'ಸೊಸೈಟಿಯ ಜನರ ಜೊತೆ ಸರಳವಾಗಿ ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದ ಪ್ರಧಾನಿ ಮೋದಿ ತಾಯಿ ಹೀರಾಬೆನ್': ನೆರೆಹೊರೆಯವರ ಕಂಬನಿ

ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಶತಾಯುಷ್ಯವನ್ನು ಕಂಡು ಇಹಲೋಕ ಯಾತ್ರೆ ಮುಗಿಸಿ ಹೋಗಿದ್ದಾರೆ. ಮಗ ನರೇಂದ್ರ ಮೋದಿ ಪ್ರಧಾನಿಯಾಗಿ ದೆಹಲಿಗೆ ಹೋದರೂ ಈ ತಾಯಿ ಮಾತ್ರ ಮಗನ ಜೊತೆ ಹೋಗಿ ಕೂರಲಿಲ್ಲ. 
ತಾಯಿಯ ಜೊತೆ ಬೆಳಗಿನ ಉಪಾಹಾರ ಸವಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)
ತಾಯಿಯ ಜೊತೆ ಬೆಳಗಿನ ಉಪಾಹಾರ ಸವಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಶತಾಯುಷ್ಯವನ್ನು ಕಂಡು ಇಹಲೋಕ ಯಾತ್ರೆ ಮುಗಿಸಿ ಹೋಗಿದ್ದಾರೆ. ಮಗ ನರೇಂದ್ರ ಮೋದಿ ಪ್ರಧಾನಿಯಾಗಿ ದೆಹಲಿಗೆ ಹೋದರೂ ಈ ತಾಯಿ ಮಾತ್ರ ಮಗನ ಜೊತೆ ಹೋಗಿ ಕೂರಲಿಲ್ಲ. 

ತನ್ನ ಇನ್ನೊಬ್ಬ ಮಗ, ಪ್ರಧಾನಿ ಮೋದಿಯವರ ಕಿರಿಯ ಸೋದರ ಪಂಕಜ್ ಮೋದಿಯ ಜೊತೆ ಗುಜರಾತ್ ನ ಗಾಂಧಿನಗರದ ರಾಯ್ಸನ್ ಗ್ರಾಮದಲ್ಲಿ ವೃಂದಾವನ ಬಂಗಲೆ ಎಂಬ ಮನೆಯಲ್ಲಿ ಸರಳವಾಗಿ ಸಾದಾ ಸೀದವಾಗಿ ನೆಲೆಸಿದ್ದರು. ಪ್ರಧಾನಿ ತಾಯಿ ಎಂದು ಯಾವತ್ತೂ ತೋರಿಸಿಕೊಂಡವರು ನಡೆದುಕೊಂಡವರು ಅಲ್ಲ. 

ಹೀರಾಬಾ ಎಂದು ಹಲವರಿಗೆ ಚಿರಪರಿಚಿತರಾಗಿದ್ದ ಹೀರಾಬೆನ್ ನಿನ್ನೆ ಗತಿಸುವಾಗ 99 ವಸಂತಗಳನ್ನು ಪೂರೈಸಿ 100ನೇ ವರ್ಷಾಚರಣೆಯಲ್ಲಿದ್ದರು. ನಾಲ್ಕು ದಿನಗಳ ಹಿಂದೆ ಇದ್ದಕ್ಕಿದ್ದಂತೆ ಅನಾರೋಗ್ಯವುಂಟಾಗಿ ಅಹಮದಾಬಾದ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದರು.

ಹೀರಾಬೆನ್ ಹೇಗಿದ್ದರು: ಹೀರಾಬೆನ್ ಅವರಿಗೆ ಭಾರತೀಯ ಸಂಸ್ಕೃತಿ, ಆಚಾರ-ವಿಚಾರಗಳೆಂದರೆ ಅಚ್ಚುಮೆಚ್ಚು. ನೆರೆಹೊರೆಯಲ್ಲಿ ಉತ್ಸವ, ಹಬ್ಬಹರಿದಿನಗಳಲ್ಲಿ ಪಾಲ್ಗೊಳ್ಳುತ್ತಿದ್ದರಂತೆ. ಎಲ್ಲರೊಂದಿಗೆ ಬೆರೆಯುತ್ತಿದ್ದರಂತೆ. ಅವರ ನೆರೆಮನೆಯಾಕೆ ಕೀರ್ತಿಬೆನ್ ಪಟೇಲ್ ಎಂಬುವವರು, ಇಲ್ಲಿ ಸುಮಾರು 7 ವರ್ಷಗಳಿಂದ ಹೀರಬಾ ನೆಲೆಸಿದ್ದರು. ಸಾಮಾನ್ಯವಾಗಿ ಪ್ರತಿದಿನ ಅವರನ್ನು ಭೇಟಿ ಮಾಡುತ್ತಿದ್ದೆವು.

