ನವದೆಹಲಿ : ಆರು ತಿಂಗಳ ಹಿಂದೆ ದೆಹಲಿಯಲ್ಲಿ ಪ್ರಿಯಕರನಿಂದ ಭೀಕರವಾಗಿ ಹತ್ಯೆಗೀಡಾದ 27 ವರ್ಷದ ಯುವತಿ ಶ್ರದ್ಧಾ ವಾಕರ್(Shradda Walker) ದೇಹದ ಭಾಗಗಳು ಸಿಕ್ಕಿದರೆ ತಲೆಯ ಭಾಗ ಇನ್ನೂ ದೊರೆತಿಲ್ಲ. ಪ್ರಕರಣವನ್ನು ಮತ್ತಷ್ಟು ಕೆದಕಿದಷ್ಟೂ ಹೊಸ ಹೊಸ ಮಾಹಿತಿಗಳು ಹೊರಬರುತ್ತಿವೆ.
ಇಡೀ ದೇಶವನ್ನೇ ಬೆಚ್ಚಿಬೀಳಿಸುವ ಘಟನೆಯಲ್ಲಿ ಲಿವ್ ಇನ್ ರಿಲೇಷನ್ ಷಿಪ್ ನಲ್ಲಿದ್ದ ಶ್ರದ್ಧಾಳನ್ನು ಭೀಕರವಾಗಿ ಕೊಲೆ ಮಾಡಿ 35 ತುಂಡು ಕತ್ತರಿಸಿ ದಕ್ಷಿಣ ದೆಹಲಿಯ ಅರಣ್ಯ ಪ್ರದೇಶದ ವಿವಿಧ ಸ್ಥಳಗಳಲ್ಲಿ ಎಸೆದಿದ್ದ ಆಫ್ತಾಬ್ ಅಮಿನ್ ಪೂನಾವಾಲನನ್ನು ಪೊಲೀಸರು ಬಂಧಿಸಿ ಈಗಾಗಲೇ ಸ್ಥಳ ಮಹಜರು ನಡೆಸಿದ್ದಾರೆ.
ಮಾನವ ದೇಹಗಳ ಭಾಗಗಳನ್ನು ಒಳಗೊಂಡಿದ್ದ 12 ಬ್ಯಾಗುಗಳನ್ನು ವಶಪಡಿಸಿಕೊಂಡ ಮರುದಿನವೇ ಮತ್ತೆ 10 ಮಾನವ ದೇಹಗಳ ಭಾಗಗಳನ್ನು ಹೊಂದಿದ್ದ 10 ಬ್ಯಾಗುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ ಶ್ರದ್ಧಾಳ ತಲೆಯ ಭಾಗ ಇನ್ನೂ ಸಿಕ್ಕಿಲ್ಲ ಎಂದು ಪೊಲೀಸರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.
ಇದುವರೆಗೆ ಸಿಕ್ಕಿರುವ ದೇಹದ ಭಾಗಗಳು ಅತ್ಯಂತ ಕೊಳೆತ ಸ್ಥಿತಿಯಲ್ಲಿದ್ದು ಮೊದಲ ನೋಟಕ್ಕೆ ಇದು ಮಾನವ ದೇಹದ ಭಾಗಗಳೇ ಅಥವಾ ಬೇರೆ ಯಾವುದಾದರೂ ಪ್ರಾಣಿಗಳ ದೇಹದ ಭಾಗಗಳೇ ಎಂದು ಗುರುತು ಹಿಡಿಯಲು ಸಾಧ್ಯವಾಗದಷ್ಟು ಕೊಳೆತು ಹೋಗಿದೆ ಎಂದು ಪೊಲೀಸರು ಹೇಳಿದ್ದಾರೆ.
