ಮುಂಬೈ: ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ಗಡಿ ವಿವಾದವನ್ನು ಪರಿಹರಿಸಲು ಸಹಾಯ ಮಾಡುವಂತೆ ಎನ್ಸಿಪಿ ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಅವರು ಸೋಮವಾರ ಟ್ವಿಟರ್ ಸಿಇಒ ಎಲೋನ್ ಮಸ್ಕ್ ಅವರಿಗೆ ಮನವಿ ಮಾಡಿದ್ದಾರೆ.
ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸುವ ಮೂಲಕ ಎಲೋನ್ ಮಸ್ಕ್ ಅವರು ಗಡಿ ಸಮಸ್ಯೆ ಪರಿಹರಿಸಲು ಸಹಕರಿಸಬೇಕು ಎಂದು ಪಾಟೀಲ್ ಕೇಳಿಕೊಂಡಿದ್ದಾರೆ.
ಎಲೋನ್ ಮಸ್ಕ್ ಸೋಮವಾರ ಮೈಕ್ರೋ-ಬ್ಲಾಗಿಂಗ್ ವೆಬ್ಸೈಟ್ನಲ್ಲಿ ಸಮೀಕ್ಷೆ ನಡೆಸಿ, ತಾವು ಟ್ವಿಟರ್ ಸಿಇಒ ಆಗಿ ಮುಂದುವರಿಯಬೇಕೇ ಅಥವಾ ಕೆಳಗಿಳಿಯಬೇಕೇ ಎಂದು ಕೇಳಿದ್ದರು. ಅಲ್ಲದೆ ಸಮೀಕ್ಷೆಯ ಫಲಿತಾಂಶಕ್ಕೆ ಬದ್ಧರಾಗಿರುತ್ತೇನೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಮಹಾರಾಷ್ಟ್ರದ ಇಬ್ಬರು ಸಚಿವರು, ಸಂಸದರಿಂದ ಕರ್ನಾಟಕ ಗಡಿ ಪ್ರದೇಶಗಳಿಗೆ ಭೇಟಿ
ನಾನು ಟ್ವಿಟ್ಟರ್ ಮುಖ್ಯಸ್ಥನ ಹುದ್ದೆಯಿಂದ ಕೆಳಗಿಳಿಯಬೇಕೆ? ಎಂದು ಎಲಾನ್ ಮಸ್ಕ್ ಪೋಲ್ ಹಾಕಿ ಸಮೀಕ್ಷೆ ನಡೆಸಿದ್ದರು. ಇದಕ್ಕೆ ಶೇಕಡ 57ರಷ್ಟು ಜನ ಹೌದು ನೀವು ಟ್ವಿಟ್ಟರ್ ಮುಖ್ಯಸ್ಥನ ಹುದ್ದೆಯಿಂದ ಕೆಳಗಿಳಿಯಬೇಕು ಎಂದಿದ್ದಾರೆ.
ಈ ಮಧ್ಯೆ ಪಾಟೀಲ್ ಅವರು ಮಸ್ಕ್ ಅವರ ಟ್ವೀಟ್ ಅನ್ನು ಟ್ಯಾಗ್ ಮಾಡಿ, ನೀವು ಟ್ವಿಟರ್ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯುವ ಮೊದಲು ಸಿಎಂ ಬಸವರಾಜ ಬೊಮ್ಮಾಯಿ ಅವರು ಗಡಿಯಲ್ಲಿ ಮತ್ತಷ್ಟು ಉದ್ವಿಗ್ನತೆಯನ್ನು ಹೆಚ್ಚಿಸುವ ಯಾವುದಾದರೂ ಟ್ವೀಟ್ ಮಾಡಿದ್ದಾರೆಯೇ? ಎಂಬುದನ್ನು ತಿಳಿಸಬೇಕು. ಬೊಮ್ಮಾಯಿ ಅವರ ಸಾಮಾಜಿಕ ಮಾಧ್ಯಮ ಖಾತೆಯಿಂದ ನಿಜವಾಗಿಯೂ ಯಾರು ಟ್ವೀಟ್ ಮಾಡಿದ್ದಾರೆ ಎಂಬ ಫಲಿತಾಂಶವನ್ನು ನೀವು ನೀಡಬೇಕು ಎಂದು ಪಾಟೀಲ್ ಎಲೋನ್ ಮಸ್ಕ್ ಅವರಿಗೆ ಕೇಳಿಕೊಂಡಿದ್ದಾರೆ.
ಬೊಮ್ಮಾಯಿ ಅವರು ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ಕುರಿತು ಸರಣಿ ಟ್ವೀಟ್ಗಳನ್ನು ಪೋಸ್ಟ್ ಮಾಡಿದ್ದು, ಗಡಿಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿಗೆ ಕಾರಣವಾಯಿತು ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕರ್ನಾಟಕ ಸಿಎಂ ವಿರುದ್ಧ ದೂರು ನೀಡಿದ್ದರು, ಆದರೆ ಶಾ ಈ ಆರೋಪವನ್ನು ನಿರಾಕರಿಸಿದರು.
ಇತ್ತೀಚೆಗೆ ಅಮಿತ್ ಶಾ ಮತ್ತು ಏಕನಾಥ್ ಶಿಂಧೆ ಅವರೊಂದಿಗಿನ ಸಭೆಯಲ್ಲಿ ಬೊಮ್ಮಾಯಿ ಅವರು ಗಡಿ ವಿವಾದವನ್ನು ಉಲ್ಬಣಗೊಳಿಸುವಂತಹ ಯಾವುದೇ ಟ್ವೀಟ್ ಮಾಡಿಲ್ಲ ಎಂದು ಹೇಳಿದ್ದರು. ಅಲ್ಲದೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯನ್ನು ಯಾರೋ ಹ್ಯಾಕ್ ಮಾಡಿದ್ದಾರೆ ಮತ್ತು ಟ್ವೀಟ್ಗಳನ್ನು ಮಾಡಿದ್ದಾರೆ ಎಂದು ಬೊಮ್ಮಾಯಿ ಹೇಳಿದ್ದರು. ಸಭೆಯ ನಂತರ, ಗೃಹ ಸಚಿವ ಅಮಿತ್ ಶಾ, ಟ್ವೀಟ್ಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುವುದು ಮತ್ತು ಸಂಬಂಧಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದರು.
Advertisement