ನವದೆಹಲಿ: ಪ್ರಿಯತಮೆಯನ್ನು ಕೊಂದು ತುಂಡರಿಸಿದ ಆಫ್ತಾಬ್ ನಂತಹ ಹಂತಕರು ನಮ್ಮ ದೇಶಕ್ಕೆ ಅಗತ್ಯವಿಲ್ಲ, ಬದಲಿಗೆ ರಾಮ, ಪ್ರದಾನಿ ಮೋದಿಯಂತಹ ವ್ಯಕ್ತಿಗಳು ಬೇಕಾಗಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ದೆಹಲಿ ಎಂಸಿಡಿ ಚುನಾವಣೆ ಹಿನ್ನೆಲೆಯಲ್ಲಿ ಗೊಂಡಾ ಪ್ರದೇಶದಲ್ಲಿ ಇಂದು ಸಂಜೆ ರೋಡ್ ಶೋ ವೇಳೆಯಲ್ಲಿ ಮಾತನಾಡಿದ ಅವರು, ಲವ್ ಜಿಹಾದಿ ವಿರುದ್ಧ ಕಾನೂನು ಮತ್ತು ಏಕರೂಪ ನಾಗರಿಕ ಸಂಹಿತೆ ಅಗತ್ಯವಿದೆ. ಆಫ್ತಬ್ ನಂತಹ ಹಂತಕರನ್ನು ಗಲ್ಲಿಗೇರಿಸಲು ಕಾನೂನಿನ ಅಗತ್ಯವಿದೆ ಎಂದರು.
ಇದೇ ವೇಳೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ ಶರ್ಮಾ, ರಂಗಭೂಮಿ ಚೆನ್ನಾಗಿ ಅಭಿನಯಿಸುತ್ತಾರೆ. ಹಿಂದೂಗಳು ಶತ್ರುಗಳು ಎಂಬಂತೆ ಭಾವಿಸುತ್ತಾರೆ. ಆದರೆ, ಹಿಂದೂಗಳಿಲ್ಲದೆ ಭಾರತ ಅಸ್ತಿತ್ವದಲ್ಲಿರಬಹುದೇ ಎಂದು ಪ್ರಶ್ನಿಸಿದರು.
ಸಿಎಎ ಅನುಷ್ಠಾನ ಸಮಯದಲ್ಲಿ ದೆಹಲಿಯಲ್ಲಿ ನಡೆದ ಗಲಭೆಗಳಿಗೆ ಕೇಜ್ರಿವಾಲ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ ಅವರು, ಈ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement