾಲಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ದೆಹಲಿಯಲ್ಲಿ ತಮ್ಮ ಪಕ್ಷಕ್ಕೆ ಆಟೋ ಚಾಲಕರು ಸಹಾಯ ಮಾಡಿದ ರೀತಿಯಲ್ಲಿ ತಮ್ಮ ಪ್ರಯಾಣಿಕರಲ್ಲಿ ಪಕ್ಷದ ಬಗ್ಗೆ ಪ್ರಚಾರ ಮಾಡುವ ಮೂಲಕ ಗುಜರಾತ್ನಲ್ಲಿ ಎಎಪಿ ಗೆಲ್ಲಲು ಸಹಾಯ ಮಾಡುವಂತೆ ಅರವಿಂದ್ ಕೇಜ್ರಿವಾಲ್ ಅವರು ಮನವಿ ಮಾಡಿದರು. ಕೇಜ್ರಿವಾಲ್ ಜೊತೆ ಸಂವಾದದ ವೇಳೆ ಸಭಿಕರಲ್ಲಿ ಓರ್ವ ಆಟೋ ಡ್ರೈವರ್ ಸಿಎಂ ಕೇಜ್ರಿವಾಲ್ ಅವರಿಗೆ ತಮ್ಮ ಮನೆಗೆ ಬಂದು ಊಟ ಮಾಡುವಂತೆ ವಿನಂತಿಸಿದರು. ಕೇಜ್ರಿವಾಲ್ ಅವರು ತಕ್ಷಣವೇ ಆಹ್ವಾನವನ್ನು ಸ್ವೀಕರಿಸಿದರು.
ಪಕ್ಷದ ಅಧಿಕೃತ ಟ್ವಿಟರ್ ಹ್ಯಾಂಡಲ್ನಿಂದ ಹಂಚಿಕೊಂಡ ವೀಡಿಯೊದಲ್ಲಿ, ಆಟೋ ಚಾಲಕ ಕೇಜ್ರಿವಾಲ್ ಅವರನ್ನು ಊಟಕ್ಕೆ ಆಹ್ವಾನಿಸುತ್ತಿರುವುದನ್ನು ಕಾಣಬಹುದು. ”ನಾನು ನಿಮ್ಮ ದೊಡ್ಡ ಅಭಿಮಾನಿ. ಪಂಜಾಬ್ನ ಆಟೋ ಡ್ರೈವರ್ನ ಮನೆಯಲ್ಲಿ ನೀವು ರಾತ್ರಿ ಊಟ ಮಾಡುತ್ತಿರುವ ವೀಡಿಯೊವನ್ನು ನಾನು ಸಾಮಾಜಿಕ ಮಾಧ್ಯಮದಲ್ಲಿ ನೋಡಿದ್ದೇನೆ. ನೀವು ನಮ್ಮ ಮನೆಗೆ ಊಟಕ್ಕೆ ಬರುತ್ತೀರಾ?” ಎಂದು ಕೇಳುತ್ತಾರೆ. ಕೇಜ್ರಿವಾಲ್ ಅವರ ಕೋರಿಕೆಯನ್ನು ಸ್ವೀಕರಿಸಿ, ಪಕ್ಷದ ಇಬ್ಬರು ಸಹೋದ್ಯೋಗಿಗಳೊಂದಿಗೆ ಭೋಜನಕ್ಕೆ ಬರುವುದಾಗಿ ಹೇಳಿದರು.
“ನಾವು ಎಷ್ಟು ಗಂಟೆಗೆ ಬರಬೇಕು? ನಿಮ್ಮ ಆಟೋದಲ್ಲಿ ನನ್ನನ್ನು ಕರೆದುಕೊಂಡು ಹೋಗಲು ನೀವು ಇಂದು ರಾತ್ರಿ ನನ್ನ ಹೋಟೆಲ್ಗೆ ಬರುತ್ತೀರಾ?” ಎಂದು ಕೇಜ್ರಿವಾಲ್ ಅವರನ್ನು ನಗುತ್ತಾ ಕೇಳುತ್ತಾರೆ. ನಂತರ ರಾತ್ರಿ 8 ಗಂಟೆಗೆ ಭೋಜನವನ್ನು ನಿಗದಿಪಡಿಸಲಾಯಿತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