'ಸೆಪ್ಟೆಂಬರ್ 2ರೊಳಗೆ ಶರಣಾಗಿ': ದ್ವೇಷ ಭಾಷಣ ಮಾಡಿದ ಜಿತೇಂದ್ರ ತ್ಯಾಗಿಗೆ ಸುಪ್ರೀಂ ಸೂಚನೆ

ಹರಿದ್ವಾರದ ಧರ್ಮ ಸಂಸದ್ ನಲ್ಲಿ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣ ಪ್ರಕರಣದ ಆರೋಪಿ ಜಿತೇಂದ್ರ ನಾರಾಯಣ ಸಿಂಗ್ ತ್ಯಾಗಿ ಅಲಿಯಾಸ್ ವಾಸಿಂ ರಿಜ್ವಿಗೆ ಸೆಪ್ಟೆಂಬರ್...
ಜಿತೇಂದ್ರ ತ್ಯಾಗಿ
ಜಿತೇಂದ್ರ ತ್ಯಾಗಿ

ನವದೆಹಲಿ: ಹರಿದ್ವಾರದ ಧರ್ಮ ಸಂಸದ್ ನಲ್ಲಿ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣ ಪ್ರಕರಣದ ಆರೋಪಿ ಜಿತೇಂದ್ರ ನಾರಾಯಣ ಸಿಂಗ್ ತ್ಯಾಗಿ ಅಲಿಯಾಸ್ ವಾಸಿಂ ರಿಜ್ವಿಗೆ ಸೆಪ್ಟೆಂಬರ್ 2 ರೊಳಗೆ ಶರಣಾಗುವಂತೆ ಸುಪ್ರೀಂ ಕೋರ್ಟ್ ಸೋಮವಾರ ಸೂಚಿಸಿದೆ.

ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಬಿವಿ ನಾಗರತ್ನ ಅವರ ಪೀಠ, ಸೆಪ್ಟೆಂಬರ್ 2 ರೊಳಗೆ ಶರಣಾಗುವಂತೆ ತ್ಯಾಗಿಗೆ ಸೂಚಿಸಿ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಿದೆ.

“ವಾಪಸ್ ಹೋಗಿ ಶರಣಾಗಿ, ವೈದ್ಯಕೀಯ ಆಧಾರದ ಮೇಲೆ ನೀವು ಜಾಮೀನಿನ ಮೇಲೆ ಮುಂದುವರಿಯಲು ಸಾಧ್ಯವಿಲ್ಲ. ನೀವು ಮುದುಕನಲ್ಲ ಮತ್ತು ನಿಮಗೆ ಕೇವಲ 51 ವರ್ಷ. ಶುಕ್ರವಾರ ಅಥವಾ ಶನಿವಾರದೊಳಗೆ ನೀವು ಶರಣಾಗುತ್ತೀರಿ. ನಾವು ಅದನ್ನು ಮುಂದಿನ ಶುಕ್ರವಾರ ವಿಚಾರಣೆಗೆ ತೆಗೆದುಕೊಳ್ಳುತ್ತೇವೆ ಎಂದು ನ್ಯಾಯಮೂರ್ತಿ ಅಜಯ್ ರಸ್ತೋಗಿ, ಆರೋಪಿಗೆ ಹೇಳಿದ್ದಾರೆ.

ಉತ್ತರಾಖಂಡ ಪೊಲೀಸರು ಐಪಿಸಿ ಸೆಕ್ಷನ್ 153 ಎ (ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು ಸೆಕ್ಷನ್ 298 ಅಡಿ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ಯಾಗಿಗೆ ಜಾಮೀನು ನೀಡಲು ಉತ್ತರಾಖಂಡ ಹೈಕೋರ್ಟ್‌ ನಿರಾಕರಿಸಿತ್ತು. ಇದನ್ನು ತ್ಯಾಗಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. 

ಕಳೆದ ಮೇನಲ್ಲಿ ಸುಪ್ರೀಂ ಕೋರ್ಟ್ ವೈದ್ಯಕೀಯ ಕಾರಣಗಳಿಗಾಗಿ ತ್ಯಾಗಿಗೆ 3 ತಿಂಗಳ ಮಧ್ಯಂತರ ಜಾಮೀನು ನೀಡಿತ್ತು. ಮುಂದೆ ದ್ವೇಷ ಭಾಷಣ ಮಾಡದಂತೆ ಮತ್ತು ಎಲೆಕ್ಟ್ರಾನಿಕ್ ಅಥವಾ ಡಿಜಿಟಲ್ ಅಥವಾ ಸಾಮಾಜಿಕ ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡದಂತೆ ಷರತ್ತು ವಿಧಿಸಿ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com