ಹಿಂದೂ ದೇವತೆಗಳಿಗೆ ಅಗೌರವ: ದೆಹಲಿ ಸಚಿವ ರಾಜೇಂದ್ರ ಪಾಲ್ ವಜಾಗೊಳಿಸುವಂತೆ ಬಿಜೆಪಿ ಆಗ್ರಹ

ಸಾರ್ವಜನಿಕ ಸಾಮೂಹಿಕ ಧಾರ್ಮಿಕ ಮತಾಂತರ ಕಾರ್ಯಕ್ರಮದಲ್ಲಿ ಆಮ್ ಆದ್ಮಿ ಸಚಿವ ರಾಜೇಂದ್ರ ಪಾಲ್ ಗೌತಮ್ ಅವರ ವಿಡಿಯೋ ಕ್ಲಿಪ್ ವೈರಲ್ ಆದ ನಂತರ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ನಡುವೆ ಹೊಸ ಗಲಾಟೆ ಆರಂಭವಾಗಿದೆ.
ರಾಜೇಂದ್ರ ಪಾಲ್
ರಾಜೇಂದ್ರ ಪಾಲ್

ನವದೆಹಲಿ: ಸಾರ್ವಜನಿಕ ಸಾಮೂಹಿಕ ಧಾರ್ಮಿಕ ಮತಾಂತರ ಕಾರ್ಯಕ್ರಮದಲ್ಲಿ ಆಮ್ ಆದ್ಮಿ ಸಚಿವ ರಾಜೇಂದ್ರ ಪಾಲ್ ಗೌತಮ್ ಅವರ ವಿಡಿಯೋ ಕ್ಲಿಪ್ ವೈರಲ್ ಆದ ನಂತರ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ನಡುವೆ ಹೊಸ ಗಲಾಟೆ ಆರಂಭವಾಗಿದೆ. ಕ್ಲಿಪ್‌ನಲ್ಲಿ ಸಾವಿರಾರು ಮಂದಿ ಹಿಂದೂ ದೇವರುಗಳು ವಿರುದ್ಧ ಪ್ರಮಾಣವಚನ ತೆಗೆದುಕೊಳ್ಳುತ್ತಿರುವುದನ್ನು ನೋಡಬಹುದು.

ಧಮ್ಮ ಚಕ್ರ ಪ್ರವರ್ತನ್ ದಿನ್ ಎಂದು ಕರೆಯಲ್ಪಡುವ ಸಾಮೂಹಿಕ ಮತಾಂತರ ಕಾರ್ಯಕ್ರಮವು ಡಾ. ಬಿ.ಆರ್. ಅಂಬೇಡ್ಕರ್ ಅವರು ಅಕ್ಟೋಬರ್ 1956 ರಲ್ಲಿ ಲಕ್ಷಗಟ್ಟಲೆ ಅನುಯಾಯಿಗಳೊಂದಿಗೆ ಭಗವಾನ್ ಬುದ್ಧನ ನಂಬಿಕೆಗೆ ಮತಾಂತರಗೊಂಡಿದ್ದನ್ನು ಗುರುತಿಸುವ ವಾರ್ಷಿಕ ಕಾರ್ಯಕ್ರಮ ಇದಾಗಿದೆ.

ಸಮಾರಂಭದಲ್ಲಿ ಎಎಪಿ ಸಚಿವರು ಸಾವಿರಾರು ಜನರ ನಡುವೆ “ನನಗೆ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಲ್ಲಿ ನಂಬಿಕೆ ಇಲ್ಲ ಅಥವಾ ನಾನು ಅವರನ್ನು ಪೂಜಿಸುವುದಿಲ್ಲ” ಎಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.

