ಪಾಟ್ನಾ: ಬಿಹಾರ ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ವಿಜಯ್ ಕುಮಾರ್ ಸಿನ್ಹ ರಾಜೀನಾಮೆ ಸಲ್ಲಿಸಿದ್ದಾರೆ. ಅವರ ವಿರುದ್ಧ ವಿಧಾನಸಭೆಯಲ್ಲಿ ಅವಿಶ್ವಾಸ ಮತ ನಿಲುವಳಿ ಮಂಡನೆ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗುತ್ತಿದ್ದಂತೆ ಮಾತನಾಡಿದ ಸ್ಪೀಕರ್, ಈ ಕುರ್ಚಿಯು ಪಂಚ ಪರಮೇಶ್ವರ ದೇವರದ್ದಾಗಿದೆ. ಸ್ಪೀಕರ್ ಖುರ್ಚಿಯ ಮೇಲೆ ಸಂಶಯ ವ್ಯಕ್ತಪಡಿಸಿ ಮತ ಹಾಕಿದರೆ ನೀವು ಎಂತಹ ಸಂದೇಶವನ್ನು ರಾಜ್ಯದ ಜನತೆಗೆ ನೀಡಲು ಹೊರಟಿದ್ದೀರಿ, ಜನರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಆಕ್ರೋಶಭರಿತರಾಗಿ ನೋವಿನಿಂದ ಹೇಳಿದರು.
ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಮಹಾಘಟಬಂಧನ ಮೈತ್ರಿ ಸರ್ಕಾರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವ ಮುನ್ನ ಭಾರತೀಯ ಜನತಾ ಪಕ್ಷದ ವಿಜಯ್ ಕುಮಾರ್ ಸಿನ್ಹ ರಾಜೀನಾಮೆ ಸಲ್ಲಿಸಿದ್ದಾರೆ. ಜೆಡಿಯುನ ನರೇಂದ್ರ ನಾರಾಯಣ್ ಯಾದವ್ ಅವರ ಹೆಸರನ್ನು ಸಿನ್ಹ ಶಿಫಾರಸು ಮಾಡಿದ್ದು ಅವರು ವಿಶ್ವಾಸಮತ ಸಾಬೀತಿನ ಸಮಯದಲ್ಲಿ ಸ್ಪೀಕರ್ ಕುರ್ಚಿಯನ್ನು ಅಲಂಕರಿಸಲಿದ್ದಾರೆ.
ಸದನ ಮಧ್ಯಾಹ್ನ 2 ಗಂಟೆಗೆ ಮುಂದೂಡಿಕೆ: ಈಗ ರಾಜ್ಯದಲ್ಲಿ ಅಧಿಕಾರದಿಂದ ವಂಚಿತವಾಗಿರುವ ಬಿಜೆಪಿ ಶಾಸಕರಾಗಿರುವ ಸಿನ್ಹಾ ಅವರು ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿ ರಾಜೀನಾಮೆ ನೀಡಿ ಸದನದಿಂದ ತರಾತುರಿಯಿಂದ ನಿರ್ಗಮಿಸಿದರು. ಈ ವೇಳೆ ಬಿಜೆಪಿಯ ಬಹುತೇಕ ಶಾಸಕರು ಕೇಸರಿ ಸ್ಕಾರ್ಫ್ ಧರಿಸಿ 'ಭಾರತ್ ಮಾತಾ ಕಿ ಜೈ' ಮತ್ತು 'ಜೈ ಶ್ರೀ ರಾಮ್' ಎಂದು ಘೋಷಣೆಗಳನ್ನು ಕೂಗಿದರು.
ಇದಕ್ಕೂ ಮುನ್ನ, ಸುಮಾರು 20 ನಿಮಿಷಗಳ ಕಾಲ ಮಾತನಾಡಿದ ಸಿನ್ಹಾ, ಹಠಾತ್ ಸರ್ಕಾರ ಬದಲಾವಣೆಯ ನಂತರ ನಾನೇ ರಾಜೀನಾಮೆ ನೀಡಲು ನಿರ್ಧರಿಸಿದೆ. ಆದರೆ ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ ಎಂದು ಬೇಸರದಿಂದ ನುಡಿದರು.
ಅವಿಶ್ವಾಸ ನಿರ್ಣಯ ಮಂಡನೆಗೆ ಪ್ರತಿಕ್ರಿಯಿಸುವುದು ನನ್ನ ಕರ್ತವ್ಯವಾಗಿದೆ. ಕೆಲವು ಸದಸ್ಯರು ನಾನು ಪ್ರಜಾಪ್ರಭುತ್ವ ವಿರೋಧಿ ಮತ್ತು ಸರ್ವಾಧಿಕಾರಿ ಎಂದು ಆರೋಪಿಸಿದರು. ಆದರೆ ನಾನು ಅದನ್ನು ಒಪ್ಪುವುದಿಲ್ಲ ಎಂದರು.
Advertisement