ದಕ್ಷಿಣ ದೆಹಲಿಯ ಚತ್ತಾಪುರದ ಅಪೆಕ್ಸ್ ಆಸ್ಪತ್ರೆಯ ವೈದ್ಯರು, ಆಫ್ತಾಬ್ ಅಮೀನ್ ಪೂನಾವಾಲ್ಲಾನನ್ನು(Aaftabh Amin Poonawalla) ಸಹ ಸಂಗಾತಿಯನ್ನು ಕೊಂದು 35 ತುಂಡುಗಳಾಗಿ ಮಾಡಿದ ಹೀನ ಕೃತ್ಯಕ್ಕೆ ಬಂಧಿಸಲಾಗಿದೆ. ಕಳೆದ ಮೇನಲ್ಲಿ ಈತ ತನ್ನ ತೋಳಿನ ಗಾಯಕ್ಕೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಭೇಟಿ ನೀಡಿದ್ದ, ಅದೇ ತಿಂಗಳು ಶ್ರದ್ಧಾಳ ಕೊಲೆಯಾಗಿತ್ತು ಎಂದಿದ್ದಾರೆ.
ಗೆಳತಿ ಶ್ರದ್ಧಾ ವಾಲ್ಕರ್ ದೇಹವನ್ನು ಕತ್ತರಿಸುವಾಗ ಪೂನಾವಾಲ ತೋಳಿನ ಮೇಲೆ ಚಾಕುವಿನಿಂದ ಗಾಯವಾಗಿರಬಹುದು ಎಂದು ತನಿಖೆ ವೇಳೆ ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ. ಆರೋಪಿಯ ಮನೆಯಿಂದ ಸ್ವಲ್ಪ ದೂರದಲ್ಲಿ ಆಸ್ಪತ್ರೆ ಇದೆ. ಮೇ ತಿಂಗಳಲ್ಲಿ ಅಫ್ತಾಬ್ ಬಲ ಮುಂಗೈಗೆ ಗಾಯವಾಗಿ ಬೆಳಗ್ಗೆ ಆಸ್ಪತ್ರೆಗೆ ಬಂದಿದ್ದ ಎಂದು ಡಾ.ಅನಿಲ್ ಕುಮಾರ್ ತಿಳಿಸಿದ್ದಾರೆ.
ಆಳವಾದ ಗಾಯವಾಗಿರಲಿಲ್ಲ. ಗಾಯವು ಹೇಗೆ ತಗುಲಿತು ಎಂದು ಕೇಳಿದಾಗ ಹಣ್ಣುಗಳನ್ನು ಕತ್ತರಿಸುವಾಗ ಎಂದಿದ್ದ. ನನಗೆ ಅನುಮಾನ ಬಂದಿರಲಿಲ್ಲ. ಸಣ್ಣ ಚಾಕುವಿನ ಇರಿತ ಗಾಯವಾಗಿತ್ತು ಎಂದು ವೈದ್ಯರು ಹೇಳಿದ್ದಾರೆ.
ಪೊಲೀಸರು ಎರಡು ದಿನಗಳ ಹಿಂದೆ ಅಫ್ತಾಬ್ ಪೂನಾವಾಲಾ ಜೊತೆ ಇಲ್ಲಿಗೆ ಬಂದಿದ್ದರು. ಅವನಿಗೆ ಚಿಕಿತ್ಸೆ ನೀಡಿದ್ದ ಬಗ್ಗೆ ವಿಚಾರಿಸಿದರು. ಆಗ ಬಂದಿದ್ದಾಗ ಆತನಲ್ಲಿ ಚಡಪಡಿಕೆಯಿತ್ತು ಎನ್ನುತ್ತಾರೆ ವೈದ್ಯ ಅನಿಲ್ ಕುಮಾರ್.
ಇಲ್ಲಿಗೆ ಬಂದಿದ್ದಾಗ ಧೈರ್ಯವಾಗಿ ಆತ್ಮವಿಶ್ವಾಸದಿಂದ ಮಾತನಾಡುತ್ತಿದ್ದ. ಇಂಗ್ಲಿಷಿನಲ್ಲಿ ಮಾತನಾಡಿದ್ದ. ಮುಂಬೈನಿಂದ ಐಟಿ ಕ್ಷೇತ್ರದಲ್ಲಿ ಕೆಲಸ ಹುಡುಕಲು ಬಂದಿರುವುದಾಗಿ ಹೇಳಿದ್ದ ಎನ್ನುತ್ತಾರೆ.
