ವಾರಣಾಸಿ: ಗ್ಯಾನವಾಪಿ ಮಸೀದಿಯಲ್ಲಿ ಹಿಂದೂ ದೇವತೆಗಳ ಕುರುಹುಗಳಿದ್ದು, ಅಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂಬ ಹಿಂದೂಗಳ ಅರ್ಜಿಯನ್ನು ಜಿಲ್ಲಾ ಕೋರ್ಟ್ ಪುರಸ್ಕರಿಸಿದ್ದು ಇದರಿಂದ ಹಿನ್ನಡೆಯಾಗಿರುವ ಹಿನ್ನೆಲೆಯಲ್ಲಿ ಮಸೀದಿ ಸಮಿತಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲು ತೀರ್ಮಾನಿಸಿದೆ.
ಗ್ಯಾನವಾಪಿ ಮಸೀದಿಯನ್ನು ಪ್ರತಿನಿಧಿಸುತ್ತಿರುವ ಅಂಜುಮನ್ ಇಂತಜಾಮಿಯಾ ಸಮಿತಿ ಇದೀಗ ಜಿಲ್ಲಾ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಲಿದೆ.
ಗ್ಯಾನವಾಪಿ ಮಸೀದಿಯಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಐವರು ಮಹಿಳೆಯರು ಕೋರ್ಟ್ ಗೆ ಮನವಿ ಮಾಡಿದ್ದರು. ಅರ್ಜಿ ವಿಚಾರಣೆಗೆ ಯೋಗ್ಯವೋ ಅಲ್ಲವೋ ಎಂಬ ಬಗ್ಗೆ ಕೋರ್ಟ್ ಇಂದು ಮಹತ್ವದ ಆದೇಶ ನೀಡಿದ್ದು ಹಿಂದೂಗಳ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಹೇಳಿದೆ.
ಹಿಂದೂಗಳ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ ಮಸೀದಿ ಪರ ವಾದ ಮಂಡಿಸಿದ ವಕೀಲರಿಗೆ ಹಿನ್ನಡೆಯುಂಟಾಗಿದೆ. ವಾರಣಾಸಿ ಜಿಲ್ಲಾ ಕೋರ್ಟ್ ಸೆ.22 ಕ್ಕೆ ಅರ್ಜಿ ವಿಚಾರಣೆಯನ್ನು ನಿಗದಿಪಡಿಸಿದೆ.
ಕೋರ್ಟ್ ತೀರ್ಪಿಗೂ ಮುನ್ನ ಮಾತನಾಡಿದ್ದ ಅಡ್ವೊಕೇಟ್ ವಿಷ್ಣು ಶಂಕರ್ ಜೈನ್, 1991ರ ಆರಾಧನಾ ಕಾಯ್ದೆ ನಮ್ಮ ಪರವಾಗಿದೆ. ತೀರ್ಪು ನಮ್ಮ ಪ್ರಕಾರ ಬಂದರೆ, ನಾವು ಕೋರ್ಟ್ ನಲ್ಲಿ ಎಎಸ್ಐ ಸರ್ವೇ, ಶಿವಲಿಂಗದ ಕಾರ್ಬಲ್ ಡೇಟಿಂಗ್ ಗೆ ಅನುಮತಿ ಕೇಳುತ್ತೇವೆ ಎಂದು ತಿಳಿಸಿದ್ದರು.
Advertisement