ಕರ್ನಾಟಕ ಸೇರಿ 14 ರಾಜ್ಯಗಳಲ್ಲಿ ಕೊರೋನಾ ಹೆಚ್ಚಳ; ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಸೂಚನೆ
ನವದೆಹಲಿ: ದೆಹಲಿ, ಮಹಾರಾಷ್ಟ್ರ, ಕೇರಳ, ಕರ್ನಾಟಕ ಮತ್ತು ತೆಲಂಗಾಣ ಸೇರಿದಂತೆ ದೇಶದ 14 ರಾಜ್ಯಗಳಲ್ಲಿ ಕೋವಿಡ್ -19 ಪಾಸಿಟಿವ್ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದ್ದು, ಪಾಸಿಟಿವ್ ಪ್ರಮಾಣ ಸಹ ಹೆಚ್ಚಾಗಿದೆ. ಈ ರಾಜ್ಯಗಳಲ್ಲಿ ಕಡಿಮೆ ಕೋವಿಡ್ ಪರೀಕ್ಷೆ ಮತ್ತು ಸರಾಸರಿಗಿಂತ ಕಡಿಮೆ ಲಸಿಕೆ ಹಾಕಲಾಗುತ್ತಿದೆ ಎಂದಿರುವ ಕೇಂದ್ರ ಆರೋಗ್ಯ ಸಚಿವಾಲಯ, ಕೋವಿಡ್ ಜಾಗರೂಕತೆಯನ್ನು ಹೆಚ್ಚಿಸುವಂತೆ ಮಂಗಳವಾರ ಸೂಚಿಸಿದೆ.
ಇಂದು ನಡೆದ ವರ್ಚುವಲ್ ಪರಿಶೀಲನಾ ಸಭೆಯಲ್ಲಿ, ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು, ದಾಖಲಾದ ಕೋವಿಡ್ -19 ರೋಗಿಗಳ ಸಾಂಕ್ರಾಮಿಕ ರೋಗಶಾಸ್ತ್ರದ ಪ್ರೊಫೈಲ್ ಅನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡುವಂತೆ ಮತ್ತು ಆ ಬಗ್ಗೆ ಕೇಂದ್ರ ಸಚಿವಾಲಯಕ್ಕೆ ವರದಿ ಮಾಡುವಂತೆ ಸಲಹೆ ನೀಡಿದರು ಎಂದು ಪ್ರಕಟಣೆ ತಿಳಿಸಿದೆ.
"ಇದು ರೋಗಿಗಳ ಯಾವುದೇ ಸಾಮಾನ್ಯ ಅಥವಾ ವಿಭಿನ್ನ ಕ್ಲಿನಿಕಲ್ ಪ್ರಸ್ತುತಿಯನ್ನು ಆರಂಭಿಕ ಹಂತದಲ್ಲಿ ಗುರುತಿಸಲು ಸಹಾಯ ಮಾಡುತ್ತದೆ" ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಪ್ರಸ್ತುತ ಕೊರೋನಾ ಹೆಚ್ಚು ವರದಿಯಾಗುತ್ತಿರುವ ರಾಜ್ಯಗಳಲ್ಲಿ ಕೋವಿಡ್ ಲಸಿಕೆಯೆ ಎರಡನೇ ಮತ್ತು ಮುನ್ನೆಚ್ಚರಿಕೆ ಡೋಸ್ ಪಡೆಯುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಗಮನಿಸಿ, ವಿಶೇಷವಾಗಿ ವಯಸ್ಸಾದ ಜನಸಂಖ್ಯೆಗೆ ಮತ್ತು 12 ರಿಂದ 17 ವಯೋಮಾನದವರಿಗೆ ಎರಡನೇ ಡೋಸ್ ಅನ್ನು ತ್ವರಿತವಾಗಿ ನೀಡಬೇಕು ಎಂದು ಕೇಂದ್ರ ಸಲಹೆ ನೀಡಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