ಶ್ರದ್ಧಾಳ ತಂದೆ ಮೊದಲು ಮುಂಬೈ ಪೊಲೀಸರನ್ನು ಸಂಪರ್ಕಿಸಿದಾಗ ಕ್ರೂರ ಅಪರಾಧ ಬೆಳಕಿಗೆ ಬಂದಿತು, ತನ್ನ ಮಗಳು ದೆಹಲಿಯಲ್ಲಿ ಆಫ್ತಾಬ್ ಜೊತೆ ಲಿವ್ ಇನ್ ರಿಲೇಷನ್ ಷಿಪ್ ನಲ್ಲಿರುವುದು ಆಕೆಯ ತಂದೆಗೆ ಗೊತ್ತಾಗಿದ್ದೇ ಕೊಲೆಯಾದ ನಂತರ. ನವೆಂಬರ್ 8 ರಂದು, ದೆಹಲಿ ಪೊಲೀಸರಿಗೆ ಮಾಹಿತಿ ನೀಡಲಾಯಿತು. ತಂದೆಯ ಹೇಳಿಕೆಯ ಆಧಾರದ ಮೇಲೆ, ಅವರು ಕಾನೂನಿನ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿ ಶ್ರದ್ಧಾಳಿಗೆ ಹುಡುಕಾಟ ಆರಂಭಿಸಿದರು. ನಂತರ ಪೂನಾವಾಲಾನನ್ನು ಬಂಧಿಸಲಾಯಿತು. ನಿರಂತರ ವಿಚಾರಣೆಗೆ ಒಳಪಡಿಸಿದಾಗ, ಆರು ತಿಂಗಳ ಹಿಂದೆ ಮಾಡಿದ ಬರ್ಬರ ಹತ್ಯೆ ವಿಚಾರ ಬೆಳಕಿಗೆ ಬಂತು.
ಶ್ರದ್ಧಾಳ ಹತ್ಯೆಯ ನಂತರ ಆರೋಪಿ ಪೂನಾವಾಲಾ ಮತ್ತೊಬ್ಬ ಮಹಿಳೆಯನ್ನು ಬಂಬಲ್ ಡೇಟಿಂಗ್ ಆಪ್ ಮೂಲಕ ಭೇಟಿಯಾಗಿದ್ದಾನೆ. ಕತ್ತರಿಸಿದ ಶವವನ್ನು ರೆಫ್ರಿಜರೇಟರ್ನಲ್ಲಿ ಸಂಗ್ರಹಿಸಿಟ್ಟು ಚತ್ತರ್ಪುರದ ಅದೇ ಮನೆಗೆ ಕರೆತಂದಿದ್ದಾನೆ ಎಂದು ತನಿಖೆಯ ಗೌಪ್ಯ ಮೂಲಗಳು ತಿಳಿಸಿವೆ.
ಆರೋಪಿ ಏನು ಹೇಳುತ್ತಿದ್ದರೂ ಸಾಕ್ಷ್ಯಾಧಾರಗಳ ಮೂಲಕ ಪರಿಶೀಲಿಸಬೇಕು ಎಂದು ಮೂಲಗಳು ತಿಳಿಸಿವೆ. ಪೂನಾವಾಲಾನ ವಿವರಗಳನ್ನು ಪಡೆಯಲು ದೆಹಲಿ ಪೊಲೀಸರು ಈಗ ಯುಎಸ್ ಪ್ರಧಾನ ಕಚೇರಿಯ ಬಂಬಲ್ ಡೇಟಿಂಗ್ ಅಪ್ಲಿಕೇಶನ್ಗೆ ಬರೆಯುತ್ತಾರೆ, ಅದರ ಮೂಲಕ ಆತ ಡೇಟಿಂಗ್ ಮಾಡುತ್ತಿದ್ದ ಯುವತಿಯರ ಮಾಹಿತಿ ಕಲೆ ಹಾಕುತ್ತಿದ್ದಾರೆ.
Advertisement