ದೇಶದ ತಿರುಚಿದ ಇತಿಹಾಸವನ್ನು ತಿದ್ದಿ ಬರೆಯುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಅಮಿತ್ ಶಾ

ದೇಶದ ತಿರುಚಿದ ಇತಿಹಾಸವನ್ನು ತಿದ್ದಿ ಬರೆಯುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಭಾರತೀಯ ಇತಿಹಾಸವನ್ನು ಪುನಃ ಬರೆಯಿರಿ, ನಿಮ್ಮ ಪ್ರಯತ್ನಗಳಿಗೆ ಸರ್ಕಾರವು ಬೆಂಬಲ ನೀಡುತ್ತದೆ.
ಅಮಿತ್ ಶಾ
ಅಮಿತ್ ಶಾ

ನವದೆಹಲಿ: ದೇಶದ ತಿರುಚಿದ ಇತಿಹಾಸವನ್ನು ತಿದ್ದಿ ಬರೆಯುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಭಾರತೀಯ ಇತಿಹಾಸವನ್ನು ಪುನಃ ಬರೆಯಿರಿ, ನಿಮ್ಮ ಪ್ರಯತ್ನಗಳಿಗೆ ಸರ್ಕಾರವು ಬೆಂಬಲ ನೀಡುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇತಿಹಾಸಕಾರರಿಗೆ ಭರವಸೆ ನೀಡಿದ್ದಾರೆ.

ಅಹೋಮ್ ಜನರಲ್ ಲಚಿತ್ ಬರ್ಫುಕನ್ ಅವರ 400ನೇ ಜನ್ಮದಿನಾಚರಣೆಯ ಪ್ರಯುಕ್ತ ಮಾತನಾಡಿದ ಅವರು, ಭಾರತದ ಇತಿಹಾಸದ 30 ಮಹಾನ್ ಸಾಮ್ರಾಜ್ಯಗಳು ಮತ್ತು ಮಾತೃಭೂಮಿಗಾಗಿ ಹೋರಾಡಿದ 300 ಧೀರ ಯೋಧರ ಬಗ್ಗೆ ಬರೆಯಿರಿ, ಇತಿಹಾಸವನ್ನು ಸರಿಯಾಗಿ ಮತ್ತು ವೈಭವಯುತವಾಗಿ ಪ್ರಸ್ತುತಪಡಿಸುವುದನ್ನು ಯಾರು ತಡೆಯುತ್ತಿದ್ದಾರೆಂದು ನಾನು ನಿಮ್ಮನ್ನು ಕೇಳುತ್ತೇನೆ” ಇತಿಹಾಸಕಾರರಿಗೆ ಕರೆ ನೀಡಿದರು.

ಧಾರ್ಮಿಕ ಮತಾಂಧ ಔರಂಗಜೇಬನಿಂದ ಈಶಾನ್ಯ ಭಾರತ ಮಾತ್ರವಲ್ಲದೆ ಆಗ್ನೇಯ ಏಷ್ಯಾವನ್ನು ಲಚಿತ್ ಬರ್ಫುಕನ್ ರಕ್ಷಿಸಿದರು ಎಂದು ಅವರು ಉಲ್ಲೇಖ ಮಾಡಿದರು. ಲಚಿತ್ ಬರ್ಫುಕನ್ ಜೀವನ ಚರಿತ್ರೆ ಕುರಿತಾದ ಸಾಹಿತ್ಯ ಕೃತಿಗಳನ್ನು ಹಿಂದಿ ಸೇರಿದಂತೆ 10 ಭಾರತೀಯ ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರಿಸಲು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರನ್ನು ವಿನಂತಿಸಿದರು.

ತಿರುಚಿದ ಇತಿಹಾಸವನ್ನು ತಿದ್ದಿ ಬರೆದಾಗ ಭಾರತದ ನಿಜವಾದ ಇತಿಹಾಸ ರಚನೆಯಾಗುತ್ತದೆ ಮತ್ತು ಸುಳ್ಳುಗಳು ಕೊನೆಯಾಗುತ್ತವೆ. ದೇಶದ ವೈಭವವನ್ನು ಬೆಂಬಲಿಸುವ ಸರ್ಕಾರ ಕೇಂದ್ರದಲ್ಲಿದ್ದು, ದೇಶದ ಭವ್ಯ ಇತಿಹಾಸ ಮರುಸೃಷ್ಟಿಯ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳಿದರು. ಗತಕಾಲದ ವೈಭವದಿಂದ ಹೆಮ್ಮೆಪಡದ ಮತ್ತು ವೀರರಿಂದ ಸ್ಫೂರ್ತಿ ಪಡೆಯದ ದೇಶವು ಉಜ್ವಲ ಭವಿಷ್ಯ ಮತ್ತು ಉತ್ತಮ ನಾಗರಿಕರನ್ನು ರೂಪಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಇಲ್ಲಿ ಕುಳಿತಿರುವ ಎಲ್ಲಾ ವಿದ್ಯಾರ್ಥಿಗಳು ಮತ್ತು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಲ್ಲಿ ಒಂದು ವಿನಂತಿ. ದೇಶದಲ್ಲಿ 150 ವರ್ಷಗಳ ಕಾಲ ಆಳಿದ 30 ರಾಜವಂಶಗಳು ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ 300 ಗಣ್ಯ ವ್ಯಕ್ತಿಗಳ ಬಗ್ಗೆ ಸಂಶೋಧನೆ ಮಾಡಲು ಪ್ರಯತ್ನಿಸಿ” ಎಂದರು.

ನಾವು ಇದನ್ನು ಮಾಡಿದರೆ, ಭಾರತದ ನಿಜವಾದ ಇತಿಹಾಸವು ಸ್ಥಾಪನೆಯಾಗುತ್ತದೆ ಮತ್ತು ಸುಳ್ಳುಗಳು ಸ್ವಯಂಪ್ರೇರಿತವಾಗಿ ಕೊನೆಗೊಳ್ಳುತ್ತವೆ. ಭಾರತದಲ್ಲಿ, ನಾವು ಈಗ ದೇಶದ ಕೀರ್ತಿಯನ್ನು ಉತ್ತೇಜಿಸುವ ಪ್ರಯತ್ನವನ್ನು ಬೆಂಬಲಿಸುವ ಸರ್ಕಾರವನ್ನು ಹೊಂದಿದ್ದೇವೆ. ಭಾರತದ ಭವ್ಯ ಇತಿಹಾಸ ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com