ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಕೇಸಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಸತತ 50 ಗಂಟೆಗಳಿಗೂ ಅಧಿಕ ಕಾಲ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿರುವುದನ್ನು ಖಂಡಿಸಿ ಕೈ ನಾಯಕರು ಪ್ರತಿಭಟನೆ ಮಾಡುತ್ತಿದ್ದಾರೆ.
ರಾಜಧಾನಿ ದೆಹಲಿಯಲ್ಲಿ ಕೈ ನಾಯಕರು ಶಕ್ತಿ ಪ್ರದರ್ಶನ ತೋರುತ್ತಿದ್ದಾರೆ. ಗಾಂಧಿ ಕುಟುಂಬ ನೆಮ್ಮದಿಯಿಂದ ಇರಲು ಬಿಡದೆ ಕಿರುಕುಳ ನೀಡುತ್ತಿರುವುದೇ ಇಡಿ ವಿಚಾರಣೆಯ ಹಿಂದಿನ ದುರುದ್ದೇಶವಾಗಿದೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ದೆಹಲಿಯಲ್ಲಿಂದು ಕಾಂಗ್ರೆಸ್ ನಾಯಕರು ತಮ್ಮ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾದರು. ಬಿಜೆಪಿ, ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ದೇಶದ ಮೂಲೆಮೂಲೆಗಳಿಂದ ಕಾಂಗ್ರೆಸ್ ನಾಯಕರು ಬಂದು ಪ್ರತಿಭಟನೆ ಮಾಡುತ್ತಿದ್ದಾರೆ. ಇಂದು ಅಗ್ನಿಪಥ್ ಯೋಜನೆ ವಿರುದ್ಧ, ನಾಳೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮೇಲೆ ಇಡಿ ವಿಚಾರಣೆಯನ್ನು ವಿರೋಧಿಸಿ ಪ್ರತಿಭಟನೆ ಮಾಡಲಿದ್ದೇವೆ ಎಂದರು.
ಕರ್ನಾಟಕದ ಎಂಎಲ್ ಎಗಳು, ಎಂಎಲ್ ಸಿಗಳು, ಹಿರಿಯ ನಾಯಕರು, ಪದಾಧಿಕಾರಿಗಳನ್ನು ಹೈಕಮಾಂಡ್ ಬರಲು ಹೇಳಿದ್ದಾರೆ. ಎಐಸಿಸಿ ಕಚೇರಿಗೆ ಹೋಗಿ ಎಂಎಲ್ಎಗಳು ರಾಷ್ಟ್ರಪತಿ ಅಭ್ಯರ್ಥಿಗೆ ಸಹಿ ಹಾಕುತ್ತೇವೆ ಎಂದರು.
ನ್ಯಾಷನಲ್ ಹೆರಾಲ್ಡ್ ಕೇಸಿನ ವಿಚಾರಣೆ ನಾಲ್ಕೈದು ಗಂಟೆಗಳಲ್ಲಿ ಮಾಡುವ ವಿಚಾರಣೆಯನ್ನು ದಿನಗಟ್ಟಲೆ ಮಾಡಿ ಕಿರುಕುಳ ನೀಡಲಾಗುತ್ತಿದೆ. ಮೊದಲನೆಯದಾಗಿ ಇದೊಂದು ಸುಳ್ಳು ಪ್ರಕರಣ, ಸುಳ್ಳು ಹುಟ್ಟಿರುವುದೇ ಆರ್ ಎಸ್ಎಸ್ ನಿಂದ, ಗೋಗಲ್ಸ್ ಥಿಯರಿಯನ್ನು ಅನುಸರಿಸುವವರು, ತಮ್ಮ ಮೇಲಿನ ಆರೋಪಗಳನ್ನು ತಪ್ಪಿಸಲು ಬಿಜೆಪಿ ನಾಯಕರು ದೇಶದ ಜನರ ದಾರಿತಪ್ಪಿಸಿ ಕಾಂಗ್ರೆಸ್ ನಾಯಕರ ವಿರುದ್ಧ ಆರೋಪ ಮಾಡುತ್ತಿದ್ದಾರೆ, ರಾಹುಲ್ ಗಾಂಧಿಯವರಿಗೆ ಕಿರುಕುಳ ನೀಡುವುದೇ ವಿಚಾರಣೆ ಹಿಂದಿನ ಉದ್ದೇಶವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ದೇಶಕ್ಕೆ ಸೋನಿಯಾ ಗಾಂಧಿಯವರು ಪ್ರಧಾನಿ ಹುದ್ದೆ ತ್ಯಾಗ ಮಾಡಿದವರು, ದೇಶಕ್ಕಾಗಿ ಪತಿಯನ್ನು, ಅತ್ತೆಯನ್ನು ಕಳೆದುಕೊಂಡರು. ರಾಹುಲ್ ಗಾಂಧಿಯವರು ಏನೂ ಹಣ ಮಾಡಿಕೊಂಡಿಲ್ಲ. ಅಂತವರಿಗೆ ಕಿರುಕುಶ ನೀಡುತ್ತಿರುವುದು ಎಷ್ಟು ಸರಿ ಎಂದು ಡಿ ಕೆ ಶಿವಕುಮಾರ್ ಪ್ರಶ್ನಿಸಿದರು.
ಇಡಿ ವಿಚಾರಣೆ ಹೆಸರಿನಲ್ಲಿ ಮಾನಸಿಕ ಕಿರುಕುಳ ನೀಡಲಾಗುತ್ತಿದೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರಿಗೆ ನೈತಿಕ, ಮಾನಸಿಕ ಬೆಂಬಲ ನೀಡಲು ನಾವೆಲ್ಲಾ ಇಲ್ಲಿ ಸೇರಿದ್ದೇವೆ ಎಂದರು.
Advertisement