ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ: ವಿಧಾನಸಭೆಯಲ್ಲಿ ಸಿಎಂ ಏಕನಾಥ್ ಶಿಂಧೆ ನಿರ್ಣಯ ಮಂಡನೆ, ಸರ್ವಾನುಮತದ ಅಂಗೀಕಾರ

ಕರ್ನಾಟಕ ಸರ್ಕಾರ ಜೊತೆಗಿನ ಬೆಳಗಾವಿ ಗಡಿ ವಿವಾದ ಕುರಿತು ಮಹಾರಾಷ್ಟ್ರ ವಿಧಾನಸಭೆ ಮಂಗಳವಾರ ವಿಧಾನಸಭೆಯಲ್ಲಿ ರಾಜ್ಯದ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿತು.
ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ
ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ

ಮುಂಬೈ: ಕರ್ನಾಟಕ ಸರ್ಕಾರ ಜೊತೆಗಿನ ಬೆಳಗಾವಿ ಗಡಿ ವಿವಾದ ಕುರಿತು ಮಹಾರಾಷ್ಟ್ರ ವಿಧಾನಸಭೆ ಮಂಗಳವಾರ ವಿಧಾನಸಭೆಯಲ್ಲಿ ರಾಜ್ಯದ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿತು.

ಗಡಿ ಪ್ರದೇಶಗಳು. ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ಕುರಿತು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದರು. 

ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗೆ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಜಾರಿಗೊಳಿಸಲು ಕರ್ನಾಟಕ ಸರ್ಕಾರಕ್ಕೆ ಕೇಂದ್ರ ಸರ್ಕಾರ ಒತ್ತಾಯಿಸಬೇಕು. ಗಡಿ ಭಾಗದ ಮರಾಠಿ ಜನರ ಸುರಕ್ಷತೆಗೆ ಕರ್ನಾಟಕ ಸರ್ಕಾರಕ್ಕೆ ತಿಳುವಳಿಕೆ ನೀಡಬೇಕು ಎಂದು ಸಿಎಂ ಏಕನಾಥ್ ಶಿಂಧೆ ಮಂಡಿಸಿದ ನಿರ್ಣಯದ ಸಾರಾಂಶವಾಗಿದೆ. 

ಕರ್ನಾಟಕದಲ್ಲಿರುವ 865 ಮರಾಠಿ ಮಾತನಾಡುವ ಹಳ್ಳಿಗಳನ್ನು ರಾಜ್ಯಕ್ಕೆ ಸೇರಿಸುವುದನ್ನು ಕಾನೂನುಬದ್ಧವಾಗಿ ಮುಂದುವರಿಸಲು ನಿರ್ಣಯದಲ್ಲಿ ಪ್ರಸ್ತಾಪಿಸಲಾಯಿತು. ಗಡಿ ಪ್ರದೇಶದಲ್ಲಿ ಮರಾಠಿ ವಿರೋಧಿ ನಿಲುವು ಅನುಸರಿಸುತ್ತಿರುವ ಕರ್ನಾಟಕ ಆಡಳಿತವನ್ನು ನಿರ್ಣಯದಲ್ಲಿ ಖಂಡಿಸಲಾಗಿದೆ. 

ನಿರ್ಣಯದಂತೆ ಗಡಿ ಭಾಗದಲ್ಲಿರುವ ಮರಾಠಿಗರ ಬೆನ್ನಿಗೆ ಮಹಾರಾಷ್ಟ್ರ ಸರ್ಕಾರ ನಿಲ್ಲಲಿದ್ದು, ಈ ಪ್ರದೇಶಗಳು ಮಹಾರಾಷ್ಟ್ರದ ಭಾಗವಾಗುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸಲಿದೆ.

ಕರ್ನಾಟಕದ ಮರಾಠಿ ಮಾತನಾಡುವ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕೆಂದು ಒತ್ತಾಯಿಸಿದ ಹಿಂದಿನ ಮಹಾರಾಷ್ಟ್ರ ವಿಕಾಸ್ ಅಘಾಡಿ (MVA) ನಾಯಕ ಉದ್ಧವ್ ಠಾಕ್ರೆ ವಿರುದ್ಧವೂ ಇಂದು ಸದನದಲ್ಲಿ ವಾಗ್ದಾಳಿ ನಡೆಸಿದರು. 