ಎಎಪಿ ಸಚಿವರ ಭಾಗವಹಿಸುವಿಕೆಯನ್ನು ಬಿಜೆಪಿ ಖಂಡಿಸಿದ್ದು, ಇದು ಹಿಂದೂ ಧರ್ಮ ಮತ್ತು ಬೌದ್ಧ ಧರ್ಮಕ್ಕೆ ಮಾಡಿದ ಅವಮಾನ ಎಂದು ಬಣ್ಣಿಸಿದೆ. “ಎಎಪಿ ಸಚಿವರು ಗಲಭೆಗಳನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆ. ಸಚಿವರನ್ನು ತಕ್ಷಣವೇ ಪಕ್ಷದಿಂದ ತೆಗೆದುಹಾಕಬೇಕು. ನಾವು ಅವರ ವಿರುದ್ಧ ದೂರು ಸಲ್ಲಿಸುತ್ತಿದ್ದೇವೆ” ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ ಒತ್ತಾಯಿಸಿದ್ದಾರೆ.

ಇನ್ನು ಗೌತಮ್ ಅವರು ಸಾವಿರಾರು ಜನರ ಸಮ್ಮುಖದಲ್ಲಿ ಹಿಂದೂ ದೇವತೆಗಳಿಗೆ 'ಅಗೌರವ' ತೋರಿಸಿದ್ದು, ದೆಹಲಿ ಸಿಎಂ ಕೇಜ್ರಿವಾಲ್ ಅವರು ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಆಗ್ರಹಿಸಿದ್ದಾರೆ.

ಬಿಜೆಪಿಯ ದೆಹಲಿ ಘಟಕವು ವೀಡಿಯೊವನ್ನು ಟ್ವೀಟ್ ಮಾಡಿದ್ದು, ಆಪ್ ಸಚಿವರು ಹಿಂದೂಗಳ ವಿರುದ್ಧ ವಿಷವನ್ನು ಉಗುಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

“ಕೇಜ್ರಿವಾಲ್ ಸಚಿವರು ಹಿಂದೂಗಳ ವಿರುದ್ಧ ಹೇಗೆ ವಿಷ ಉಗುಳುತ್ತಿದ್ದಾರೆ ಎಂಬುದನ್ನು ನೋಡಿ. ಚುನಾವಣಾ ಹಿಂದೂ ಕೇಜ್ರಿವಾಲ್ ಮತ್ತು ಎಎಪಿಯ ಹಿಂದೂ ವಿರೋಧಿ ಮುಖವು ಎಲ್ಲರ ಮುಂದೆ ಬಂದಿದೆ. ಹಿಂದೂ ವಿರೋಧಿ ಎಎಪಿಗೆ ಸಾರ್ವಜನಿಕರು ಶೀಘ್ರದಲ್ಲೇ ತಕ್ಕ ಉತ್ತರ ನೀಡುತ್ತಾರೆ, ಕೇಜ್ರಿವಾಲ್ ನಿಮಗೆ ನಾಚಿಕೆಯಾಗಬೇಕು. ,” ಎಂದು ಟ್ವೀಟ್ ಮಾಡಿದೆ.

ದೆಹಲಿ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ರಾಜೇಂದ್ರ ಪಾಲ್ ಗೌತಮ್ ಬಿಜೆಪಿಗೆ ಸಾಂವಿಧಾನಿಕ ಹಕ್ಕುಗಳನ್ನು ನೆನಪಿಸುವ ಮೂಲಕ ತಿರುಗೇಟು ನೀಡಿದ್ದಾರೆ. “ಬಿಜೆಪಿ ದೇಶ ವಿರೋಧಿ, ನನಗೆ ಬೌದ್ಧ ಧರ್ಮದಲ್ಲಿ ನಂಬಿಕೆ ಇದೆ, ಯಾರಿಗಾದರೂ ಯಾಕೆ ತೊಂದರೆ? ಅವರು ದೂರು ನೀಡಲಿ. ಯಾವುದೇ ಧರ್ಮವನ್ನು ಅನುಸರಿಸಲು ಸಂವಿಧಾನವು ನಮಗೆ ಸ್ವಾತಂತ್ರ್ಯ ನೀಡಿದೆ. ಬಿಜೆಪಿಗೆ ಎಎಪಿಯ ಭಯವಿದೆ. ಅವರು ನಮ್ಮ ವಿರುದ್ಧ ಕೇವಲ ನಕಲಿ ಪ್ರಕರಣಗಳನ್ನು ದಾಖಲಿಸಬಹುದು” ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com