ಮುಂಬೈ: ಪಕ್ಷದ ಚಿನ್ಹೆಗಾಗಿ ಗುದ್ದಾಡುತ್ತಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಭಾರೀ ನಿರಾಸೆಯಾಗಿದೆ. ಮುಂದಿನ ಸೂಚನೆ ಬರುವವರೆಗೂ ಶಿವಸೇನೆಯ ಯಾವುದೇ ಬಣಗಳು ಪಕ್ಷದ ‘ಬಿಲ್ಲು ಮತ್ತು ಬಾಣ’ ಚಿನ್ಹೆ ಬಳಸುವಂತಿಲ್ಲ ಎಂದು ಚುನಾವಣಾ ಆಯೋಗ ಶನಿವಾರ ಘೋಷಿಸಿದೆ.
ಉದ್ಧವ್ ಠಾಕ್ರೆ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಆ ಸ್ಥಾನಕ್ಕೇರಿದ ಏಕನಾಥ್ ಶಿಂಧೆ ಅವರು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿದ ನಾಲ್ಕು ತಿಂಗಳ ನಂತರ ಈ ನಿರ್ಧಾರ ಬಂದಿದೆ.
ಶಿವಸೇನಾ ಚಿಹ್ನೆಗೆ ಚುನಾವಣಾ ಆಯೋಗ ತಡೆ ನೀಡಿರುವುದರಿಂದ, ಮುಂಬೈನ ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಉದ್ಧವ್ ಠಾಕ್ರೆ ಬಣ ಮತ್ತು ಶಿಂಧೆ ಬಣ ಈಗ ಬೇರೆ ಹೆಸರು ಮತ್ತು ಚಿಹ್ನೆಯನ್ನು ಬಳಸಬೇಕಾಗುತ್ತದೆ.
ತನ್ನ ಮಧ್ಯಂತರ ಆದೇಶದಲ್ಲಿ, ಮುಂಬರುವ ಚುನಾವಣೆಗಳಿಗೆ ಎರಡೂ ಬಣಗಳು ಹೊಸ ಹೆಸರುಗಳನ್ನು ಆಯ್ಕೆ ಮಾಡಬಹುದು ಮತ್ತು ಚಿಹ್ನೆಗಳನ್ನು ಹಂಚಲಾಗುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ.
ಈ ವಾರದ ದೊಡ್ಡ ದಸರಾ ಸಭೆಯಲ್ಲಿ ಏಕನಾಥ್ ಶಿಂಧೆ ಮಾತನಾಡುತ್ತಾ, ನಿಮಗೆ ಅಲ್ಲಿ ನಿಂತು ಮಾತನಾಡಲು ನೈತಿಕ ಹಕ್ಕಿದೆಯೇ? ನೀವು ನಿಮ್ಮ ವೈಯಕ್ತಿಕ ಕಾರಣಕ್ಕಾಗಿ ಶಿವಸೈನಿಕರನ್ನು ಬಳಸಿಕೊಂಡಿದ್ದೀರಿ ಮತ್ತು ಕಾಂಗ್ರೆಸ್ ಮತ್ತು ಎನ್ಸಿಪಿಯೊಂದಿಗೆ ಮುಂದುವರೆದಿರಿ … ಬಾಳಾಸಾಹೇಬ್ ಠಾಕ್ರೆ ಅವರು ರಿಮೋಟ್ ಕಂಟ್ರೋಲ್ ಮೇಲೆ ಸರ್ಕಾರ ನಡೆಸುತ್ತಿದ್ದರು. ನೀವು ಈ ರಿಮೋಟ್ ಕಂಟ್ರೋಲ್ ಅನ್ನು NCP ಗೆ ನೀಡಿದಿರಿ ಎಂದರು.
ಶಿವಾಜಿ ಪಾರ್ಕ್ನ ಸಾಂಪ್ರದಾಯಿಕ ಸ್ಥಳದಲ್ಲಿ ಮತ್ತೊಂದು ರ್ಯಾಲಿ ನಡೆಸಿದ ಉದ್ಧವ್ ಠಾಕ್ರೆ, ದುರಾಸೆಯಿಂದ ಪಕ್ಷವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವ ಶಿಂಧೆ ದೇಶದ್ರೋಹಿ ಎಂದು ಆರೋಪಿಸಿದರು.
Advertisement