"ನಮಗೆ ಬೇರೆಯವರಿಂದ ಪಾಠ ಕಲಿಯುವ ಅಗತ್ಯವಿಲ್ಲ. ಗಡಿ ಪ್ರದೇಶದಲ್ಲಿ ವಾಸಿಸುವವರ ಜೊತೆ ನಾವು ದೃಢವಾಗಿ ನಿಂತಿದ್ದೇವೆ. ನಾಳೆ ವಿಧಾನಸಭೆಯಲ್ಲಿ ನಿರ್ಣಯವನ್ನು ಜಾರಿಗೆ ತರುತ್ತಿದ್ದೇವೆ ಎಂದು ಶಿಂಧೆ ನಿನ್ನೆ ಸುದ್ದಿಗಾರರಿಗೆ ಹೇಳಿದ್ದರು. 

ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ: 1960ನೇ ಇಸವಿ ಮೇ ತಿಂಗಳಲ್ಲಿ ಪ್ರಾರಂಭವಾದಾಗಿನಿಂದ, ಬೆಳಗಾವಿ ಸೇರಿದಂತೆ 865 ಗ್ರಾಮಗಳನ್ನು ರಾಜ್ಯಕ್ಕೆ ವಿಲೀನಗೊಳಿಸಬೇಕೆಂದು ಮಹಾರಾಷ್ಟ್ರವು ಪ್ರತಿಪಾದಿಸುತ್ತಾ ಬಂದಿದೆ. ಆದರೆ, ಕರ್ನಾಟಕ ತನ್ನ ಭೂಪ್ರದೇಶವನ್ನು ಬೇರ್ಪಡಿಸಲು ನಿರಾಕರಿಸಿದೆ. ಐತಿಹಾಸಿಕವಾಗಿ, ಬೆಳಗಾವಿಯು ಕನ್ನಡ ಪ್ರದೇಶದ ಒಂದು ಭಾಗವಾಗಿದೆ. ಅನೇಕ ಕನ್ನಡಿಗ ರಾಜವಂಶಗಳು ಅಲ್ಲಿ ಆಳ್ವಿಕೆ ನಡೆಸಿದ್ದಾರೆ. 

1966ರಲ್ಲಿ, ಮಹಾರಾಷ್ಟ್ರದ ಒತ್ತಾಯದ ಮೇರೆಗೆ ಅಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೆಹರ್ ಚಂದ್ ಮಹಾಜನ್ ನೇತೃತ್ವದಲ್ಲಿ ಕೇಂದ್ರವು ಮಹಾಜನ್ ಆಯೋಗವನ್ನು ರಚಿಸಿತು. ಆಯೋಗವು ಬೆಳಗಾವಿ (ಅಂದಿನ ಬೆಳಗಾಂ) ಮೇಲಿನ ಮಹಾರಾಷ್ಟ್ರದ ಹಕ್ಕನ್ನು ತಿರಸ್ಕರಿಸಿತು. ಜಟ್ಟ್, ಅಕ್ಕಲಕೋಟೆ ಮತ್ತು ಸೊಲ್ಲಾಪುರ ಸೇರಿದಂತೆ 247 ಗ್ರಾಮಗಳನ್ನು ಕರ್ನಾಟಕದ ಭಾಗವಾಗಿಸಲು ಶಿಫಾರಸು ಮಾಡಿತು.

ಆಯೋಗವು ನಿಪ್ಪಾಣಿ, ಖಾನಾಪುರ, ಮತ್ತು ನಂದಗಡ ಸೇರಿದಂತೆ 264 ಗ್ರಾಮಗಳು ಮತ್ತು ಸ್ಥಳಗಳನ್ನು ಮಹಾರಾಷ್ಟ್ರದ ಭಾಗವೆಂದು ಘೋಷಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com