ಸರಳ, ದಯನೀಯ, ಕರುಣಾಮಯಿ ವ್ಯಕ್ತಿತ್ವ ಅವರದ್ದು. ಇಂದು ನನ್ನ ಸ್ವಂತ ತಾಯಿಯನ್ನು ಕಳೆದುಕೊಂಡಷ್ಟು ದುಃಖ ನನಗಾಗುತ್ತಿದೆ. ನಮ್ಮೆಲ್ಲರನ್ನು ಅವರು ಹರಸಿ ಹಾರೈಸುತ್ತಿದ್ದರು. ಈ ಸೊಸೈಟಿಗೆ ಅವರು ರಾಜಮಾತೆಯ ರೀತಿ ಇರುತ್ತಿದ್ದರು.

ಮತ್ತೊಬ್ಬ ನಿವಾಸಿ ಧರಾಬೆನ್ ಪಟೇಲ್, ಹೀರಾಬಾ ತನ್ನ ಕುಟುಂಬದ ಸದಸ್ಯರಂತೆ ಸೊಸೈಟಿಯಲ್ಲಿ ವಾಸಿಸುವ ಪ್ರತಿಯೊಬ್ಬರೊಂದಿಗೆ ಯಾವಾಗಲೂ ಸಾಮರಸ್ಯದ ಸಂಬಂಧವನ್ನು ಇಟ್ಟುಕೊಂಡಿದ್ದರು ಎನ್ನುತ್ತಾರೆ. 

ಪಕ್ಕದ ಸೊಸೈಟಿಯಲ್ಲಿ ವಾಸಿಸುವ ರಮೇಶ್ ಪ್ರಜಾಪತಿ, ಹೀರಾಬಾ ಪ್ರಧಾನಿ ತಾಯಿಯಾಗಿದ್ದರೂ ಸಾಮಾನ್ಯ ಮನುಷ್ಯರಂತೆ ಬದುಕಿದ್ದರು ಎನ್ನುತ್ತಾರೆ. 

"ಅವರು ಯಾವಾಗಲೂ ಸರಳ ಜೀವನವನ್ನು ನಂಬಿದ್ದರು. ಎಲ್ಲರೊಂದಿಗೆ ಬೆರೆಯುತ್ತಿದ್ದರು. ಎಲ್ಲಾ ಹಬ್ಬಗಳಲ್ಲಿ ಭಾಗವಹಿಸುತ್ತಿದ್ದರು. ಹೀರಾಬಾ ಬಡವರ ಬಗ್ಗೆ ದಯೆ ತೋರುವಂತೆ ನಮ್ಮೆಲ್ಲರನ್ನು ಒತ್ತಾಯಿಸುತ್ತಿದ್ದರು" ಎಂದು ಪ್ರಜಾಪತಿ ಹೇಳಿದರು.

ಕೋಕಿಲಾಬೆನ್ ಪಟೇಲ್ ಹೀರಾಬಾ ಅವರ ಸಾವಿಗೆ ಸಂತಾಪ ಸೂಚಿಸಿದರು, "ಬಾ" ಯಾವಾಗಲೂ ಸರಳ ಜೀವನವನ್ನು ನಡೆಸುತ್ತಿದ್ದರು. ದೀಪಾವಳಿಯ ಸಮಯದಲ್ಲಿ ಅವರನ್ನು ಭೇಟಿಯಾದ ಪ್ರತಿಯೊಬ್ಬರನ್ನು ಆಶೀರ್ವದಿಸುತ್ತಿದ್ದರು.

ಸೊಸೈಟಿಯ ಅಧ್ಯಕ್ಷ ಹಸ್ಮುಖ್ ಪಟೇಲ್, ಹೀರಾಬಾ ಇಲ್ಲಿ ವಾಸಿಸುತ್ತಿದ್ದರು ಎಂಬುದು ಪ್ರತಿಯೊಬ್ಬ ನಿವಾಸಿಗೂ ಹೆಮ್ಮೆಯ ಸಂಗತಿಯಾಗಿದೆ. "ನನಗಷ್ಟೇ ಅಲ್ಲ, ಇಡೀ ಸೊಸೈಟಿ ಇಂದು ಅಪಾರ ದುಃಖದಲ್ಲಿದೆ. ಹೀರಾಬಾ ಅವರೊಂದಿಗೆ ಬದುಕಲು ನಮಗೆ ಅವಕಾಶ ಸಿಕ್ಕಿದ್ದಕ್ಕಾಗಿ ನಾವೆಲ್ಲರೂ ಹೆಮ್ಮೆಪಡುತ್ತೇವೆ. ಅವರು ಯಾವಾಗಲೂ ನಮ್ಮೆಲ್ಲರಿಗೆ ಆಶೀರ್ವಾದ ನೀಡುತ್ತಾರೆ" ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com