ಗುರುಗ್ರಾಮ: ಕಳೆದ ವಾರ ಗುರುಗ್ರಾಮ್ನ ಮನೆಯೊಂದರಲ್ಲಿ ಪಟಾಕಿ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮೂವರು ಶುಕ್ರವಾರ ಸಾವನ್ನಪ್ಪಿದ್ದು, ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 6 ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಐದು ದಿನಗಳ ಹಿಂದೆ ನಖ್ರೋಲಾ ಗ್ರಾಮದ ಮನೆಯೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೂವರು ಮೃತಪಟ್ಟಿದ್ದರು ಮತ್ತು ಮೂವರು ಗಾಯಗೊಂಡಿದ್ದರು. ಗಾಯಾಳುಗಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದರೊಂದಿಗೆ, ಅಕ್ಟೋಬರ್ 12 ರ ಸ್ಫೋಟದಲ್ಲಿ ಗಾಯಗೊಂಡ ಎಲ್ಲಾ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳಾದ ತನುಜ್ (14) ಮತ್ತು ವಿಷ್ಣು ಕಾಂತ್ (40) ಶುಕ್ರವಾರ ಬೆಳಗ್ಗೆ ದೆಹಲಿಯ ಆಸ್ಪತ್ರೆಯಲ್ಲಿ ನಿಧನರಾದರು ಮತ್ತು ಸತೀಶ್ (40) ಎಂಬುವವರು ಬುಧವಾರ ರಾತ್ರಿಯೇ ನಿಧನರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದಕ್ಕೂ ಮೊದಲು ಮನೆ ಮಾಲೀಕ ಭಗವಾನ್ ದಾಸ್ ಅಲಿಯಾಸ್ ಕಲಾ (40), ಅವರ ಮಗ ಮನೀಶ್ (20) ಮತ್ತು ಮಗಳು ಛಾವಿ (10) ಸಾವನ್ನಪ್ಪಿದ್ದರು.
ಅಕ್ಟೋಬರ್ 12 ರಂದು ಮಧ್ಯಾಹ್ನ ಮನೆಯಲ್ಲಿ ಸಂಭವಿಸಿದ ಭಾರೀ ಸ್ಫೋಟದ ನಂತರ ಒಂದೇ ಕುಟುಂಬದ ನಾಲ್ವರು ಸದಸ್ಯರು ಮತ್ತು ಅವರ ಸಂಬಂಧಿ ಮತ್ತು ಅವರ ಚಾಲಕ ಸೇರಿದಂತೆ ಆರು ಜನ ಮೃತಪಟ್ಟಿದ್ದಾರೆ.
ಈ ಸಂಬಂಧ ಮನೆ ಮಾಲೀಕ ದಾಸ್ ವಿರುದ್ಧ ಖೇರ್ಕಿ ದೌಲಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
Advertisement