ಸೇನಾ vs ಸೇನಾ: ವಿಧಾನ ಪರಿಷತ್ ಗೆ ಠಾಕ್ರೆ ಶಿಫಾರಸು ಮಾಡಿದ್ದ 12 ಹೆಸರುಗಳನ್ನು ಹಿಪಂಡೆಯುವಂತೆ ಶಿಂಧೆ ಪತ್ರ

ರಾಜ್ಯ ವಿಧಾನ ಪರಿಷತ್ತಿನ ಖಾಲಿ ಇರುವ ಸ್ಥಾನಗಳಿಗೆ ಹಿಂದಿನ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಶಿಫಾರಸು ಮಾಡಿದ್ದ 12 ಹೆಸರುಗಳನ್ನು ಹಿಂಪಡೆಯುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ...
ದೇವೇಂದ್ರ ಫಡ್ನವೀಸ್, ಏಕನಾಥ್ ಶಿಂಧೆ
ದೇವೇಂದ್ರ ಫಡ್ನವೀಸ್, ಏಕನಾಥ್ ಶಿಂಧೆ

ಮುಂಬೈ: ರಾಜ್ಯ ವಿಧಾನ ಪರಿಷತ್ತಿನ ಖಾಲಿ ಇರುವ ಸ್ಥಾನಗಳಿಗೆ ಹಿಂದಿನ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಶಿಫಾರಸು ಮಾಡಿದ್ದ 12 ಹೆಸರುಗಳನ್ನು ಹಿಂಪಡೆಯುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿಗೆ ಅವರಿಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿನ ರಾಜಕೀಯ ನಾಯಕತ್ವ ಬದಲಾವಣೆಯನ್ನು ಉಲ್ಲೇಖಿಸಿ ರಾಜ್ಯಪಾಲರ ಕೋಟಾದಿಂದ ಮಹಾರಾಷ್ಟ್ರ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಲು ಠಾಕ್ರೆ ಸರ್ಕಾರ ಪ್ರಸ್ತಾಪಿಸಿದ್ದ 12 ಹೆಸರುಗಳನ್ನು ಹಿಂಪಡೆಯಲು ಏಕನಾಥ್ ಶಿಂಧೆ ಕೋರಿದ್ದಾರೆ ಎಂದು ತಿಳಿದುಬಂದಿದೆ. ಶಿಂಧೆ ಅವರು ಶೀಘ್ರದಲ್ಲೇ ರಾಜ್ಯಪಾಲರಿಗೆ ಹೊಸ ಹೆಸರುಗಳ ಪಟ್ಟಿಯನ್ನು ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಠಾಕ್ರೆ ಸರ್ಕಾರವು ನವೆಂಬರ್ 2020 ರಲ್ಲಿ 12 ಹೆಸರುಗಳನ್ನು ಪ್ರಸ್ತಾಪಿಸಿತ್ತು, ಆದಾಗ್ಯೂ, ಗವರ್ನರ್ ಕೊಶ್ಯಾರಿ ಅವರು ನಾಮನಿರ್ದೇಶನಗಳ ನಿರ್ಧಾರವನ್ನು ಬಾಕಿ ಇರಿಸಿದ್ದರು.

ಬಾಳಾ ಠಾಕ್ರೆಯವರ ಮೂಲ ಶಿವಸೇನೆ ಎಂದು ಹೇಳಿಕೊಳ್ಳುವ ಶಿಂಧೆ ಬಣವು ಶಿವಸೇನೆಯ ಚುನಾವಣಾ ಚಿಹ್ನೆಯಾದ “ಬಿಲ್ಲು ಮತ್ತು ಬಾಣ” ದ ಬಗ್ಗೆ ಠಾಕ್ರೆ ಪಾಳಯದೊಂದಿಗೆ ರಾಜಕೀಯ ಹೋರಾಟ ನಡೆಸುತ್ತಿದೆ.

ಕಳೆದ ತಿಂಗಳು, ಸುಪ್ರೀಂ ಕೋರ್ಟ್ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದ್ದು, ಶಿಂಧೆ ಬಣವು ನಿಜವಾದ ಶಿವಸೇನೆ ಎಂದು ಪರಿಗಣಿಸಿ ಪಕ್ಷದ ಚುನಾವಣಾ ಚಿಹ್ನೆಯನ್ನು ನೀಡಬೇಕೆಂದು ಮಾಡಿದ್ದ ಮನವಿಯ ಮೇಲೆ ಯಾವುದೇ ಆದೇಶಗಳನ್ನು ನೀಡದಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.

ಚುನಾವಣಾ ಆಯೋಗವು ಪಕ್ಷದ ಚಿಹ್ನೆಗಾಗಿ ತಮ್ಮ ಹಕ್ಕನ್ನು ಬೆಂಬಲಿಸುವ ದಾಖಲೆಗಳನ್ನು ಸಲ್ಲಿಸುವಂತೆ ಎರಡೂ ಕಡೆಯವರನ್ನು ಕೇಳಿಕೊಂಡ ನಂತರ ಠಾಕ್ರೆ ಬಣ ಜುಲೈನಲ್ಲಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು, ಅನರ್ಹತೆಯ ನೋಟಿಸ್‌ಗಳನ್ನು ಉನ್ನತ ನ್ಯಾಯಾಲಯವು ನಿರ್ಧರಿಸದ ಹೊರತು ಯಾವ ಬಣ “ನಿಜ”ವಾದ ಶಿವಸೇನೆ ಎಂಬುದನ್ನು ಚುನಾವಣಾ ಸಮಿತಿಯು ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಏಕನಾಥ್ ಶಿಂಧೆ ಅವರು ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದು ಜೂನ್‌ನಲ್ಲಿ ಮಹಾವಿಕಾಸ್ ಅಘಾಡಿ  ಸರ್ಕಾರದ ಪತನಕ್ಕೆ ಕಾರಣವಾದರು. ಅವರು ಜೂನ್ 30 ರಂದು ಬಿಜೆಪಿಯ ಸಹಾಯದಿಂದ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com